ನೊಬೆಲ್ ಪುರಸ್ಕೃತ ಆರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಭಾರತೀಯ ಆರ್ಥಿಕತೆ ಕುಸಿತ ಮತ್ತು ಅದಕ್ಕಾಗಿ ಏನು ಮಾಡಬೇಕು ಎಂಬ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆರ್ಥಿಕತೆಯ ಅಭಿವೃದ್ಧಿಗೆ ಯಾವ ಕ್ರಮ ಕೈಗೊಳ್ಳಬೇಕು, ಯಾವ ಅಂಶಗಳನ್ನು ಸೇರಿಸಿದರೆ ದೀರ್ಘಾವಧಿಯ ಆರ್ತಿಕ ಕುಸಿತ ತಡೆಯಬಹುದು ಎಂಬುದನ್ನು ತಿಳಿಸಿದ್ದಾರೆ. ಅಲ್ಲದೇ ಏನೇ ಮಾಡಿದರೂ ಕೊನೆಗೆ ಉಳಿಯುವುದು ಪ್ರಾರ್ಥನೆಯೊಂದೇ ಎಂದು ಹೇಳುವ ಮೂಲಕ ಆರ್ಥಿಕತೆಯ ಕುಸಿತದ ಭೀಕರ ಪರಿಣಾಮವನ್ನು ಉಲ್ಲೇಖಿಸಿದ್ದಾರೆ.
ಕಳೆದ ವಾರ ಬ್ರೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರ್ಥಿಕತೆಯನ್ನು ಸುಗಮ ಹಾದಿಯಲ್ಲಿ ಸಾಗಿಸುವುದು ದುರ್ಗಮ ಹಾದಿಯನ್ನು ಕ್ರಮಿಸಿದಷ್ಟೇ ಕಷ್ಟಕರ. ಆರ್ಥಿಕ ಕುಸಿತ ತಡೆದು, ಅಭಿವೃದ್ಧಿಯತ್ತ ಸಾಗುವುದು, ಪರ್ವತ ಏರಿದಷ್ಟೇ ಸಾಹಸಮಯ. ಭಾರತೀಯರು ಉತ್ತಮ ಆರ್ಥಿಕತೆಗಾಗಿ ಪ್ರಾರ್ಥಿಸುವ ಅಗತ್ಯತೆಯಿದೆ ಎಂದು ಹೇಳಿದ್ದಾರೆ. ಒಂದು ಗಂಟೆಯ ಭಾಷಣದಲ್ಲಿ ಹಲವು ಅಂಶಗಳ ಬಗ್ಗೆ ಬ್ಯಾನರ್ಜಿ ಮಾತನಾಡಿದ್ದಾರೆ.
ಭಾರತದ ಉದ್ಯೋಗ ಖಾತರಿ ಯೋಜನೆಗಳಿಗೆ ವೇತನ ಹೆಚ್ಚಿಸುವುದು, ರೈತರು ಬೆಳೆದ ಬೆಳೆಗಳಿಗೆ ಬೆಲೆ ಹೆಚ್ಚಳ, ರೂಪಾಯಿ ಇಳಿಕೆಯಾಗುವುದನ್ನು ನಿಯಂತ್ರಿಸಬೇಕು. ಸಾರ್ವಜನಿಕರು ಹೇಗೆ ವರ್ತಿಸುತ್ತಾರೆ, ಜನರನ್ನು ನಿಯಂತ್ರಿಸುವ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳದೇ, ಉದ್ಯೋಗ ಖಾತರಿ ಯೋಜನೆಗೆ ಹೆಚ್ಚು ಹಣ ನೀಡಬೇಕು ಎಂದರು. ಪ್ರಧಾನಮಂತ್ರಿ ಸಚಿವಾಲಯ ಎನ್.ಆರ್.ಇ.ಜಿ.ಎ ನಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಿ, ವೇತನ ಹೆಚ್ಚಿಸಿ, ಅಭಿವೃದ್ಧಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದ್ದಾರೆ.
