HomeUncategorizedಉತ್ತರ ಕರ್ನಾಟಕಕ್ಕೆ ಅನ್ಯಾಯ?: ಉತ್ತರಿಸಬೇಕಾದವರೇ ಎತ್ತುವ ಪ್ರಶ್ನೆ!

ಉತ್ತರ ಕರ್ನಾಟಕಕ್ಕೆ ಅನ್ಯಾಯ?: ಉತ್ತರಿಸಬೇಕಾದವರೇ ಎತ್ತುವ ಪ್ರಶ್ನೆ!

- Advertisement -
- Advertisement -

 ಪಿ.ಕೆ. ಮಲ್ಲನಗೌಡರ್ |

ಹೈದರಾಬಾದ್ ಕರ್ನಾಟಕವನ್ನೂ ಒಳಗೊಂಡ ಇಡೀ ಉತ್ತರ ಕರ್ನಾಟಕ ಹಿಂಉಳಿದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಬರಹದ ಉದ್ದೇಶವೆಂದರೆ, ರಾಜಕಾರಣಿಗಳು ಆಗಾಗ ಈ ಅನ್ಯಾಯದ ವಿಷಯ ಎತ್ತುವ ಕುರಿತದ್ದು.
ಸಮಸ್ಯೆ ಎಂದರೆ, ಉತ್ತರ ಕರ್ನಾಟಕದ ಹಿನ್ನಡೆಗೆ ಕಾರಣ ಏನು ಎಂಬ ಜನರ ಪ್ರಶ್ನೆಗೆ ಉತ್ತರಿಸಬೇಕಾದವರೇ ಈ ವಿಷಯವನ್ನುತಮ್ಮ ಸ್ವಹಿತಕ್ಕಾಗಿ ಬಳಸಿಕೊಳ್ಳುತ್ತಿರುವುದು. ಇನ್ನೂ ಒಂದು ಮುಖ್ಯ ಅಂಶವೆಂದರೆ, ಈ ಹಿಂದುಳಿದಿರುವಿಕೆಗೆ ಮುಖ್ಯ ಕಾರಣ ಅವರ ರಾಜಕೀಯ ಇಚ್ಛಾಶಕ್ತಿಯ ಕೊರತೆ!ಸಭಾನಾಯಕನ ಸ್ಥಾನ ಸಿಗದೇ ಹೋದಾಗ, ಧುತ್ತನೇ ಉತ್ತರ ಕರ್ನಾಟಕ ನೆನಪಾಗುತ್ತದೆ. ಸಚಿವ ಸ್ಥಾನ ಮಿಸ್ ಆದಾಗ, ಡಿಸಿಎಂ ಹುದ್ದೆಯ ಮೇಲೆ ಆಸೆ ಚಿಗುರಿದಾಗ ಮತ್ತದೇ ಪ್ರಶ್ನೆ: ಉತ್ತರ ಕರ್ನಾಟಕಕ್ಕೆ ಅನ್ಯಾಯ! ಅನ್ಯಾಯ ಪ್ರಶ್ನಿಸಿ, ನ್ಯಾಯ ಪಡೆಯಬೇಕಾದ ವೇದಿಕೆಯನ್ನೆಂದೂ ಬಳಸಿಕೊಳ್ಳದವರು ಹೀಗೆ ಮಾತಾಡುವುದೇ ಹಾಸ್ಯಾಸ್ಪದವಾಗಿದೆ.

