Homeಅಂಕಣಗಳುಹಿಂಸೆಯನ್ನು ವಿರೋಧಿಸೋಣ, ಜೊತೆಗೆ.....

ಹಿಂಸೆಯನ್ನು ವಿರೋಧಿಸೋಣ, ಜೊತೆಗೆ…..

- Advertisement -
- Advertisement -

ಗೌರಿ ಲಂಕೇಶ್
ನವೆಂಬರ್ 23, 2005 (`ಕಂಡಹಾಗೆ’ ಸಂಪಾದಕೀಯದಿಂದ) |

ಹಿಂಸೆ. ಈ ಪದ ವಾಸ್ತವದಲ್ಲಿ ಪಡೆಯುವ ನಾನಾ ಸ್ವರೂಪಗಳ ಬಗ್ಗೆ ಇತ್ತೀಚೆಗೆ ನಾನಾ ಚರ್ಚೆಗಳು ನಡೆದಿವೆ. ನಮ್ಮದು ಅಹಿಂಸಾವಾದವನ್ನು ನಂಬಿರುವ ದೇಶ ಎಂದೇ ಹೇಳಿಕೊಂಡು ಬಂದಿರುವ ಭಾರತದಲ್ಲಿ ಇವತ್ತಿಗೂ ದುರ್ಬಲರ ಮೇಲೆ ದೌರ್ಜನ್ಯ ನಡೆಯಿತ್ತಲೇ ಇದೆ. ಅದನ್ನೆಲ್ಲ ನಮ್ಮ ಸಮಾಜದ ಹುಳುಕುಗಳು ಎಂದು ಹೇಳುತ್ತಾ ಸುಮ್ಮನಿದ್ದವರೆಲ್ಲ, ಯಾವಾಗ ಹಲವರು ಆ ಹುಳುಕುಗಳನ್ನು ನಿವಾರಿಸಲು ಹಿಂಸೆಯೆನಿಸುವ ಮಾರ್ಗಕ್ಕಿಳಿದರೋ, ಆಗ ಈ ಹಿಂಸಾತ್ಮಕ ಮಾರ್ಗಕ್ಕೆ ನಮ್ಮ ಸಮಾಜದಲ್ಲಿ ಜಾಗವಿಲ್ಲ ಎಂದು ಸಿಡಿದೆದ್ದಿದ್ದಾರೆ.
ಹೌದು, ಹಿಂದೆಯನ್ನು ಎಂದಿಗೂ ಸಹಿಸಕೂಡದು. ಆದರೆ ನಮ್ಮ ಕಣ್ಣುಮುಂದೆಯೇ ನಮ್ಮ ಸುತ್ತಲು ನಡೆಯುತ್ತಿರುವ ಹಿಂಸೆಯ ಬಗ್ಗೆ ಯಾಕೆ ಎಲ್ಲರಿಗೂ ಜಾಣ ಕುರುಡು? ಇವತ್ತು ಪ್ರತಿನಿತ್ಯದ ಹಿಂಸೆ ಉದ್ಭವಿಸುತ್ತಿರುವುದು ಆ ಯುವಕರು ಹಿಡಿದಿರುವ ಬಂದೂಕುಗಳಿಂದಲ್ಲ, ಬದಲಾಗಿ ಸಮಾಜದ ಪುರುಷ ಪ್ರಧಾನ ಆಲೋಚನೆ, ಊಳಿಗಮಾನ್ಯ ವ್ಯವಸ್ಥೆ, ಉಳ್ಳವರ ಪರವಾಗಿರುವ ರಾಜಕೀಯ, ಜಾಗತೀಕರಣದಿಂದಾಗುತ್ತಿರುವ ಅನ್ಯಾಯ…. ಇಂಥದೆಲ್ಲ ವಿಭಿನ್ನ ಬಗೆಯ ಹಿಂಸೆಯ ರೂಪಗಳಿಂದ. ಇದು ನಮ್ಮ ಭಾರತೀಯ ಸಮಾಜಕ್ಕೆ ಮಾತ್ರ ಅನ್ವಯಿಸುವುದಿಲ್ಲ, ಬದಲಾಗಿ ಮೇಲೆ ಹೇಳಿದ ಅಂಶಗಳು ಜಾಗತಿಕ ಮಟ್ಟದಲ್ಲೂ ಹಿಂಸೆಯನ್ನು ಹುಟ್ಟುಹಾಕುತ್ತಿದೆ.