ಸಂಖ್ಯಾಶಾಸ್ತ್ರೀಯ ಸಂಸ್ಥೆಗಳಲ್ಲಿ ರಾಜಕೀಯ ಮಧ್ಯಸ್ಥಿಕೆ ಕೊನೆಗೊಳಿಸಬೇಕೆಂದು ಕೇಂದ್ರಕ್ಕೆ ಪತ್ರ ಬರೆದವರಲ್ಲಿ ಬ್ಯಾನರ್ಜಿ ಕೂಡ ಒಬ್ಬರು. ವೃತ್ತಿ ಜೀವನದಲ್ಲಿ ಹಣಕಾಸಿನ ನೈಜ ಸ್ಥಿತಿಯನ್ನು ಸೃಜನಶೀಲ ಲೆಕ್ಕಪತ್ರದ ಮೂಲಕ ಮರೆಮಾಚುವ ಪ್ರಯತ್ನಸೇರಿದಂತೆ ಸರ್ಕಾರದ ಅನೇಕ ವಿಧಾನಗಳ ಬಗ್ಗೆ ಪ್ರಶ್ನಿಸಿದ್ದಾರೆ. ಸರ್ಕಾರದ ಬಜೆಟ್ ಆರ್ಥಿಕ ಪವಾಡಗಳನ್ನು ಅವಲಂಬಿಸದಿರುವುದೇ ಸೂಕ್ತ. ಸರ್ಕಾರದ ನೀತಿಗಳು ಮತ್ತು ಕಾರ್ಯವಿಧಾನದ ಬಗ್ಗೆ ಮತ್ತು ಸಹಜ ಸಂಗತಿಗಳ ಬಗ್ಗೆ ಹೇಳಿದ್ದಾರೆ.
ಇನ್ನು ಪ್ರಧಾನಿ ಮೋದಿಯವರ ಆಡಳಿತದಲ್ಲಿ ಆರ್ಥಿಕ ಕುಸಿತ ಅತ್ಯಂತ ವಿಲಕ್ಷಣ ಮತ್ತು ವಿಸ್ಮಯಕಾರಿಯಾಗಿದೆ. ಜಿ.ಎಸ್.ಟಿ ಮತ್ತು ನೋಟು ನಿಷೇಧ, ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕ್ ವಿತ್ತೀಯ ನಿಯಮಗಳ ಬಗ್ಗೆಯೂ ಟೀಕಿಸಿದರು. ಬರುವ ಏಪ್ರೀಲ್ ಒಳಗೆ ಭಾರತ ಸಾರ್ವತ್ರಿಕ ಮೂಲ ಆದಾಯದತ್ತ ಸಾಗಬೇಕು. ಇದು ಸುಲಭವಲ್ಲ, ಆದರೆ ರಾಜಕೀಯ ಇಚ್ಛಾಶಕ್ತಿಯಿದ್ದರೆ ಇದು ಸಾಧ್ಯ. ಜಿಡಿಪಿ ಪ್ರತಿವರ್ಷ ಹೆಚ್ಚಲು, ಆರ್ಥಿಕತೆಯ ಬೆಳವಣಿಗೆಗೆ ಕೆಲ ಕ್ರಮಗಳನ್ನು ಕೈಗೊಳ್ಳಲು ಅವಕಾಶವಿದೆ. ಭಾರತಕ್ಕೆ ಎಂಟು ನಿರ್ದೇಶನ ನೀಡಲಾಗಿದ್ದು, ಇದು ಹೊರೆಯನ್ನು ಕಡಿಮೆ ಮಾಡುತ್ತೆ. ಅಲ್ಲದೇ ರಾಜ್ಯಗಳ ಸಾಲದ ಹೊರೆಯನ್ನೂ ತಗ್ಗಿಸುತ್ತದೆ.