Homeಮುಖಪುಟಗಟ್ಟಿ ಗಿತ್ತಿಯಾಗಿ ಜೀವಂತವಾಗಿರುವ ಗೌರಿ ಲಂಕೇಶ್ ಹಾಗೂ ಮಂತ್ರಿ ರಾಜಶೇಖರ ಪಾಟೀಲರೂ...

ಗಟ್ಟಿ ಗಿತ್ತಿಯಾಗಿ ಜೀವಂತವಾಗಿರುವ ಗೌರಿ ಲಂಕೇಶ್ ಹಾಗೂ ಮಂತ್ರಿ ರಾಜಶೇಖರ ಪಾಟೀಲರೂ…

- Advertisement -
- Advertisement -

ಬಸವಾದಿ ಶರಣರ ವಚನಗಳ ಓದು ನಮ್ಮನ್ನು ಒಂದು ಕಡೆ ನಿಲ್ಲಿಸಲಾರದು. ಕಾಲಿಗೆ ಚಕ್ರ ಕಟ್ಟಿಕೊಂಡು ಊರೂರು ಅಲೆದು ತತ್ವ ಪ್ರಸಾರ ಮಾಡಲೇಬೇಕು ಎಂಬ ತುಡಿತ ಉಂಟಾಗುತ್ತದೆ. ಜನ ಸಾಮಾನ್ಯರಲ್ಲಿ ಹಬ್ಬಿರುವ ಜಾತಿಯತೆ, ಮೌಢ್ಯ, ಮೇಲು ಕೀಳು ಭಾವನೆಗಳನ್ನು ಶರಣರ ವಚನ ಸಾಹಿತ್ಯದ ಔಷಧದ ಮೂಲಕ ಇಲಾಜು ಮಾಡಲು ಖಂಡಿತ ಸಾಧ್ಯವಿದೆ. ನಮ್ಮ ಸಮಾಜಕ್ಕೆ ಅಂಟಿಕೊಂಡಿರುವ ವೈದಿಕ ವೈರಸ್‍ಗಳು ನಾಶಗೊಳಿಸುವ ಶಕ್ತಿ ವಚನ ಸಾಹಿತ್ಯಕ್ಕೆ ಇದೆ. ಇದನ್ನೆಲ್ಲ ಮನಗಂಡು ಬಸವಾದಿ ಶರಣರ ತತ್ವಗಳನ್ನು ಪಸರಿಸುವ ಕೆಲಸವನ್ನು ಮಾಡಲು ನಾನು ಯಾವತ್ತೂ ಸಿದ್ಧನಾಗಿರುತ್ತೇನೆ.

