ಜೈಲಿನಿಂದ ಬಿಡುಗಡೆಯಾದ ಬಳಿಕ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಮಠಗಳನ್ನು ಸುತ್ತುವುದರಲ್ಲಿ ನಿರತರಾಗಿದ್ದಾರೆ. ನೊಣವಿನಕೆರೆಯ ಕಾಡಸಿದ್ದೇಶ್ವರ ಮಠ, ಗುರುಗುಂಡ ಬ್ರಹ್ಮಶ್ವರ ಮಠ, ಸಿದ್ದಗಂಗಾ ಮಠಗಳನ್ನು ಸುತ್ತಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಮನೋಭಿಲಾಷೆಗಳು ಈಡೇರಿದಾಗ ಮತ್ತು ಸಂಕಷ್ಟಗಳು ನಿವಾರಣೆಯಾದಾಗ ಹೀಗೆ ಮಠಗಳನ್ನು ಸುತ್ತುವುದನ್ನು ಹಿಂದಿನಿಂದಲೂ ರೂಢಿಸಿಕೊಂಡು ಬಂದಿರುವ ಡಿ.ಕೆ.ಶಿವಕುಮಾರ್, ಭಾನುವಾರ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಅಜ್ಜಯ್ಯನವರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದರು.
ಬಳಿಕ ಶಿರಾ ತಾಲೂಕು ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಮಠಕ್ಕೆ ತೆರಳಿ, ನಂಜಾವಧೂತ ಸ್ವಾಮಿಗಳನ್ನು ಭೇಟಿ ಮಾಡಿದರು. ನಂಜಾವಧೂತ ಸ್ವಾಮಿಗಳು, ಡಿ.ಕೆ.ಶಿವಕುಮಾರ್ ಪರವಾಗಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು. ಶಿರಾದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಭಯ ಪಕ್ಷಗಳ ಬಾವುಗಳನ್ನು ಹಿಡಿದು ಸ್ವಾಗತಿಸಿದರು. ನಂಜಾವಧೂತ ಸ್ವಾಮಿಗಳಿಗೆ ನಡೆದಿದ್ದೆಲ್ಲವನ್ನೂ ಡಿಕೆಶಿ ವಿವರಿಸಿದರು ಎಂದು ತಿಳಿದು ಬಂದಿದೆ.
ಸೋಮವಾರ ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಸಿದ್ದಗಂಗಾ ಮಠಕ್ಕೆ ಬಂದರು. ಹಿರಿಯ ಸ್ವಾಮಿಗಳ ಗದ್ದುಗೆಗೆ ಭೇಟಿ ನೀಡಿ, ನಮಸ್ಕರಿಸಿ ನಂತರ ಸಿದ್ದಲಿಂಗಸ್ವಾಮಿಗಳನ್ನು ಭೇಟಿ ಮಾಡಿದರು. ಇಲ್ಲಿ ಕೂಡ ಸ್ವಲ್ಪ ಹೊತ್ತು ಶ್ರೀಗಳೊಂದಿಗೆ ಮಾತುಕತೆ ನಡೆಸಿದರು.
ಡಿ.ಕೆ.ಶಿವಕುಮಾರ್ ಒಂದೇ ದಿನದಲ್ಲಿ ಮೂರು ಮಠಗಳನ್ನು ಸುತ್ತಿ ಮನಶಾಂತಿ, ನೆಮ್ಮದಿಯಿಂದ ಇರಲು ಪ್ರಯತ್ನಿಸಿದರು. ತಿಹಾರ್ ಜೈಲಿನಲ್ಲಿದ್ದಾಗ ಡಿ.ಕೆ.ಶಿ ಅವರಿಗೆ ರಕ್ತದೊತ್ತಡ ಅಧಿಕವಾಗಿತ್ತು. ಅವರೇ ಹೇಳಿದಂತೆ ಬಿ.ಪಿ ಸಮತೋಲನಕ್ಕೆ ಬಂದಿಲ್ಲ. ಹೀಗೆ ಮಠಗಳನ್ನು ಸುತ್ತಿದರೆ ನೆಮ್ಮದಿ ಸಿಗಬಹುದೆಂಬ ನಂಬಿಕೆ ಅವರಲ್ಲಿ ಬಲವಾದಂತಿದೆ.
ಎಲ್ಲಾ ಶ್ರೀಗಳಿಗೂ ಕೃತಜ್ಞತೆಯನ್ನು ಸಲ್ಲಿಸಿರುವ ಡಿ.ಕೆ.ಶಿವಕುಮಾರ್ ನ್ಯಾಯಯುತ ಹಾದಿಯಲ್ಲೇ ನಡೆಯುತ್ತಿದ್ದೇನೆ. ಮಾನಸಿಕ ನೆಮ್ಮದಿಗಾಗಿ ಮಠಗಳನ್ನು ಭೇಟಿ ಮಾಡಿದ್ದೇನೆ. ಹಿಂದೆಯೂ ಹಲವು ಬಾರಿ ಮಠಗಳಿಗೆ ಭೇಟಿ ನೀಡಿದ್ದೇನೆ. ಶ್ರೀಗಳ ಆಶೀರ್ವಾದ ಪಡೆಯುವ ಉದ್ದೇಶದಿಂದ ಬಂದಿದ್ದೆ ಎಂದು ಹೇಳಿದರು.