ರಾಷ್ಟ್ರೀಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರು ನಿವೃತ್ತಿಯಾಗಿ ಒಂದು ವಾರ ಕಳೆದರೂ ಕೇಂದ್ರ ಸರ್ಕಾರ ಆ ಹುದ್ದೆಗೆ ಅರ್ಹ ಮುಖ್ಯ ಆಯುಕ್ತರನ್ನು ನೇಮಕ ಮಾಡಲು ಮುಂದಾಗಿಲ್ಲ ಇದರಿಂದ ಮುಖ್ಯಸ್ಥರಿಲ್ಲದ ಆಯೋಗದಲ್ಲಿ ಸಿಬ್ಬಂದಿಯ ಕೊರತೆ ಎದುರಾಗಿದೆ.
ಮಾಹಿತಿ ಹಕ್ಕು ಕಾರ್ಯಕರ್ತರು ಮತ್ತು ಸಾರ್ವಜನಿಕರು ರಾಷ್ಟ್ರೀಯ ಮಾಹಿತಿ ಆಯೋಗದ ಮುಂದೆ ಸಲ್ಲಿಸಿರುವ 34 ಸಾವಿರ ಮನವಿಗಳು ಮತ್ತು ದೂರುಗಳ ಬಾಕಿ ಇದ್ದು ಅವುಗಳನ್ನು ವಿಲೇವಾರಿ ಮಾಡಲು ಯಾರೂ ಇಲ್ಲದಂತೆ ಆಗಿದೆ ಎಂದು ಸೆಟಾರ್ಕ್ ನಾಗರಿಕ ಸಂಘಟೆಯ ಅಧ್ಯಕ್ಷೆ ಸುಧಾ ಭಾರದ್ವಾಜ್ ಹೇಳಿದ್ದಾರೆ.
ರಾಷ್ಟ್ರೀಯ ಮಾಹಿತಿ ಆಯೋಗದಲ್ಲಿ ಮುಖ್ಯ ಮಾಹಿತಿ ಆಯುಕ್ತರು ಸೇರಿ 11 ಮಂದಿ ಆಯುಕ್ತರು ಇರಬೇಕು. ಆದರೆ ಆಯೋಗದಲ್ಲಿ ಕೇವಲ ಐದು ಮಂದಿ ಆಯುಕ್ತರು ಮಾತ್ರ ಇದ್ದು, ಉಳಿದ 6 ಆಯುಕ್ತರ ಹುದ್ದೆಗಳು ಖಾಲಿ ಬಿದ್ದಿವೆ. ಹೀಗಾಗಿ ಯಾವುದೇ ಹೊಸ ಹುದ್ದೆಗಳ ನೇಮಕದ ಗೈರುಹಾಜರಿ ಎದ್ದುಕಾಣುತ್ತಿದೆ ಎಂದು ತಿಳಿಸಿದ್ದಾರೆ.
ಮುಖ್ಯ ಮಾಹಿತಿ ಆಯುಕ್ತ ಸುಧೀರ್ ಭಾರ್ಗವ ಜನವರಿ 11ರಂದು ನಿವೃತ್ತಿ ಹೊಂದಿದರು. ಇದು ಸಹಜ ಮತ್ತು ಸಾಮಾನ್ಯ ನಿವೃತ್ತಿ. ಭಾರ್ಗವ ಅವರಿಗೆ ನಿವೃತ್ತಿ ದಿನ ಗೊತ್ತಾದ ಸಮಯದಿಂದ ಆಯೋಗಕ್ಕೆ ಹೊಸ ಅಧ್ಯಕ್ಷರನ್ನು ನೇಮಕದ ಬಗ್ಗೆ ಚಿಂತನೆ ಮಾಡಿದರು. ಆದರೂ ಕೇಂದ್ರ ಸರ್ಕಾರ ಮುಖ್ಯ ಆಯುಕ್ತರನ್ನು ನೇಮಕ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಆಯೋಗದಲ್ಲಿ ಮುಖ್ಯ ಮಾಹಿತಿ ಆಯುಕ್ತರೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ.
ದೇಶಾದ್ಯಂತ ಖಾಲಿ ಇರುವ ಮಾಹಿತಿ ಆಯುಕ್ತರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅಂಜಲಿ ಭಾರದ್ವಾಜ್ ಮತ್ತು ಲೋಕೇಶ್ ಬಾತ್ರ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2019ರ ಫೆಬ್ರವರಿಯಲ್ಲಿ ಮಾಹಿತಿ ಆಯೋಗದಲ್ಲಿ ಖಾಲಿರುವ ಆಯುಕ್ತರ ಹುದ್ದೆಗಳನ್ನು ವಿಳಂಬ ಮಾಡದೆ ಭರ್ತಿ ಮಾಡಬೇಕು. ನೇಮಕಾತಿ ಪ್ರಕ್ರಿಯೆಯನ್ನು ಒಂದೆರಡು ತಿಮಗಳಲ್ಲಿ ಪೂರ್ಣಗೊಳಿಸಬೇಕೆಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರ ನಾಲ್ಕು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿ ಜಾಹಿರಾತು ನೀಡಿತು. ಆದರೆ ಇದುವರೆಗೂ ಒಂದು ಹುದ್ದೆಯನ್ನು ಭರ್ತಿ ಮಾಡಿಲ್ಲ ಎಂದು ಭಾರದ್ವಾಜ್ ದೂರಿದ್ದಾರೆ.
