Homeಮುಖಪುಟಟಿಕೆಟ್ ಬೇಡವೆಂದ ಶ್ಯಾಮನೂರು, ಪಾಠ ಕಲಿಯಬೇಕಾದವರು ಯಾರು?

ಟಿಕೆಟ್ ಬೇಡವೆಂದ ಶ್ಯಾಮನೂರು, ಪಾಠ ಕಲಿಯಬೇಕಾದವರು ಯಾರು?

- Advertisement -
- Advertisement -

ಕೆಪಿಸಿಸಿ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳು ಕಾಲಕಾಲಕ್ಕೆ ಬದಲಾಗುತ್ತಿದ್ದರೂ, ಬದಲಾಗದ ಒಂದು ಹುದ್ದೆ ಇತ್ತು. ಅದು ರಾಜ್ಯ ಖಜಾಂಚಿಯದ್ದು. ದಶಕಗಳ ಕಾಲ ಈ ಹುದ್ದೆಯಲ್ಲಿ ಕೂತಿದ್ದು ಶಾಮನೂರು ಶಿವಶಂಕರಪ್ಪ. ಬಹುಶಃ ಆ ಕಾಲಕ್ಕೆ ಅವರೇ ದುಡ್ಡಿದ್ದ ಧಣಿಯಿದ್ದಿರಬಹುದು. ಇವರು ಕಾಂಗ್ರೆಸ್ಸಿಗೆ ಅಂತಹ ದೊಡ್ಡ ಕೊಡುಗೆ ಏನು ಕೊಟ್ಟರು ಯಾರಿಗೂ ಗೊತ್ತಿಲ್ಲ. ಆದರೆ, ಶಾಮನೂರು ಮಾತ್ರ ದೊಡ್ಡದಾಗುತ್ತಾ ಹೋದರು. ಎರಡೆರಡು ಮೆಡಿಕಲ್ ಕಾಲೇಜುಗಳ ಒಡೆಯರಾದರು. ಒಂದೇ ಮೆಡಿಕಲ್ ಕಾಲೇಜಿನಲ್ಲೂ ಸರ್ಕಾರೀ ಕಾಲೇಜಿಗಿಂತ ಹೆಚ್ಚು ಸೀಟುಗಳನ್ನು ಹೊಂದಿದ್ದರು.

1984ರಿಂದ ಚನ್ನಯ್ಯ ಒಡೆಯರ್  ರಂತಹ ಸಜ್ಜನ ರಾಜಕಾರಣಿ ಮೂರು ಸಾರಿ ಲೋಕಸಭೆ ಸದಸ್ಯರಾಗಿ ಕಾಂಗ್ರೆಸ್ಸಿನಿಂದಲೇ ಗೆದ್ದು ಬಂದಿದ್ದರು. ಯಾವಾಗ ಶಾಮನೂರು ಫ್ಯಾಮಿಲಿಯ ಹಿಡಿತಕ್ಕೆ ದಾವಣಗೆರೆ ಜಿಲ್ಲೆ ಸಂಪೂರ್ಣವಾಗಿ ಹೋಯಿತೋ ಅಲ್ಲಿಂದಾಚೆಗೆ ಒಮ್ಮೆ ಮಾತ್ರ (ಒಂದೇ ವರ್ಷ ಇದ್ದ 12ನೇ ಲೋಕಸಭೆಗೆ) ಶಿವಶಂಕರಪ್ಪನವರು ಆಯ್ಕೆಯಾಗಿದ್ದು ಬಿಟ್ಟರೆ ಉದ್ದಕ್ಕೂ ಬಿಜೆಪಿಯೇ ಗೆಲ್ಲುತ್ತಾ ಬಂದಿದೆ.

