- Advertisement -
ಇತಿಹಾಸ ತಿಳಿಯದ ಅಹಂಕಾರಿ ಮೋದಿಜಿ
-ಎಚ್.ಎಸ್. ದೊರೆಸ್ವಾಮಿ
ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹಾತ್ಮಾ ಗಾಂಧಿಯವರ ಕೊಡುಗೆ ಅಪಾರ. ಅವರು ಕಾಂಗ್ರೆಸ್ ಸೇರುವುದಕ್ಕೆ ಮೊದಲು ಕಾಂಗ್ರೆಸ್ ಒಂದು ‘ಕ್ಲಾಸ್ ಮೂವ್ಮೆಂಟ್’ ಆಗಿತ್ತು. ಆದರೆ ಅವರೆಲ್ಲ ಜನನಾಯಕರು, ವಿಚಾರವಂತರು, ಅಧಿಕಾರ ದಾಹ ಇಲ್ಲದವರು. ಕೊಲೆ-ಸುಲಿಗೆಯನ್ನು ಅರಿಯದ ಮಹನೀಯರಾಗಿದ್ದರು. ಇಂಗ್ಲಿಷರು ಕೂಡ ಅವರ ಬಗ್ಗೆ ಅಪಾರ ಗೌರವ ಇರಿಸಿಕೊಂಡಿದ್ದರು. ಮನವಿಪತ್ರ (ಮೆಮೋರಾಂಡಮ್) ನೀಡುವುದರ ಮೂಲಕವೇ ಭಾರತೀಯರಿಗೆ ಅನೇಕ ಅಧಿಕಾರ ಕೊಡಿಸಿದರು. ಆಗಿನ ಸ್ವಾತಂತ್ರ್ಯ ಸಂಗ್ರಾಮ ಸೀಮಿತವಾಗಿತ್ತು.
ಮಹಾತ್ಮಾ ಗಾಂಧಿಯವರು ಕಾಂಗ್ರೆಸಿನ ನಾಯಕತ್ವ ವಹಿಸಿಕೊಳ್ಳುವ ಮೊದಲು ಅವರ ಗುರು ಸ್ಥಾನದಲ್ಲಿದ್ದ ಗೋಪಾಲಕೃಷ್ಣ ಗೋಖಲೆಯವರನ್ನು ಭೇಟಿ ಮಾಡಿದರು. ಗೋಖಲೆಯವರು ಹೇಳಿದರು: “ಮುಂದೆ ನೀನು ಭಾರತ ರಾಷ್ಟ್ರೀಯ ಕಾಂಗ್ರೆಸಿನ ಚುಕ್ಕಾಣಿ ಹಿಡಿಯುವವನಿದ್ದೀಯೆ. ಅದಕ್ಕೆ ಮೊದಲು ನೀನು 3ನೇ ದರ್ಜೆ ರೈಲ್ವೆ ಡಬ್ಬಿಯಲ್ಲಿ ಕೂತು ಭಾರತವನ್ನು ಸುತ್ತಿ ಬಾ. ಭಾರತೀಯರು ಯಾವ ದುರವಸ್ಥೆಯಲ್ಲಿದ್ದಾರೆ, ಅದನ್ನು ಕಣ್ಣಾರೆ ಕಂಡು ಬಾ. ಆನಂತರ ಹೇಗೆ ಕಾಂಗ್ರೆಸನ್ನು ರೂಪಿಸಬೇಕು ಎಂದು ವಿಚಾರ ಮಾಡು.”
ಗಾಂಧೀಜಿ ಭಾರತ ಯಾತ್ರೆ ಆರಂಭ ಮಾಡಿದರು. ಭಾರತೀಯರ ಬಡತನವನ್ನು, ಅವರ ಮೇಲಾಗುತ್ತಿರುವ ಶೋಷಣೆ, ದಬ್ಬಾಳಿಕೆಯನ್ನು ಕಣ್ಣಾರೆ ಕಂಡು ಮಮ್ಮಲ ಮರುಗಿದರು. ನಾನು ಈ ದುರ್ದೈವಿ ಬಡಜನರ ಪ್ರತಿನಿಧಿಯಾಗಬೇಕಾದರೆ ನಾನೂ ಅವರಂತೆಯೇ ಜೀವನ ತೂಗಿಸಬೇಕಲ್ಲವೆ? ಸರಳತೆಯನ್ನು ಅಭ್ಯಾಸ ಮಾಡಬೇಕು. ಸ್ವಯಂ-ಪ್ರೇರಣೆಯಿಂದ ಬಡತನ ಅಪ್ಪಿಕೊಳ್ಳಬೇಕು ಎಂದು ದೃಢಸಂಕಲ್ಪ ಮಾಡಿದರು. ನುಡಿದಂತೆ ನಡೆದರು.