ಬಸವ ಜಯಂತಿಯ ಸಂದರ್ಭದಲ್ಲಂತೂ ನಾನು ಊರಲ್ಲಿರುವುದು ಸಾಧ್ಯವೆ ಇಲ್ಲ. ಈ ಬಾರಿಯ ಬಸವ ಜಯಂತಿಗೆ ಬಸವನ ಕರ್ಮಭೂಮಿಗೆ ಹತ್ತಿರ ಇರುವ ಹುಮ್ನಾಬಾದಗೆ ಹೋಗುವ ಸಂದರ್ಭ ಒದಗಿ ಬಂತು. ಹುಮ್ನಾಬಾದಗೆ ಸಮೀಪ ಇರುವ ಚಿಟಗುಪ್ಪದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಡೆದ ಕಲ್ಯಾಣ ನಾಡಿನ ಶರಣ ಸಾಹಿತ್ಯ ಪರಿಷತ್ತಿಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಡಾ. ದೇ.ಜ.ಗೌಡರ ಮಾತುಗಳು ನನಗೆ ನೆನಪಾದವು. ಅರಿಕೇಸರಿ ಆಸ್ಥಾನದ ಕವಿ ಪಂಪ ತನ್ನ ಕಾವ್ಯದಲ್ಲಿ “ನೆನೆವುದೆನ್ನ ಮನಂ ಬನವಾಸಿ ದೇಶಮಂ” ಎನ್ನುವಂತೆಯೆ ಡಾ. ದೇ.ಜವರೇಗೌಡರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ “ಬಸವಾದಿ ಶರಣರ ವಚನಗಳನ್ನು ಓದಿದ ಮೇಲೆ ನನಗೆ ಮರು ಹುಟ್ಟಿನ ಬಗೆಗೆ ಯಾವುದೆ ನಂಬಿಕೆಗಳಿಲ್ಲ. ಆದರೆ ಆಕಸ್ಮಿಕವಾಗಿ ಹಾಗೇನಾದರೂ ಇದ್ದರೆ, ನಾನು ಮುಂದಿನ ಜನ್ಮದಲ್ಲಿ ಕಲ್ಯಾಣದ ಪರಿಸರದಲ್ಲಿ ಹುಟ್ಟುವಂತೆ ಮಾಡು ಎಂದು ಕೇಳಿಕೊಳ್ಳುತ್ತೇನೆ. ಮರಿ ದುಂಬಿ ಬೇಡ ಕನಿಷ್ಟ ಪಕ್ಷ ಮರಿ ಹಂದಿಯನ್ನಾಗಿಯಾದರೂ ಈ ಕಲ್ಯಾಣ ನಾಡಿನಲ್ಲಿ ಹುಟ್ಟಿಸು!” ಎಂದು ಸಾರ್ವಜನಿಕ ಸಭೆಯಲ್ಲಿಯೆ ಅವಲತ್ತುಕೊಳ್ಳುತ್ತಾರೆ.

ದೇ.ಜ.ಗೌಡರ ಈ ಮಾತುಗಳನ್ನು ನೆನಪಿಸುತ್ತಲೆ ಬಸವಾದಿ ಶರಣರು ಕಟ್ಟ ಬಯಸಿದ ಸಮಾಜದ ಕುರಿತು ನಾನು ಮುಕ್ತವಾಗಿ ಮನಬಿಚ್ಚಿ ಮಾತನಾಡಿದೆ.
ಗುರು ಉಪದೇಶ ಮಂತ್ರ ವೈದ್ಯ.
ಜಂಗಮ ಉಪದೇಶ ಶಸ್ತ್ರ ವೈದ್ಯ ನೋಡಾ,
ಭವರೋಗ ಕಳೆವ ಪರಿಯ ನೋಡಾ.
ಕೂಡಲಸಂಗನ ಶರಣರ ಅನುಭಾವ ಮಡಿವಾಳನ ಕಾಯಕದಂತೆ.

ಎಂಬ ಬಸವಣ್ಣನವರ ವಚನಗಳನ್ನು ಸಾಂದರ್ಭಿಕವಾಗಿ ಹೇಳುತ್ತ ಲಿಂಗಾಯತವೆಂಬುದು ಒಂದು ಜಾತಿ ಅಲ್ಲವೆ ಅಲ್ಲ. ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಸೂಳೆ ಸಂಕವ್ವೆ, ಕದಿರೆಯ ರೆಮ್ಮವ್ವ, ಒಕ್ಕಲಿಗ ಮುದ್ದಣ್ಣ, ಮಡಿವಾಳ ಮಾಚಿದೇವ, ಅಲ್ಲಮ ಹೀಗೆ 770 ಅಮರ ಗಣಂಗಳು ಕೂಡಿ ಕಟ್ಟಿದ ಸಂಸ್ಥೆ ಲಿಂಗಾಯತ ಎಂದು ಸಭೆಗೆ ವಿವರಿಸಿದೆ. ಇಷ್ಟಲಿಂಗ ಅರಿವಿನ ಕುರುಹು. ಆಚಾರದ ಪ್ರತೀಕ. ಲಿಂಗ ಕಟ್ಟಿಕೊಂಡ ಮೇಲೆ ಸಕಲ ಜೀವಾತ್ಮರಿಗೆ ಲೇಸಬಯಸುವವರಾಗಬೇಕು. ರಾಗ ದ್ವೇಷಗಳು ಇರಬಾರದು. ಗುಡಿ ಗುಂಡಾರ ಕಟ್ಟುವುದು ಮುಖ್ಯ ಅಲ್ಲವೇ ಅಲ್ಲ. ಗಂಟೆ ಶಂಖ ಜಾಗಟೆಗಳು ಅರ್ಥ ಕಳೆದುಕೊಂಡು ನಮ್ಮ ಆತ್ಮಸಾಕ್ಷಿಯ ಗಂಟೆ ನಿನದಿಸಬೇಕು. ಯಾವ ಶಾಸ್ತ್ರ ಪುರಾಣ ವೇದ ಆಗಮಗಳಿಗಿಂತ ಎದೆಯ ದನಿ ಬಹಳ ಪ್ರಮುಖವಾದುದು.