ಅವರ ಕಣ್ಣೆದುರಿಗೇ ದಾವಣಗೆರೆಯಲ್ಲಿ ಕಾಂಗ್ರೆಸ್ ಕುಸಿಯುತ್ತಾ ಹೋಯಿತು. ಶಾಮನೂರರಿಗೆ ಕಿಂಚಿತ್ತೂ ಬೇಸರವಾಗಲಿಲ್ಲ. ಏಕೆಂದರೆ ಆ ಜಾಗದಲ್ಲಿ ಬೆಳೆದ ಬಿಜೆಪಿಯ ಜಿಲ್ಲಾ ನೇತಾರರು ಇವರ ಬೀಗರೇ ಆಗಿದ್ದರು. ಅವರ ಬೀಗರೂ ಇವರಂತೆಯೇ ಫ್ಯೂಡಲ್ ನಡವಳಿಕೆಯ, ಜಾತೀವಾದಿಗಳಾಗಿದ್ದರು ಬಿಟ್ಟರೆ ಮುಸ್ಲಿಂ ದ್ವೇಷ ತುಂಬಿಕೊಂಡ ಕೋಮುವಾದಿಗಳಾಗಿರಲಿಲ್ಲ. ಆದರೆ, ಇದೇ ಫ್ಯೂಡಲ್ ನಡವಳಿಕೆ, ದೊರೆಗಳಂತಹ ಬದುಕು ಮತ್ತು ಧೋರಣೆಯು ಸಮಾಜದಲ್ಲಿ ಒಳಿತನ್ನೇನೂ ಹುಟ್ಟಿಹಾಕುವುದಿಲ್ಲವಲ್ಲಾ? ಅಂತಹ ಒಳಿತು ಹುಟ್ಟಿಹಾಕಬಹುದಾದ ಕಮ್ಯುನಿಸ್ಟ್ ಚಳವಳಿಯು ಅರ್ಧ ತನ್ನದೇ ತಪ್ಪಿನಿಂದ, ಇನ್ನರ್ಧ ದಾವಣಗೆರೆ ಧಣಿಗಳ ಹುನ್ನಾರದಿಂದ ಕುಸಿದು ಹೋಗಿತ್ತು.

ಫ್ಯೂಡಲ್ ಜಾತಿವಾದವು ಮಧ್ಯ ಕರ್ನಾಟಕದಲ್ಲಿ ಕೋಮುವಾದಕ್ಕೆ ನೀರೆರೆದು ಪೋಷಿಸಿತು. ಅದು ತಪ್ಪೆಂದಾಗಲೀ, ಅದನ್ನು ತಡೆಗಟ್ಟಬೇಕೆಂದಾಗಲೀ ‘ಧಣಿ’ಗಳಿಗೆ ಎಂದೂ ಅನಿಸಲಿಲ್ಲ. ಬೀಗರಿಬ್ಬರೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಲೇ ಹೋದರು. ಇದಕ್ಕೆ ಪರ್ಯಾಯವಾಗಿ ಬೇರೆ ನಾಯಕತ್ವ ಬೆಳೆಸುವ ಕೆಲಸವನ್ನು ಕಾಂಗ್ರೆಸ್ ಎಂದೂ ಮಾಡಲಿಲ್ಲ. ದಾವಣಗೆರೆ ನಗರದ ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ಶಿವಶಂಕರಪ್ಪನವರಿಗೆ ಟಿಕೆಟ್ ಕೊಟ್ಟು, ಇನ್ನೊಂದರಲ್ಲಿ ಅಲ್ಪಸಂಖ್ಯಾತ ಸಮುದಾಯದ ಸೈಫುಲ್ಲಾ ಅವರಿಗೆ ಬಿ.ಫಾರಂ ನೀಡಿದಾಗ, ಅದನ್ನು ಕಸಿದು ನಾಮಿನೇಷನ್ ಹಾಕದಂತೆ ಮಾಡಿದ ಕುಟುಂಬ ಇದು. ಆಗ ಇವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವ ಬದಲು, ಅವರ ಪರವಾಗಿಯೇ ಕಾಂಗ್ರೆಸ್ ಪಕ್ಷವೂ ನಿಂತಿತು.