ಸ್ವಾತಂತ್ರ್ಯ ಸಂಗ್ರಾಮದ ಸ್ವರೂಪವನ್ನು ಕಾಲಕ್ರಮೇಣ ಬದಲಾಯಿಸಿದರು. ‘ಕ್ಲಾಸ್ವಾರ್ (ಛಿಟಚಿss ತಿಚಿಡಿ)’ ಆಗಿದ್ದ ಹೋರಾಟವನ್ನು ‘ಮಾಸ್ವಾರ್ (mಚಿss ತಿಚಿಡಿ)’ ಹೋರಾಟವನ್ನಾಗಿ ಮಾರ್ಪಡಿಸಿ ಜನಸಾಮಾನ್ಯರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಳ್ಳುವಂತೆ ಮಾಡಿದರು. ಬಡತನ ನಿರ್ಮೂಲನೆ ತನ್ನ ಆದ್ಯತೆ ಎಂದರು.
ಗುಜರಾತಿನ ಜನ ಸ್ವಾತಂತ್ರ್ಯಕ್ಕಾಗಿ ಬಹಳ ತ್ಯಾಗ, ಬಲಿದಾನಗಳನ್ನು ಮಾಡಿದ್ದಾರೆ. ಮಹಾತ್ಮಾ ಗಾಂಧಿ, ವಲ್ಲಭಭಾಯಿ ಪಟೇಲ್, ವಿಠ್ಠಲಭಾಯಿ ಪಟೇಲ್, ಮೊರಾರ್ಜಿ ದೇಸಾಯಿ, ಮಹದೇವ ದೇಸಾಯಿ ಮುಂತಾದ ಮಹಾ ಪುರುಷರಿಗೆ ಜನ್ಮವಿತ್ತ ನಾಡು ಗುಜರಾತು. ಗಾಂಧೀಜಿ ಭಾರತವನ್ನು ಗುಲಾಮಗಿರಿಯಿಂದ ಪಾರು ಮಾಡಲು ತಮ್ಮ ಪ್ರಾಣವನ್ನೇ ಪಣವಾಗಿಟ್ಟರು. ಸರ್ದಾರ್ ಪಟೇಲರು 565 ರಾಜರುಗಳನ್ನು ಸಿಂಹಾಸನದಿಂದ ಕೆಳಗಿಳಿಸಿ ಅಖಂಡ ಭಾರತವನ್ನು ರೂಪಿಸಿದರು. ಸತ್ಯ, ಅಹಿಂಸೆ ಆಚರಣೆಯಿಂದ ಸ್ವರಾಜ್ಯ ಸ್ಥಾಪನೆ ಮಾಡಿದರು. ಈ ಇತಿಹಾಸ ಮೋದಿಜಿಗೆ ತಿಳಿದಿರಲಿಕ್ಕಿಲ್ಲ.
ಸ್ವಾತಂತ್ರ್ಯ ಪ್ರಾಪ್ತವಾದ ಕೂಡಲೇ ಕಾಂಗ್ರೆಸ್ಸನ್ನು ವಿಸರ್ಜನೆ ಮಾಡಬೇಕೆಂದರು ಗಾಂಧೀಜಿ. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಕಾಂಗ್ರೆಸ್ ಸಂಸ್ಥೆ ಅಧಿಕಾರಕ್ಕಾಗಿ ಹಾತೊರೆಯದೆ ಒಂದು ಆದರ್ಶ ಸಂಸ್ಥೆಯಾಗಿ ಚಿರಸ್ಥಾಯಿಯಾಗಿ ಉಳಿಯಲಿ ಎಂಬುದು ಗಾಂಧೀಜಿಯವರ ಆಶಯವಾಗಿತ್ತು.
