Homeಕರ್ನಾಟಕಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಕೋಟಿಗೊಬ್ಬ ಶಿಕ್ಷಕ ಅಣ್ಣಿಗೇರಿ ಮಾಸ್ತರರ ಸಾವು: ನಿವೃತ್ತರಾಗದೇ ಅಕ್ಷರ ಕಲಿಸಿದ...

ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಕೋಟಿಗೊಬ್ಬ ಶಿಕ್ಷಕ ಅಣ್ಣಿಗೇರಿ ಮಾಸ್ತರರ ಸಾವು: ನಿವೃತ್ತರಾಗದೇ ಅಕ್ಷರ ಕಲಿಸಿದ ಗುರು!

- Advertisement -
- Advertisement -

ಸೆಪ್ಟೆಂಬರ್ 6ರಂದು ಗದಗ ನಗರದ ಎಲ್ಲ ಶಾಲಾ-ಕಾಲೇಜುಗಳಿಗೂ ರಜೆ ನೀಡಲಾಗಿತ್ತು. ಅದು ನಿವೃತ್ತ ಶಾಲಾ ಶಿಕ್ಷಕರೊಬ್ಬರ ಸಾವಿಗೆ ಗೌರವ ಸಲ್ಲಿಸಲು ಜಿಲ್ಲಾಡಳಿತ ತೆಗೆದುಕೊಂಡ ಸಜ್ಜನಿಕೆಯ ಕ್ರಮವಾಗಿತ್ತು.

‘ಅಣ್ಣಿಗೇರಿ ಮಾಸ್ತರು’ ಎಂದೇ ಗದಗಿನಲ್ಲಿ ಜನಪ್ರಿಯರಾಗಿದ್ದ ಮತ್ತು ಗೌರವಯುತರಾಗಿದ್ದ ಬಸಪ್ಪ ಗುರಪ್ಪ ಅಣ್ಣಿಗೇರಿಯವರು ಸೆಪ್ಟೆಂಬರ್ 5ರಂದು ಶಿಕ್ಷಕ ದಿನಾಚರಣೆಯಂದೇ ನಿಧನರಾಗಿದ್ದು ಕಾಕತಾಳೀಯವೇ ಇರಬಹುದು. ಆದರೆ, ಗದಗಿನಲ್ಲಿ ಅವರೆಂದೂ ಮರೆಯದ ‘ಶಿಕ್ಷಣ ಸಂತ’ ಎಂಬ ಹೆಸರಿನಿಂದ ಸದಾ ಜೀವಂತವಾಗಿರಲಿದ್ದಾರೆ.

ಅವರು ಇಲ್ಲಿ ಸರ್ಕಾರಿ ಶಾಲೆಯ ಮಾಸ್ಟರ್ ಆಗಿದ್ದಾಗ ಆರಂಭಿಸಿದ ಉಚಿತ ಟ್ಯೂಷನ್ ತರಗತಿಗಳನ್ನು ತಮ್ಮ ಕೊನೆಯ ದಿನದವರೆಗೂ ನಡೆಸಿಕೊಂಡು ಬಂದರು. ಅವರ ವಿಶೇಷಾಸಕ್ತಿಯಿಂದ ಪಠ್ಯ ಮತ್ತು ಬದುಕಿನ ಅರಿವು ಪಡೆದ ಸಾವಿರಾರು ಶಿಷ್ಯರು ಇವತ್ತು ದೇಶ-ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಗದಗ ಜಿಲ್ಲೆ ರೋಣ ತಾಲೂಕಿನ ಮುದೇನಗುಡಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಮಾಸ್ತರರು ಬಡತನದಲ್ಲೇ ಶಿಕ್ಷಣ ಪಡೆದು, ನಂತರ ಧಾರವಾಡದ ಮುರುಘಾಮಠದ ಹಾಸ್ಟೇಲ್ ಸೌಲಭ್ಯದ ಕಾರಣಕ್ಕಾಗಿ ಬಿ.ಎ ಪದವಿ ಮತ್ತು ಶಿಕ್ಷಕ ತರಬೇತಿ ವಿಷಯದಲ್ಲಿ ಪಾಸಾಗುತ್ತಾರೆ. ಗದಗಿನ ಮಾಡೆಲ್ ಹೈಸ್ಕೂಲ್‍ನಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿದ ಅವರು, ತಮ್ಮ ಸಂಬಳದ ಹಣ ಉಳಿಸಿ ಮುಂಜಾನೆ ಮತ್ತು ಸಂಜೆ ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತ ಬಂದರು. ಸಾಯುವವರೆಗೂ ಈ ಕಾಯಕ ಮುಂದುವರೆದೇ ಇತ್ತು.

‘ಅವ್ರ ಬಗ್ಗೆ ಏನ್ ಹೇಳೋದ್ ಬಿಡಿ. ಒಂಥರಾ ನಮಗೆಲ್ಲ ಅವ್ರು ದೇವರೇ’ ಎನ್ನುತ್ತಾರೆ ಅವರ ಬಳಿ ಗಣಿತ, ಇಂಗ್ಲಿಷ್ ಪಾಠಗಳನ್ನು ಕಲಿತ ಪಾಲಿಟೆಕ್ನಿಕ್ ಉಪನ್ಯಾಸಕ ವಕ್ಕಲದ. ಮಂಡ್ಯದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಫೀಕ್ ಕೆರೂರ್ ಹೇಳುತ್ತಾರೆ: ‘ಅವರು ಟ್ಯೂಷನ್ ಹೇಳ್ತಿದ್ದ ವಕಾರ ಜಾಗ ನಮ್ಮ ಮನೆಗೆ ದೂರ ಇದ್ದುದರಿಂದ ನಾನು ಕೇವಲ ಒಂದು ತಿಂಗಳು ಮಾತ್ರ ಅವರ ಹತ್ತಿರ ಮ್ಯಾಥ್ಸ್ ಕಲಿಯಲು ಸಾಧ್ಯವಾಯಿತು. ಆದರೆ, ಗದಗಿನ ಎರಡು-ಮೂರು ತಲೆಮಾರುಗಳ ಶಾಲಾ ವಿದ್ಯಾರ್ಥಿಗಳಲ್ಲಿ ಗಣಿತ ಮತ್ತು ಇಂಗ್ಲಿಷ್ ಜ್ಞಾನ ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ….’

ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯ ಹಿರಿಯ ಉದ್ಯೋಗಿ ಸತೀಶ್ ಕುರಿ, ಹುಬ್ಬಳ್ಳಿಯಲ್ಲಿ ವೈದ್ಯ ವೃತ್ತಿ ಮಾಡುವ ಪರಶುರಾಮ ಕಾಂಬಳೆ…. ಹೀಗೆ ಎಲ್ಲರೂ ಅವರು ಕಲಿಸಿದ ವಿಷಯ ಮತ್ತು ಅದಕ್ಕಿಂತ ಮುಖ್ಯವಾಗಿ ಬದುಕಿನ ಪಾಠಗಳನ್ನು ನೆನೆದು ಗದ್ಗದಿತರಾಗುತ್ತಾರೆ….

ಸಾಮಾನ್ಯ ಶಿಕ್ಷಕರೊಬ್ಬರು ಸಹಜ ಪಾಠ ಮತ್ತು ಜೀವನದ ಮೌಲ್ಯಗಳನ್ನು ನಿರಂತರವಾಗಿ ಕಲಿಸುವ ಮೂಲಕ ಅಸಾಮಾನ್ಯ ಬದುಕನ್ನು ಇಲ್ಲಿ ಸವೆಸಿ ಹೋಗಿದ್ದಾರೆ. ಹಿಂದಿನ ಸಿದ್ದಲಿಂಗ ತೋಂಟದಾರ್ಯ ಸ್ವಾಮೀಜಿ ಅವರಂತೂ ಬಿ.ಜಿ. ಅಣ್ಣಿಗೇರಿಯವರನ್ನು ‘ಶಿಕ್ಷಣ ಸಂತ’ ಎಂದೇ ಕರೆಯುತ್ತಿದ್ದರು. ಮುಂದೆ ಅದೇ ಟೈಟಲ್ಲಿನಲ್ಲಿ ಅಣ್ಣಿಗೇರಿ ಅವರ ಶಿಷ್ಯವೃಂದ ಒಂದು ಅಭಿನಂದನಾ ಗ್ರಂಥವನ್ನು ಪ್ರಕಟಿಸಿತ್ತು. ಅಣ್ಣಿಗೇರಿ ಮಾಸ್ತರು ಹೆಸರಲ್ಲೇ ಅವರ ಕುರಿತಾಗಿಯೇ ಇನ್ನೂ ಮೂರು ಕೃತಿಗಳು ಬಂದಿವೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಸಮಾಜ ಕಲಿಸುತ್ತಿದ್ದ ಅಣ್ಣಿಗೇರಿ ಮಾಸ್ತರು ಕ್ರಮೇಣ ಗಣಿತ ವಿಷಯ ಬೋಧನೆಗಾಗಿಯೇ ಗದಗಿನಲ್ಲಿ ಪ್ರಸಿದ್ಧರಾದುದದರ ಹಿಂದೆ ಒಂದು ರೋಚಕ ಅಂಶ ಇದೆ. ಅವರ ಶಿಷ್ಯನೊಬ್ಬ ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಆತನಿಂದ ಹಲವು ತಿಂಗಳು ಕಾಲ ಸರಳ ಗಣಿತ ಕಲಿಕೆಯ ಬಗ್ಗೆ ಪಾಠ ಕಲಿತ ಅವರು, ಕ್ರಮೇಣ ಗದಿನಲ್ಲಿ ಜನಪ್ರಿಯ ಗಣಿತ ಶಿಕ್ಷಕರೆನಿಸಿದರು.
ವಕಾರು ಸಾಲಿನಲ್ಲಿ ಅವರು ಮೂರು ದಶಕಗಳಿಂದ ನಡೆಸುತ್ತ ಬಂದಿರುವ ಶಿಕ್ಷಣ ಆಶ್ರಮಕ್ಕೆ ‘ಗದಗಿನ ಶಾಂತಿನಿಕೇತನ’ ಎಂದೂ ಅವರ ಶಿಷ್ಯರು ಕರೆಯುತ್ತಾರೆ.

ಅವರ ಆಶ್ರಮ ಶಾಲೆಯ ಗೋಡೆಗಳ ಮೇಲಿರುವ ಕೆಲವು ಸಾಲುಗಳು:
‘ಸ್ವಾರ್ಥದಿಂದ ಕೂಡಿದುದು ಅನೈತಿಕ, ಸ್ವಾರ್ಥಶೂನ್ಯವಾದುದು ನೈತಿಕ…’
‘ಪೂರ್ಣತ್ಯಾಗವೇ ಪರಮಾದರ್ಶ, ನಿಸ್ವಾರ್ಥತೆಯೇ ದೇವರು….’
‘ಶಕ್ತಿಯೇ ಜೀವನ, ದುರ್ಬಲತೆಯೇ ಮರಣ…’

ಸಾವೇ ಇಲ್ಲದ ಇಂತಹ ‘ಮಾಸ್ತರು’ಗಳಿಗೆ ನಮ್ಮ ಕಡೆಯಿಂದ ಇದೊಂದು ಶ್ರದ್ಧಾಂಜಲಿ….

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...