ಅಭಿವೃದ್ಧಿ ಕೆಲಸಗಳಾಗಲು ಸ್ಥಾನಮಾನ ಬೇಕು ನಿಜ, ಆದರೆ ಅದೇ ಎಲ್ಲವೂ ಅಲ್ಲ. ಬಿಡುಗಡೆಯಾದ ಅನುದಾನಗಳ ಸದ್ಬಳಕೆ ಮಾಡದವರು ತಮಗೆ ಸ್ಥಾನ ಸಿಗದೇ ಹೋದಾಗ ಅನ್ಯಾಯದ ಕೂಗು ಎತ್ತಿರೆ ಜನ ಕೂಡ ಸ್ಪಂದಿಸಿಲ್ಲ. ಡಾ. ನಂಜುಂಡಪ್ಪ ಸಮಿತಿಯ ವರದಿಯ ಪರಿಣಾಮವಾಗಿ, 2007ರಿಂದ ದೊರೆಯುತ್ತ ಬಂದ ವಿಶೇಷ ಅನುದಾನದ ಬಳಕೆ ಕಣ್ಣಿಗಂತೂ ಕಾಣುತ್ತಿಲ್ಲ. ಮೇನಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಂದ ಮೇಲೆ ಬಿಜೆಪಿ ‘ಉತ್ತರ ಕರ್ನಾಟಕಕ್ಕೆ ಅನ್ಯಾಯ’ ಎನ್ನುವುದನ್ನು ಬಾಯಿಪಾಠ ಮಾಡಿಕೊಂಡಿದೆ. ಕುಮಾರಸ್ವಾಮಿ ಬಜೆಟ್‍ನಲ್ಲಿ ದಕ್ಷಿಣ ಕರ್ನಾಟಕಕ್ಕೆ ಹೆಚ್ಚಿನ ಯೋಜನೆ ದೊರೆತಿದ್ದೂ ನಿಜ. ಅದನ್ನು ಸದನದಲ್ಲಿ ಎತ್ತಿ ಹೋರಾಡಬೇಕಾದ ನಾಯಕರು, ‘ಪ್ರತ್ಯೇಕ ರಾಜ್ಯ’ ಎಂದು ಆಗಾಗ ಕೂಗು ಹಾಕುವ ಕೆಲವು ಸಮಿತಿಗಳ ಪರ ನಿಲ್ಲುತ್ತ ಬಂದಿದ್ದಾರೆ. ಅಗಸ್ಟ್‍ನಲ್ಲಿ ಬಿಜೆಪಿಯ ಶ್ರೀರಾಮುಲು, ‘ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟದ ನಾಯಕತ್ವ ವಹಿಸಲು ಸಿದ್ಧ’ ಎಂದರು. ತಾವು ಅಧಿಕಾರದಲ್ಲಿದ್ದಾಗ ಈ ಭಾಗದ ನೈಸರ್ಗಿಕ ಸಂಪತ್ತನ್ನೇ ಲೂಟಿ ಹೊಡೆದ ಜನ ಇಲ್ಲಿಗಾದ ಅನ್ಯಾಯದ ಬಗ್ಗೆ ಮಾತಾಡುವುದೇ ಒಂದು ವ್ಯಂಗ್ಯ.
ಅಸಮಾನತೆಗೆ ಹಲವು ಕಾರಣ