ಅಜ್ಞಾನಿ ಮೋದಿ ಅಂದುಕೊಂಡಿದ್ದಾರೆ: ‘ಭಾರತವನ್ನು ಮೋದಿಜಿಗೆ ಬಿಟ್ಟುಕೊಡಲೆಂದೇ ಗಾಂಧೀಜಿ ಕಾಂಗ್ರೆಸ್ಸನ್ನು ವಿಸರ್ಜನೆ ಮಾಡಲು ಹೇಳಿದ್ದಾರೆ’- “ಕಾಂಗ್ರೆಸ್ಸನ್ನು ಸರ್ವನಾಶ ಮಾಡುವುದೇ ನನ್ನ ಗುರಿ!” ಆದ್ದರಿಂದ ಅದನ್ನು ನಾಮಾವಶೇಷ ಮಾಡುವುದೇ ಇರುವ ಏಕೈಕ ಮಾರ್ಗ ಎನ್ನುತ್ತಾರೆ ಮೋದಿಜಿ. ಸರ್ವನಾಶ ಮಾಡಬೇಕೆಂದು ಹೊರಟ ರಾಕ್ಷಸರು ತಾವೇ ಸರ್ವನಾಶವಾದರು ಎಂದು ಪುರಾಣಗಳು ಹೇಳುತ್ತವೆ.
ಪ್ರಧಾನಿಯಾಗುವ ಆತುರದಲ್ಲಿ ಮೋದಿಜಿಗೆ ಇತಿಹಾಸ ಓದಲು ಪುರುಸೊತ್ತಿಲ್ಲವಾದರೂ, ಅವರಲ್ಲಿ ಮೌಢ್ಯ ಮತ್ತು ಅಧಿಕಾರ ಪಿಪಾಸೆ ಯಥೇಚ್ಛವಾಗಿದೆ!
ಗಾಂಧೀಜಿ ಕಾಂಗ್ರೆಸ್ಸನ್ನು ವಿಸರ್ಜನೆ ಮಾಡಲು ಏಕೆ ಹೇಳಿದರು? ಸ್ವಾತಂತ್ರ್ಯ ಪಡೆಯಲು ಬಲಿದಾನ ಮಾಡಿದ ಸಂಸ್ಥೆ, ದೇಶದಿಂದ ಇಂಗ್ಲಿಷರನ್ನು ಓಡಿಸಿ ಗುಲಾಮಗಿರಿಯಿಂದ ಭಾರತವನ್ನು ಪಾರು ಮಾಡಿದ ಕಾಂಗ್ರೆಸ್ ಸಂಸ್ಥೆಯ ಮುಂಚೂಣಿಯಲ್ಲಿರುವವರಿಗೆ ಸತತವಾಗಿ ಅಧಿಕಾರದಲ್ಲಿರಬೇಕು, ಅಧಿಕಾರ ಅನುಭವಿಸಬೇಕು ಎಂಬ ಹಂಬಲ ಸಹಜವಾಗಿಯೇ ಇರುತ್ತದೆ. ಕಾಂಗ್ರೆಸ್ ಅಧಿಕಾರ ದಾಹ ಬಿಟ್ಟು ರಾಜಕೀಯದಿಂದ ನಿವೃತ್ತಿ ಆಗಿ ಲೋಕಸೇವಾ ಸಂಘವಾಗಿ ಪರಿವರ್ತನೆಯಾಗಬೇಕು. ದುರಾಡಳಿತ ನಡೆಸುವ ಸರ್ಕಾರ ಮತ್ತು ಪಕ್ಷದ ಮೇಲೆ ಸಂಘರ್ಷ ನಡೆಸಬೇಕು.
ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತವಾದ ಕೂಡಲೇ ಕಾಂಗ್ರೆಸ್ಸನ್ನು ವಿಸರ್ಜನೆ ಮಾಡಲು ಗಾಂಧೀಜಿ ಹೇಳಿದ್ದು ಮೇಲಿನ ಕಾರಣಗಳಿಗಾಗಿ. ಕಾಂಗ್ರೆಸ್ ಧುರೀಣರು ಗಾಂಧೀಜಿಯವರ ಈ ಮಾತನ್ನು ಕೇಳಲಿಲ್ಲ. ಗಾಂಧೀಜಿ ಏಕೆ ಈ ಮಾತನ್ನು ಹೇಳಿದರು ಎಂಬುದು ಗೊತ್ತಿಲ್ಲ ಎಂದು ಮೋದಿಜೀ ಹೇಳುತ್ತಾರೆ.
ಇತಿಹಾಸದ ಅರಿವಿಲ್ಲದ ಮೋದಿಜಿಗೆ ಗಾಂಧೀಜಿಯವರ ಹಿರಿತನ, ಯೋಗ್ಯತೆ ಅರ್ಥವಾಗಿಲ್ಲ.
- Advertisement -