ಲಿಂಗವ ಪೂಜಿಸಿ ಫಲವೇನಯ್ಯಾ,
ಸಮರತಿ ಸಮಕಳೆ ಸಮ ಸುಖವನರಿಯದನ್ನಕ್ಕ
ಲಿಂಗವ ಪೂಜಿಸಿ ಫಲವೇನಯ್ಯಾ
ಕೂಡಲಸಂಗಮದೇವರ ಪೂಜಿಸಿ ನದಿಯೊಳಗೆ
ನದಿ ಬೆರಸಿದಂತಾಗದನ್ನಕ್ಕ

ಇಷ್ಟಲಿಂಗ ಕಟ್ಟಿಕೊಂಡೂ ಸ್ಥಾವರ ದೇವರಿಗೆ ಹೋಗುವುದೆಂದರೆ ಮಾಡಿಕೊಂಡು ಗಂಡನ ಬಿಟ್ಟು ಅನ್ಯ ಪುರುಷನತ್ತ ಹಾತೊರೆವಂತೆ ಎಂದು ತೀಕ್ಷ್ಣವಾಗಿ ನುಡಿದಾಗ ಹುಮ್ನಾಬಾದನ ಶಾಸಕ, ಗಣಿ ಮತ್ತು ಭೂಗರ್ಭ ಇಲಾಖೆಯ ಮಂತ್ರಿ ರಾಜಶೇಖರ ಪಾಟೀಲ ನನ್ನತ್ತ ಬೆಕ್ಕಸ ಬೆರರಾಗಿ ನೋಡಿದರು. ಕುಲ ಶ್ರೇಷ್ಠ ಎನ್ನುವುದು ಬ್ರಾಹ್ಮಣ್ಯ. ದುಡಿದು ಉಣ್ಣುವವನು ದೊಡ್ಡವನು. ಕಾಯಕದಲ್ಲಿ ದೊಡ್ಡದು ಸಣ್ಣದು ಎಂಬುದು ಇಲ್ಲವೇ ಇಲ್ಲ. ದಲಾಲಿಗಳಿಲ್ಲದ, ಸ್ಥಾವರ ದೇವರುಗಳನ್ನು ಗುಡಿಸಿ ಗುಂಡಾಂತರ ಹಾಕಿದ ಧರ್ಮ ಲಿಂಗಾಯತವೆಂದಾಗ ನನ್ನೊಂದಿಗೆ ವೇದಿಕೆಯಲ್ಲಿ ಕುಳಿತ ರಾಜಶೇಖರ ಪಾಟೀಲರಿಗೆ ಇರಿಸು ಮುರಿಸು. ಅವರು ಹುಟ್ಟಾ ಲಿಂಗಾಯತರಾಗಿದ್ದರು. ವೈದಿಕರ ಕಪಿಮುಷ್ಠಿಯಲ್ಲಿ ಸಿಲುಕಿದವರು. ಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಳ್ಳುವಾಗ ತಮ್ಮ ಊರಿನ ಸ್ಥಾವರ ದೇವರಾದ ವೀರಭದ್ರನ ಹೆಸರಿನ ಮೇಲೆ ವಿಶ್ವಾಸವಿರಿಸಿದವರು.