ಸೆಪ್ಟೆಂಬರ್ 19, 2019ರಂದು ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿದ್ದು ಆಯುಕ್ತರ ಹುದ್ದೆಗಳನ್ನು ಭರ್ತಿ ಮಾಡುವಂತೆ ಮನವಿ ಮಾಡಲಾಗಿದೆ.
ಈ ಸಂಬಂಧ 2019 ಡಿಸೆಂಬರ್ 16ರ ಆದೇಶದಲ್ಲಿ ಸುಪ್ರೀಂಕೊರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿ ಕೂಡಲೇ ಮಾಹಿತಿ ಆಯುಕ್ತರ ನೇಮಕಕ್ಕೆ ಶೋಧನ ಸಮಿತಿ ರಚಿಸುವಂತೆಯೂ ಮತ್ತು ಹೆಸರುಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಮತ್ತು ಮೂರು ತಿಂಗಳೊಳಗೆ ನೇಮಕಾರಿ ಪ್ರಕ್ರಿಯೆಯನ್ನು ಪೂರ್ಣ ಗೊಳಿಸಬೇಕು ಎಂದು ಸೂಚಿಸಿತು. ಆದರೆ ಈವರೆಗೆ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ ಎಂದು ದೂರಲಾಗಿದೆ.
2014 ರಿಂದ ಆಯೋಗದ ಮುಖ್ಯ ಮಾಹಿತಿ ಆಯುಕ್ತರು ನಿವೃತ್ತಿ ಹೊಂದುತ್ತಿದ್ದು 9 ತಿಂಗಳು ಕಳೆದರೂ ಹೊಸ ಮುಖ್ಯ ಮಾಹಿತಿ ಆಯುಕ್ತರನ್ನು ನೇಮಕ ಮಾಡಲು ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಾ ಬಂದಿದೆ. ಸಾರ್ವಜನಿಕರು ನ್ಯಾಯಾಲಯಕ್ಕೆ ಹೋಗಿ ಖಾಲಿ ಹುದ್ದೆಗಳ ನೇಮಕ ಸಂಬಂಧ ಭರ್ತಿ ಮಾಡುವಂತೆ ಒತ್ತಾಯಿಸುತ್ತಿದ್ದರೂ ವಿಳಂಬ ಮಾಡುತ್ತಲೇ ಬರುತ್ತಿದೆ ಎಂದು ಭಾರದ್ವಾಜ್ ಮತ್ತು ಅಮಿತವ್ ಜೋಹ್ರಾ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಮಾಹಿತಿ ಆಯೋಗದಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಕೆಲಸ ಮೇಲೆ ಪರಿಣಾಮ ಬೀರುತ್ತಿದೆ ಎಂದು ಲೋಕೇಶ್ ಬಾತ್ರ ಹೇಳಿದ್ದಾರೆ. ಆಯೋಗದಲ್ಲಿ 34,347 ಪ್ರಕರಣಗಳು ವಿಲೇಯಾಗದೆ ಬಾಕಿ ಉಳಿದಿವೆ ಎಂದು ಜನವರಿ 15ರಂದು ಸಿಐಸಿ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂದು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.
ಭಾರ್ಗವ ನಿವೃತ್ತಿಯಾದ ನಂತರ ಮುಖ್ಯ ಮಾಹಿತಿ ಆಯುಕ್ತರ ಹುದ್ದೆ ಖಾಲಿ ಇದೆ. ಆದರೆ ಕೇಂದ್ರ ಸರ್ಕಾರ ಸಿಐಸಿ ಅವರನ್ನು ನೇಮಕ ಮಾಡುವ ಸಂಬಂಧ ಪಾರದರ್ಶಕತೆಗೆ ಆದ್ಯತೆ ನೀಡುತ್ತಿಲ್ಲ ಮತ್ತು ಮಾಹಿತಿ ಹಕ್ಕು ಕಾಯ್ದೆಯನ್ನು ಕೊಲ್ಲುತ್ತಿದೆ ಎಂದು ಆರ್ಟಿಐ ಕಾರ್ಯಕರ್ತರು ದೂರಿದ್ದಾರೆ.