ಇತ್ತೀಚೆಗೆ ಪ್ಯಾರಿಸ್ ನಗರದಲ್ಲಿ ಒಂದು ಪ್ರಯೋಗವನ್ನು ನಡೆಸಲಾಯಿತು. ಎಲ್ಲ ರೀತಿಯಲ್ಲೂ ಸಮಾನವಾದ ಅರ್ಹತೆಗಳನ್ನುಳ್ಳ ಎರಡು ಅರ್ಜಿಗಳನ್ನು-ಒಂದರಲ್ಲಿ ಕ್ರಿಶ್ಚಿಯನ್ ಹೆಸರನ್ನು ಹಾಗೂ ಪ್ರತಿಷ್ಠಿತ ಬಡಾವಣೆಯ ವಿಳಾಸವನ್ನು, ಮತ್ತೊಂದರಲ್ಲಿ ಮುಸ್ಲಿಂ ಹೆಸರನ್ನು ಹಾಗೂ ಬಡ-ಮಧ್ಯಮ ವರ್ಗದವರು ವಾಸಿಸುವ ಏರಿಯಾದ ವಿಳಾಸವನ್ನು ನಮೂದಿಸಿ-ಕೆಲಸಕ್ಕೆ ಅಹ್ವಾನಿಸಿದ್ದ ಕಚೇರಿಗಳಿಗೆ ಕಳುಹಿಸಲಾಗಿತ್ತು. ಸ್ವರ್ಗದಂತಹ ಪ್ಯಾರಿಸ್‍ನಲ್ಲೂ ನರಕಗಳಿರುತ್ತವೆ ಎಂಬುದಕ್ಕೆ ಸಾಕ್ಷಿ ನೀಡುವಂತೆ ಕ್ರಿಶ್ಚಿಯನ್ ಹೆಸರಿನ, ಪ್ರತಿಷ್ಠಿತ ಬಡಾವಣೆಯ ಅರ್ಜಿಗೆ ಐದು ಅಹ್ವಾನಗಳು ಬಂದರೆ, ಮುಸ್ಲಿಂ ಹೆಸರಿನ ಬಡವರ್ಗಗಳ ಏರಿಯಾದ ಅರ್ಜಿಗೆ ಒಂದೇ ಒಂದು ಆಹ್ವಾನ ಬಂದಿತ್ತು.
ಇಂಥಾ ಅಸಮಾನತೆಯೂ ಒಂದು ಬಗೆಯ ಹಿಂಸೆ. ಈ ಹಿಂಸೆಯನ್ನು ಅದೆಷ್ಟು ದಿನ ತಾನೆ ಅಹಿಂಸೆಯ ನೆಪದಿಂದ ಸಹಿಸಿಕೊಳ್ಳಲು ಸಾಧ್ಯ. ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಾದಾಗ ಪ್ಯಾರಿಸ್‍ನ ಬಿಸಿರಕ್ತದ ಹುಡುಗರು ಗಲಭೆಗಿಳಿದಿದ್ದಾರೆ. ಆ ಗಲಭೆಗಳನ್ನು ವಿರೋಧಿಸುವುದು ಎಷ್ಟು ಜರೂರೋ, ಆ ಗಲಭೆಗೆ ಕಾರಣವಾದ ನಮ್ಮ ಸಮಾಜದ ಅಂತರ್ಗತ ಹಿಂಸೆಗಳನ್ನು ಹೋಗಲಾಡಿಸಬೇಕಾದ್ದೂ ನಮ್ಮೆಲ್ಲರ ಮೇಲಿರುವ ಹೊಣೆ. ಇಲ್ಲವಾದಲ್ಲಿ ಹಿಂಸೆಯನ್ನು ವಿರೋಧಿಸುವ ಹಕ್ಕನ್ನೇ ನಾವೆಲ್ಲ ಕಳೆದುಕೊಂಡುಬಿಡುತ್ತೇವೆ.