ಜಂಗಮ ಉಪದೇಶ ಶಸ್ತ್ರವೈದ್ಯ ಎಂಬಂತೆ ನನ್ನ ಮಾತು ಅವರ ಜಂಘಾಬಲವನ್ನು ಕುಗ್ಗಿಸಿತು. ಹೀಗಾಗಿ ನಾನು ಹೀಗೆ ಮಾತಾಡುತ್ತ ಹೋದರೆ ಕರ್ಮಠ ಲಿಂಗಾಯತರ ಒಳ ಹೂರಣವೆ ಬಯಲಾಗುತ್ತದೆ ಎಂಬ ದಿಗಿಲಿನಿಂದ ಸಂಘಟಕರಿಗೆ ನಾನು ಮಾತಾಡುವುದು ಸಾಕು ಮಾಡಲು ಚೀಟಿ ನೀಡಿ ಎಂದು ಸಂಜ್ಞೆ ಮಾಡಿದರಂತೆ. ಆದರೆ ಆಕಸ್ಮಿಕವಾಗಿ ಅದೇ ಸಮಯಕ್ಕೆ ಸರಿಯಾಗಿ ನಾನು ಸಹ : “ಹೇಳಿ ಕೇಳಿ ನಾನು ‘ಗೌರಿ ಲಂಕೇಶ್ ಪತ್ರಿಕೆಯ’ ವರದಿಗಾರನಾಗಿದ್ದೆ” ಎಂದು ಹೇಳಿದ್ದೆ ತಡ. ರಾಜಶೇಖರ ಪಾಟೀಲ ಇದನ್ನು ಗಮನಿಸಿ ಸಂಘಟಕರಿಗೆ ಮತ್ತೆ ಸೂಚಿಸಿ “ಸತ್ಯಂಪೇಟೆ ಮಾತಾಡಲಿ ಬಿಡಿ. ಆ ಪತ್ರಿಕೆಯವರು ಯಾರನ್ನೂ ಬಿಟ್ಟವರಲ್ಲ. ಅವರು ಸತ್ಯವನ್ನೇ ಹೇಳುತ್ತಾರೆ. ಸುಳ್ಳನ್ನಲ್ಲ !” ಎಂದು ಹೇಳಿದರಂತೆ.

ಹಾಗಾಗಿ ನಾನು ನಿರರ್ಗಳವಾಗಿ ತಾಸೊತ್ತು ಮಾತನಾಡಿದೆ. ಮಡಿವಾಳನ ಕಾಯಕವನ್ನು ಮಾಡಿದೆ. ನನ್ನ ಮಾತು ಅಧರಕ್ಕೆ ಕಹಿ ಅನಿಸಿದರೂ , ಉದರಕ್ಕೆ ಸಿಹಿ ಉಂಟು ಮಾಡುವಂತಹವಾಗಿದ್ದವು. ಮಾತು ಮುಗಿಸಿ ವೇದಿಕೆಯಲ್ಲಿ ಕುಳಿತಾಗ ಮಂತ್ರಿಗಳು ಮನಬಿಚ್ಚಿ ನನ್ನೊಂದಿಗೆ ಬೆರೆತರು. ಗೌರಿ ಲಂಕೇಶ್ ದೈಹಿಕವಾಗಿ ಈಗ ನಮ್ಮೊಂದಿಗೆ ಇಲ್ಲದಿದ್ದರೂ ಸಹ ಅವರ ಗಟ್ಟಿ ನಿಲುವು. ಅವರ ಮಾರ್ಗ ಬಸವ ಮಾರ್ಗ ಎಂಬುದು ನನಗೆ ಮನದಟ್ಟಾಗಿ ತುಂಬಾ ಖುಷಿಯಾಯಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...