ರಾಜ್ಯದಲ್ಲಿನ ಪ್ರಾದೇಶಿಕವಾರು ಅಸಮಾನತೆಗೆ ಹಲವಾರು ಕಾರಣಗಳಿವೆ. ಅನುದಾನ ಬಿಡುಗಡೆಯಲ್ಲಿನ ತಾರತಮ್ಯವಷ್ಟೇ ಅಲ್ಲದೇ, ಈ ಭಾಗದ ರಾಜಕಾರಣಿಗಳಿಚ್ಛಾಶಕ್ತಿಯ ಕೊರತೆಯೂ ಇದಕ್ಕೆ ಕಾರಣವಾಗಿದೆ. ಭೂ ಸುಧಾರಣೆ ಈ ಭಾಗದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗದೇ ಇರುವುದು ಕೂಡ ಇಲ್ಲಿನ ಅಸಮಾನತೆಯ ಮೂಲಗಳಲ್ಲಿ ಒಂದಾಗಿದೆ. ಹಿಂದೆ ಬ್ರಾಹ್ಮಣರ ಹಿಡಿತದಲ್ಲಿದ್ದ ಪಾರಭೂಮಿ ಕ್ರಮೇಣ ಲಿಂಗಾಯತರ ಕೈಗೆ ಬಂತು. ಭೂ ಸುಧಾರಣೆಯ ಸಂದರ್ಭದಲ್ಲಿ ಈ ಭೂಮಿಯ ಹಂಚಿಕೆ ಸರಿಯಾಗಿ ಆಗಲೇ ಇಲ್ಲ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ತಯಾರಿಸಿದ ಮಾನವ ಅಭಿವೃದ್ಧಿ ಸೂಚ್ಯಂಕ ವರದಿಯ ಪ್ರಕಾರ, ಪಟ್ಟಿಯ ಕೊನೆಯಲ್ಲಿರುವ 13 ಜಿಲ್ಲೆಗಳ ಪೈಕಿ 11 ಉತ್ತರ ಕರ್ನಾಟಕದ ಭಾಗದಲ್ಲೇ ಇವೆ. ಈ ಅಧ್ಯಯನದ ಪ್ರಕಾರ, ಪರಿಶಿಷ್ಟರು ಹೆಚ್ಚಿರುವ ಜಿಲ್ಲೆಗಳಲ್ಲಿ ಮಾನವ ಅಭಿವೃದ್ಧಿ ಮಟ್ಟ ಕಡಿಮೆ ಪ್ರಮಾಣದಲ್ಲಿದೆ. ಈ ಅಂಶದತ್ತಲೂ ಗಮನ ಹರಿಸಿನೋಡಿದಾಗ ಮಾತ್ರ ಪ್ರಾದೇಶಿಕ ಅಸಮಾನತೆ ಮತ್ತು ಅದಕ್ಕೆ ಪರಿಹಾರದ ಕಾರ್ಯಕ್ರಮಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲು ಸಾಧ್ಯ. ಆರ್ಥಿಕ ತಜ್ಞ ಪ್ರೊ.ಆರ್.ಎಸ್. ದೇಶಪಾಂಡೆ ಹೇಳುವಂತೆ, ‘ಹಿಂದುಳಿದಪ್ರೇಶಗಳ ಅಭಿವೃದ್ಧಿಗೆ ವೆಚ್ಚ ಮಾಡುವ ವಲಯವನ್ನು ಗುರುತಿಸುವ ಲೆಕ್ಕಾಚಾರದಲ್ಲೇ ಎಡವುತ್ತಿದ್ದೇವೆ.ಅದೇ ಹಿನ್ನಡೆಗೆ ಕಾರಣ ಎನಿಸುತ್ತದೆ…..’
ಪ್ರಾದೇಶಿಕ ಅಸಮಾನತೆ ನಿವಾರಣೆಗೆ ದೊಡ್ಡ ಮೊತ್ತದವಿಶೇಷ ಅನುದಾನದ ಅಗತ್ಯವಿದೆ. ಅದಕ್ಕಿಂತ ಮುಖ್ಯವಾಗಿ ಈ ಅನುದಾನವನ್ನು ಯಾವ ವಲಯದಲ್ಲಿ ಎಷ್ಟು ಪ್ರಮಾಣದಲ್ಲಿ ವಿನಿಯೋಗಿಸಬೇಕು ಎಂಬ ಬಗ್ಗೆ ಸ್ಷಷ್ಟ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕಿದೆ.
ಸದ್ಯ ಉತ್ತರ ಕರ್ನಾಟಕಕ್ಕೆ ಅನ್ಯಾಯ ಎನ್ನುತ್ತಿರುವ ಅತೃಪ್ತ ಜನಪ್ರತಿನಿಧಿಗಳು, ಮೊದಲು ತಮ್ಮ ಕ್ಷೇತ್ರಗಳತ್ತ ನೋಡಲಿ. ಭೀಕರ ಬರದ ಭೀತಿಯಲ್ಲಿರುವ ಸಂದರ್ಭದಲ್ಲಿ ತಾವೇನು ಮಾಡುತ್ತಿದ್ದೇವೆ ಎಂಬ ಅರಿವು ಅವರಿಗಿರಲಿ. ನರೇಗಾ ಕಾಮಗಾರಿಗೆ ಹರಿದುಬರುವ ಹಣ ಸದುಪಯೋಗವಾಗಿದೆಯೇ, ಕನ್ನಡ ಶಾಲೆಗಳಲ್ಲಿ ಶಿಕ್ಷಕರಿಲ್ಲವೇ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿಯೇನು- ಇಂತಹ ತಳಮಟ್ಟದ ಸಮಸ್ಯೆಗಳ ಪರಿಹಾರದಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ಮೊದಲು ರೂಢಿಸಿಕೊಳ್ಳಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಾರ್ವಜನಿಕರ ಮೇಲೆ ಸವಾರಿ ಮಾಡಲು ಬಿಡುವುದಿಲ್ಲ..’; ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಸುಪ್ರೀಂ ಕಿಡಿ

0
"ಸಾರ್ವಜನಿಕರ ಮೇಲೆ ಸವಾರಿ ಮಾಡಲು ನಾವು ಬಿಡುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದ್ದು, ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಎದುರಿಸಲು ತಾವು ಸಕ್ರಿಯರಾಗಿರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಳಿಗೆ ಸೂಚನೆ ನೀಡಿದೆ. 1945ರ...