Homeಮುಖಪುಟಈ ಅವಾಂತರದ ಕೇಂದ್ರ ಪಾತ್ರಧಾರಿ ಸಿದ್ದು!!?? ಏನೇಳುತ್ತಿವೆ ವಾದಗಳು

ಈ ಅವಾಂತರದ ಕೇಂದ್ರ ಪಾತ್ರಧಾರಿ ಸಿದ್ದು!!?? ಏನೇಳುತ್ತಿವೆ ವಾದಗಳು

- Advertisement -
- Advertisement -

| ನೀಲಗಾರ |

ಸಮ್ಮಿಶ್ರ ಸರ್ಕಾರದ ಬಂದ ನಂತರ ಸಿದ್ದರಾಮಯ್ಯನವರ ಪಾತ್ರದ ಕುರಿತಾಗಿ ಹಲವು ಅಭಿಪ್ರಾಯಗಳು ಜೆಡಿಎಸ್ ಮತ್ತು ಕಾಂಗ್ರೆಸ್ ಪಾಳೆಯದಲ್ಲಿ ಓಡಾಡುತ್ತಲೇ ಇವೆ. ಈ ರಾಜೀನಾಮೆ ಅವಾಂತರದ ಹಿಂದೆಯೂ ಸಿದ್ರಾಮಯ್ಯನವರೇ ಕೆಲಸ ಮಾಡಿದ್ದಾರೆ ಅನ್ನೋ ವಾದ ಹುಟ್ಟುಕೊಳ್ಳಲೂ ಇಂಥಾ ಅಭಿಪ್ರಾಯಗಳು ನೀರೆರೆಯುತ್ತಿವೆ. ಇದು ಎಷ್ಟರಮಟ್ಟಿಗೆ ಸತ್ಯವೋ ಸುಳ್ಳೋ ಗೊತ್ತಿಲ್ಲ. ಅವು ಹೀಗಿವೆ.

1. ಮೊಟ್ಟ ಮೊದಲ ದಿನದಿಂದಲೂ ಸಿದ್ದರಾಮಯ್ಯ ಈ ಸರ್ಕಾರದ ಪರವಾಗಿ ಇರಲಿಲ್ಲ. ಈ ಸರ್ಕಾರ ಬಿದ್ದು ಹೋಗಲೇಬೇಕು ಎನ್ನುವುದು ಅವರ ಇರಾದೆಯಾಗಿತ್ತು. ಮೊದಲಿಂದಲೂ ಭಿನ್ನಮತ ಇರುವಂತೆ ನೋಡಿಕೊಂಡಿದ್ದು ಅವರೇ. ಸರ್ಕಾರದಲ್ಲಿ ಡಿಕೆಶಿ ಮತ್ತು ಪರಮೇಶ್ವರ್ ಅವರ ಕೈ ಮೇಲಾದದ್ದೂ ಸಹಾ ಅವರಿಗೆ ಅಸಮಾಧಾನ ತಂದಿತ್ತು. ಭಿನ್ನಮತವನ್ನು ಹುಟ್ಟುಹಾಕಿ ತನ್ನ ಹಿಡಿತ ಹೆಚ್ಚಾಗುವಂತೆ ನೋಡಿಕೊಳ್ಳುತ್ತಿದ್ದರು. ಸುಮಲತಾ ಅವರ ಕ್ಯಾಂಡಿಡೇಟ್. ಆ ಭಾಗದ ಎಲ್ಲಾ ಕಾಂಗ್ರೆಸ್ ನಾಯಕರೂ ಇವರ ಹಿಂಬಾಲಕರೇ. ಅವರೆಲ್ಲರೂ ಸುಮಲತಾಗೆ ಬೆಂಬಲಿಸುವಂತೆ ನೋಡಿಕೊಂಡರು. ಕೆ.ಎನ್.ರಾಜಣ್ಣರನ್ನು ಎತ್ತಿಕಟ್ಟಿ ದೇವೇಗೌಡರೂ ಸೋಲುವಂತೆ ನೋಡಿಕೊಂಡರು. ಕೋಲಾರದಲ್ಲಿ ರಮೇಶ್ ಕುಮಾರ್‍ರನ್ನು ಮನವೊಲಿಸುವ ಕೆಲಸ ಮಾಡದೇ ಮುನಿಯಪ್ಪರ ಸೋಲಿನ ಅಂತಹ ಹೆಚ್ಚಾಗುವಂತೆ ಆಯಿತು. ಮೊಯಿಲಿಯವರ ವಿರುದ್ಧ ಕೆಲಸ ಮಾಡಿದ್ದ ಚಿಕ್ಕಬಳ್ಳಾಪುರದ ಸುಧಾಕರ್ ಮನೆಯಲ್ಲೇ ಫಲಿತಾಂಶದ ದಿನ ಊಟ ಮಾಡಿದರು.