ಅದಕ್ಕೆ ಮೊದಲೇ ಹೇಳಿದ್ದು. ‘ಹಿಂಸೆ’ ಎಂದ ಕೂಡಲೇ “ಸಹಿಸಕೂಡದು” ಎಂದು ಅರಚುವ ಬದಲಾಗಿ ಆ ಹಿಂಸೆಯ ಮೂಲ ಎಲ್ಲಿದೆ ಎಂದು ವಿಶ್ಲೇಷಿಸುವ ಅಗತ್ಯ ಇವತ್ತಿನ ತುರ್ತು ಎಂದು. ಏಕೆಂದರೆ ಪ್ಯಾರಿಸ್‍ಗೆ ಬೆಂಕಿ ಹಚ್ಚಿರುವವರು ಹಿಂಸಾವಾದಿಗಳೂ ಅಲ್ಲ, ಭಯೋತ್ಪಾದಕರೂ ಅಲ್ಲ, ಬದಲಾಗಿ ಅದು ಅಲ್ಲಿನ ವ್ಯವಸ್ಥೆಯಲ್ಲೇ ಅಡಗಿರುವ ಹಿಂಸೆಗೆ ಬಲಿಯಾದವರ ಪ್ರತಿಕ್ರಿಯೆ ಅಷ್ಟೇ. ಇಂತಹ ಪ್ರತಿಕ್ರಿಯೆಯನ್ನು ನಿಷೇಧಾಜ್ಞೆಯಿಂದಾಗಲಿ, ಸ್ಪೆಷಲ್ ಸ್ಕ್ವಾಡ್‍ಗಳಿಂದಾಗಲಿ, ಗೋಲಿಬಾರ್‍ನಿಂದಾಗಲಿ ತಡೆಯಲಾಗುವುದಿಲ್ಲ.
ಇದೆಲ್ಲ ನಾವು ಕೈಕಟ್ಟಿ ಕೂತಿರುವಷ್ಟು ಕಾಲ ನಡೆಯುತ್ತಲೇ ಇರುತ್ತೆ. ಜನರಿಗೆ ಅನ್ಯಾಯದ ಬಗ್ಗೆ ಅರಿವು ಮೂಡಿದ ನಂತರವೂ ಅವರು ಕೈಕಟ್ಟಿ ಕೂತಿರಬೇಕು ಎಂದು ನಿರೀಕ್ಷಿಸಲಾಗುವುದಿಲ್ಲ. ಹಾಗೊಮ್ಮೆ ಅವರು ಪ್ಯಾರಿಸ್ ಯುವಕರಂತೆ ಕಾರ್ಯೋನ್ಮುಖರಾದರೆ ಅವರಿಗೆ ಆಗ ಅಹಿಂಸೆಯ ಪಾಠ ಬೋಧಿಸಲಾಗುವುದಿಲ್ಲ. ಆದ್ದರಿಂದಲೇ ಹಿಂಸೆಯ ವಿವಿಧ ವ್ಯಾಖ್ಯಾನಗಳಿಗಿಂತ ಅದರ ಬೇರು ಎಲ್ಲಿದೆ ಎಂದು ಹುಡುಕಬೇಕಿದೆ. ಈ ಪ್ರಶ್ನೆಯನ್ನು ಗಾಂಧೀಜಿಯವರೂ ನಿರಾಕರಿಸಿರಲಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

Fact Check : ನಿರುದ್ಯೋಗ ಕುರಿತ ಬಿಜೆಪಿ ಸಂಸದನ ಹೇಳಿಕೆಯ ವಿಡಿಯೋ ‘ಡೀಪ್ ಫೇಕ್’...

0
ಯೂಟ್ಯೂಬರ್ ಒಬ್ಬರು ನಿರುದ್ಯೋಗದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಉತ್ತರ ಪ್ರದೇಶದ ಆಝಂಗಢ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ ಅಥವಾ ನಿರಹುವಾ ಅವರು "ಪ್ರಧಾನಿ...