ಕರಾವಳಿಯಲ್ಲಿ ಬೆಳೆದ ಕೋಮುವಾದದ ಪ್ರಭಾವವು, ಮಲೆನಾಡಿನಿಂದ ಈಗ ಮಧ್ಯಕರ್ನಾಟಕಕ್ಕೆ ಹರಡಿದೆ. ಬಸವಣ್ಣನ ತತ್ವ ಪಾಲಿಸುತ್ತೇವೆಂದು ಹೇಳುವ ಸಮುದಾಯದ ಅಖಿಲ ಭಾರತ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಶಾಮನೂರರಿಗೆ ಕೋಮುವಾದ ಮತ್ತು ಬಸವ ತತ್ವದ ನಡುವಿನ ವೈರುಧ್ಯ ಅರ್ಥವಾಗಲು ಸಾಧ್ಯವೇ ಇರಲಿಲ್ಲ. ಬದಲಿಗೆ ಲಿಂಗಾಯಿತ ಚಳವಳಿ ಆರಂಭವಾದಾಗ ಅದರ ವಿರುದ್ಧ ಮಾತಾಡಿದ ವೀರಶೈವ ಮಹಾಸಭಾದ ಅಧ್ಯಕ್ಷರು ಅವರೇ ಆಗಿದ್ದರು. ಈ ರೀತಿಯ ಮನೋಭಾವ ಇರುವವರು ಬಿಜೆಪಿಗೆ ವಿರುದ್ಧವಾದ ಒಂದು ವೈಚಾರಿಕ ನೆಲೆಯನ್ನು ಕಟ್ಟುವುದು ಸಾಧ್ಯವೇ ಇಲ್ಲ.

ಯಾವ ಕೊಡುಗೆ ಇಲ್ಲದಿದ್ದರೂ ಹಳೆಯ ಫ್ಯೂಡಲ್ ಕುಟುಂಬಗಳಿಗೆ ಮಣೆ ಹಾಕುತ್ತಾ ಬಂದ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಶಾಮನೂರು ಇಕ್ಕಟ್ಟಿಗೆ ಸಿಕ್ಕಿಸಿದ್ದಾರೆ. ಕಳೆದ ಸಾರಿ, ಮೋದಿ ಅಲೆಯ ಹೊರತಾಗಿಯೂ ಕೇವಲ 17,000 ಮತಗಳ ಅಂತರದಲ್ಲಿ ಮಗ ಶಾಮನೂರು ಸೋತಿದ್ದರು. ವಿಧಾನಸಭಾ ಚುನಾವಣೆಯಲ್ಲೂ ಸೋತು ಕುಳಿತಿರುವ ಮಲ್ಲಿಕಾರ್ಜುನ್ ತಾನು ಸ್ಪರ್ಧಿಸುವ ಕುರಿತು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡುತ್ತಿದ್ದರು. ಅವರಿಗಿಂತ ತಂದೆ ಶಾಮನೂರರಿಗೆ ಕೊಟ್ಟರೆ ಗೆಲುವಿನ ಸಾಧ್ಯತೆ ಹೆಚ್ಚೆಂದು ಬಗೆದ ನಾಯಕರು ಅವರ ಹೆಸರು ಘೋಷಣೆ ಮಾಡಿದರು. ಇದೀಗ ಶಿವಶಂಕರಪ್ಪನವರು ಕುಟುಂಬದಲ್ಲಿ ಯಾರೂ ಸ್ಪರ್ಧಿಸಲ್ಲ. ತಾನು ಸೂಚಿಸುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಟಿಕೆಟ್ ಕೊಡಿ ಎಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆ.ಎಚ್.ಪಟೇಲರ ಸಂಬಂಧಿ, ರೈತ ಹೋರಾಟಗಾರ ತೇಜಸ್ವಿ ಪಟೇಲ್‍ರಿಗೆ ಟಿಕೆಟ್ ಕೊಡಲು ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಬೇರೆ ಯಾರಿಗೇ ಆದರೂ, ಮುತುವರ್ಜಿ ವಹಿಸಿ ಪ್ರಚಾರ ಮಾಡಲು ಶಾಮನೂರು ಫ್ಯಾಮಿಲಿ ಮುಂದಾಗುವುದು ಅಸಾಧ್ಯ.

