ಪೌರತ್ವ ತಿದ್ದುಪಡಿ ಮಸೂದೆ 2019 ಅನ್ನು “ವಿಭಜಕ, ತಾರತಮ್ಯದಿಂದ ಕೂಡಿದ ಮತ್ತು ಅಸಂವಿಧಾನಿಕ” ಎಂದು ಕರೆದಿರುವ ಬರಹಗಾರರು, ಕಲಾವಿದರು, ಮಾಜಿ ನ್ಯಾಯಾಧೀಶರು ಮತ್ತು ಅಧಿಕಾರಿಗಳು ಸೇರಿದಂತೆ 600 ಕ್ಕೂ ಹೆಚ್ಚು ಪ್ರಮುಖ ವ್ಯಕ್ತಿಗಳು ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಪ್ರಸ್ತಾವಿತ ಕಾನೂನನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿ ಪತ್ರ ಬರೆದಿದ್ದಾರೆ.
ಮನವಿಗೆ ಸಹಿ ಹಾಕಿದವರಲ್ಲಿ ಬರಹಗಾರರಾದ ನಯನತಾರಾ ಸಾಹಗಲ್, ಅಶೋಕ್ ವಾಜಪೇಯಿ, ಅರುಂಧತಿ ರಾಯ್, ಪಾಲ್ ಜಕಾರಿಯಾ, ಅಮಿತಾವ್ ಘೋಷ್ ಮತ್ತು ಶಶಿ ದೇಶಪಾಂಡೆ ಸೇರಿದ್ದಾರೆ. ಕಲಾವಿದರಾದ ಟಿ.ಎಂ.ಕೃಷ್ಣ, ಅತುಲ್ ದೋಡಿಯಾ, ವಿವಾನ್ ಸುಂದರಂ, ಸುಧೀರ್ ಪಟ್ವರ್ಧನ್, ಗುಲಮ್ಮೊಹಮ್ಮದ್ ಶೇಖ್ ಮತ್ತು ನಿಲಿಮಾ ಶೇಖ್ ಇದ್ದಾರೆ. ಚಲನಚಿತ್ರ ನಿರ್ಮಾಪಕರಾದ ಅಪರ್ಣ ಸೇನ್, ನಂದಿತಾ ದಾಸ್ ಮತ್ತು ಆನಂದ್ ಪಟವರ್ಧನ್ ಪ್ರಮುಖರಾಗಿದ್ದಾರೆ. ವಿದ್ವಾಂಸರಾದ ರೋಮಿಲಾ ಥಾಪರ್, ಪ್ರಭಾತ್ ಪಟ್ನಾಯಕ್, ರಾಮಚಂದ್ರ ಗುಹಾ, ಗೀತಾ ಕಪೂರ್, ಅಕೀಲ್ ಬಿಲ್ಗ್ರಾಮಿ ಮತ್ತು ಜೋಯಾ ಹಸನ್ ವಿರೋಧಕ್ಕೆ ದನಿಗೂಡಿಸಿದ್ದರೆ. ಕಾರ್ಯಕರ್ತರಾದ ಟೀಸ್ತಾ ಸೆಟಲ್ವಾಡ್, ಹರ್ಷ್ ಮಂದಿರ್, ಅರುಣಾ ರಾಯ್ ಮತ್ತು ಬೆಜವಾಡ ವಿಲ್ಸನ್ ಇದ್ದಾರೆ. ನಿವೃತ್ತ ನ್ಯಾಯಮೂರ್ತಿ ಎಪಿ ಶಾ, ಯೋಗೇಂದ್ರ ಯಾದವ್, ಜಿ.ಎನ್. ದೇವಿ, ನಂದಿನಿ ಸುಂದರ್ ಮತ್ತು ವಜಾಹತ್ ಹಬೀಬುಲ್ಲಾ ಸೇರಿದಂತೆ ಇತರರು ಪ್ರಮುಖರಾಗಿದ್ದಾರೆ.
ಭಾರತದ ಸಂವಿಧಾನವು “ಲಿಂಗ, ಜಾತಿ, ಧರ್ಮ, ವರ್ಗ, ಸಮುದಾಯ ಅಥವಾ ಭಾಷೆಯ ಬೇಧವಿಲ್ಲದೆ ಸಮಾನತೆಯ ಮೂಲಭೂತ ಅಂಶಗಳನ್ನು ಒತ್ತಾಯಿಸುತ್ತದೆ” ಎಂದು ಪ್ರತಿಪಾದಿಸಿದ ಬುದ್ಧಿಜೀವಿಗಳು, ಪೌರತ್ವ ತಿದ್ದುಪಡಿ ಮಸೂದೆ ಮತ್ತು “ರಾಷ್ಟ್ರವ್ಯಾಪಿ ಎನ್ಆರ್ಸಿ (ರಾಷ್ಟ್ರೀಯ ನಾಗರಿಕ ಪೌರತ್ವ ನೋಂದಣಿ)ಯು ದೇಶಾದ್ಯಂತ ಜನರಿಗೆ ಸಂಕಷ್ಟವನ್ನು ತಂದೊಡ್ಡಲಿದೆ ಎಂದು ಆರೋಪಿಸಿದ್ದರೆ. ಇದು ಭಾರತೀಯ ಗಣರಾಜ್ಯದ ಸ್ವರೂಪವನ್ನು ಮೂಲಭೂತವಾಗಿ ಮತ್ತೆಂದೂ ಸರಿಪಡಿಸಲಾಗದಂತೆ ಹಾನಿಗೊಳಿಸುತ್ತದೆ ಎಂದು ದೂರಿದ್ದಾರೆ.
“ಇದಕ್ಕಾಗಿಯೇ ಎಲ್ಲಾ ಆತ್ಮಸಾಕ್ಷಿಯ ನಾಗರಿಕರು ಸರ್ಕಾರವು ಮಸೂದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಬೇಕೆಂದು ಕರೆ ನೀಡಿರುವ ಅವರು, ಸರ್ಕಾರವು ಸಂವಿಧಾನಕ್ಕೆ ದ್ರೋಹ ಮಾಡಬಾರದು ಎಂದು ಕಿಡಿಕಾರಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ಪರಿಚಯಿಸಿದ ಪೌರತ್ವ ತಿದ್ದುಪಡಿ ಮುಸೂದೆಯನ್ನು ಸೋಮವಾರ ಮಧ್ಯರಾತ್ರಿ ಸುಮಾರು 12 ಗಂಟೆಗಳ ಚರ್ಚೆಯ ನಡುವೆ ಲೋಕಸಭೆಯು ಅಂಗೀಕರಿಸಿದೆ. ಪ್ರತಿಪಕ್ಷಗಳು ಪ್ರಸ್ತಾವಿತ ಕಾನೂನಿಗೆ ವಿರುದ್ಧವಾಗಿ ಮತಚಲಾಯಿಸಿದರು. ಅದು ಮೊದಲ ಬಾರಿಗೆ ಧರ್ಮದ ಆಧಾರದ ಮೇಲೆ ಭಾರತೀಯ ರಾಷ್ಟ್ರೀಯತೆಯನ್ನು ವಿಭಜಿಸಲು ಕಾರಣವಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.
2015 ರ ಮೊದಲು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಅಕ್ರಮ ವಲಸೆ ಬಂದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡಲು ಮಸೂದೆಯಲ್ಲಿ ಪ್ರಸ್ತಾಪವಿದೆ. ಇದರ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ವ್ಯಕ್ತವಾಗಿವೆ.