ಶಾಮನೂರರಂತೆ ಫ್ಯೂಡಲ್ ಕುಟುಂಬದಿಂದ ಬಂದಿರದಿದ್ದರೂ, ಬಹಳ ಉಡಾಫೆಯಿಂದ ವರ್ತಿಸುತ್ತಿದ್ದ ಅಂಬರೀಷ್‍ರ ವಿಚಾರದಲ್ಲೂ ಕಾಂಗ್ರೆಸ್ ಪೆಟ್ಟು ತಿಂದಿತು. 2013ರ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾದ ಅಂಬರೀಷ್ ಜನರ ಮನ್ನಣೆ ಕಳೆದುಕೊಂಡಿದ್ದರು. ಅವರು ಮತ್ತೆ ಗೆಲ್ಲುವುದು ಸಾಧ್ಯವಿಲ್ಲ ಎಂದು ಕಾಂಗ್ರೆಸ್ಸಿಗೂ ಗೊತ್ತಿತ್ತು; ಅಂಬರೀಷ್‍ಗೂ ಗೊತ್ತಿತ್ತು. ಅವರು ಟಿಕೆಟ್ ಬೇಕು ಎಂದು ಅರ್ಜಿಯೂ ಹಾಕಲಿಲ್ಲ; ಕೇಳಲೂ ಇಲ್ಲ. ಆದರೆ, ಅವರ ಮನೆ ಬಾಗಿಲಿಗೇ ಬಿ.ಫಾರಂ ತೆಗೆದುಕೊಂಡು ಹೋಗಿ ಕೊಡಲಾಯಿತು. ಅದನ್ನು ಅಂಬರೀಷ್ ತಿರಸ್ಕರಿಸಿದರು.

ವ್ಯಕ್ತಿಗಳಿಗಿಂತ ಪಕ್ಷ ಮುಖ್ಯ ಎನ್ನುವುದು ಕಾಂಗ್ರೆಸ್ ಪಕ್ಷದಲ್ಲೇ ಇಲ್ಲ. ಅದರ ಅತ್ಯಂತ ತುದಿಯಲ್ಲಿರುವ ಕುಟುಂಬವು ಪಕ್ಷಕ್ಕಿಂತ ಮುಖ್ಯ ಎಂದು ಹಲವು ಸಾರಿ ಸಾಬೀತಾಗಿದೆ. ರಾಹುಲ್‍ಗಾಂಧಿ ರಾಜ್ಯ ಪದಾಧಿಕಾರಿಗಳು ಮತ್ತು ಇತರ ಹಿರಿಯ ನಾಯಕರ ಅಭಿಪ್ರಾಯಗಳಿಗೆ ಹೆಚ್ಚಿನ ಗೌರವ ಕೊಡುತ್ತಾರೆಂದೂ, ಅದೇ ಕಾರಣಕ್ಕೆ ತನ್ನ ಅಭಿಪ್ರಾಯಕ್ಕೆ ವಿರುದ್ಧವಾಗಿ ದೆಹಲಿ ಮತ್ತು ಪ.ಬಂಗಾಳಗಳಲ್ಲಿ ಮೈತ್ರಿಯಾಗಲಿಲ್ಲವೆಂದೂ ಹೇಳಬಹುದು. ಆದರೆ, ಇದು ಎಷ್ಟು ದಿನ ಉಳಿಯುತ್ತದೆ ಕಾದು ನೋಡಬೇಕು.

ಸಂಘಟನಾ ಶಕ್ತಿಯನ್ನು ಕಟ್ಟಿಕೊಳ್ಳದ, ತನ್ನದೇ ಆದ ವೈಚಾರಿಕ ನೆಲೆಯನ್ನು ಪಕ್ಷದಲ್ಲೂ, ಸಮಾಜದಲ್ಲೂ ತರದ ಪಕ್ಷವೊಂದು ಹೇಗೆ ತಾನೇ ದೀರ್ಘಕಾಲ ಉಳಿದುಕೊಂಡೀತು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...