ಲೋಕಸಭಾ ಫಲಿತಾಂಶವು ಅವರಿಗೆ ಬೇಸರವನ್ನೇನೂ ತಂದಿರಲಿಲ್ಲ. ಅಂದು ಸಿದ್ದರಾಮಯ್ಯನವರ ಮನೆಯಲ್ಲಿ ಸೇರಿದ್ದವರಲ್ಲಿ ಎಲ್ಲರೂ ಜೋಕ್ ಮಾಡಿಕೊಂಡು ನಗುತ್ತಿದ್ದರು. ಎಸ್.ಟಿ.ಸೋಮಶೇಖರ್ ಸಂಪೂರ್ಣ ಅವರು ಹೇಳಿದಂತೆ ಕೇಳದಿದ್ದರೂ, ಭೈರತಿ ಬ್ರದರ್ಸ್ ಪೂರ್ಣ ಅವರ ಹಿಡಿತದಲ್ಲಿರುವವರು. ಹಾಗಾಗಿ ಇವರೇ ಬಿಜೆಪಿಗೆ ಬೆಂಬಲ ಕೊಡಲು ಹೇಳಿದ್ದಾರೆ ಎಂಬುದು ಒಂದು ವಾದ. ಇದಕ್ಕೆ ಪೂರಕವಾಗಿ 2008ರಲ್ಲಿ ಬಿಜೆಪಿಗೆ 5 ಜನ ಪಕ್ಷೇತರರ ಬೆಂಬಲದ ಅಗತ್ಯವಿತ್ತು. ಪಕ್ಷೇತರರಲ್ಲಿ ಇಬ್ಬರಾದ ವರ್ತೂರು ಪ್ರಕಾಶ್ ಮತ್ತು ನರೇಂದ್ರಸ್ವಾಮಿ ಸಿದ್ದರಾಮಯ್ಯನವರು ಹೇಳಿದವರಿಗೇ ತಮ್ಮ ಬೆಂಬಲ ಎಂದಿದ್ದರು. ಆದರೆ, ಇಬ್ಬರಿಗೂ ಸಿದ್ದರಾಮಯ್ಯನವರು ಬಿಜೆಪಿಗೆ ಹೋಗಿ ಮಂತ್ರಿಗಳಾಗಿ ಎಂದೇ ಹೇಳಿದ್ದರು. ಬಾಯಿ ಭದ್ರವಿಲ್ಲದ ವರ್ತೂರು ಇದನ್ನು ನಂತರದ ದಿನಗಳಲ್ಲಿ ಬಹಿರಂಗಪಡಿಸಿದ್ದರು. ಹಾಗಾಗಿ ಸಿದ್ದರಾಮಯ್ಯನವರು ಈ ಬಿಕ್ಕಟ್ಟಿನ ಸೃಷ್ಟಿಗೆ ನೇರ ಕಾರಣ.

ಶಾಸಕರ ರಾಜೀನಾಮೆ ನಂತರ ಬೆಂಗಳೂರಿಗೆ ಬಂದ ಕೆ.ಸಿ.ವೇಣುಗೋಪಾಲ್‍ರಿಗೆ ‘ಪ್ರತಿಪಕ್ಷದಲ್ಲಿ ಕೂತು ಪಕ್ಷ ಕಟ್ಟೋಣ. ಸಾಕಿನ್ನು ಇವರ ಸಹವಾಸ’ ಎಂದೇ ಸಿದ್ದು ಹೇಳಿದ್ದಾರೆ. ಇವೆಲ್ಲವೂ ಸಿದ್ದರಾಮಯ್ಯನವರ ಧೋರಣೆಯನ್ನು ತೋರಿಸುತ್ತದೆ. ಸರ್ಕಾರ ಬೀಳಲಿ, ವಿರೋಧಪಕ್ಷವಾಗಿರೋಣ. ಮುಂದಿನ ಚುನಾವಣೆಯಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರೋಣ. ಆ ಹೊತ್ತಿಗೆ ಈಗ ಹೋದವರೂ ವಾಪಸ್ಸು ಬರುತ್ತಾರೆ ಎಂಬುದು ಅವರ ಲೆಕ್ಕಾಚಾರ. ಇದು ಮೊದಲ ವಾದ.

2. ಅವರೇ ಕಳಿಸಿದ್ದು ಎನ್ನುವುದು ವಾಸ್ತವವಲ್ಲ. ಆದರೆ, ಮೊದಮೊದಲು ಎತ್ತಿಕಟ್ಟಿದ್ದರು. ತನ್ನನ್ನು ಉಪೇಕ್ಷಿಸುವಂತಿಲ್ಲ ಎಂಬ ಸಂದೇಶ ಕೊಡುವುದು ಸರ್ಕಾರವನ್ನು ದುರ್ಬಲಗೊಳಿಸಿ ಸಂದರ್ಭ ನೋಡಿ ಸರ್ಕಾರ ಬೀಳಿಸುವುದು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆದುಕೊಂಡಲ್ಲಿ ಬೆಂಬಲ ಹಿಂತೆಗೆದುಕೊಂಡು ಚುನಾವಣೆ ಎದುರಿಸುವುದು ಅವರ ಉದ್ದೇಶವಾಗಿತ್ತು. ಹಾಗಾಗಿಯೇ ರಮೇಶ್ ಜಾರಕಿಹೊಳಿ & ಟೀಂ ಮುಂಬೈಗೆ ಹೋಗಿ ಕೂತಾಗ ಅದರ ಹಿಂದೆ ಸಿದ್ದರಾಮಯ್ಯನವರದ್ದೇ ಕೈವಾಡವಿತ್ತು. ಉಮೇಶ್ ಜಾಧವ್‍ರಿಗೂ ಧೈರ್ಯ ಕೊಟ್ಟು ಆ ಕಡೆಗೆ ಅವರೇ ಕಳಿಸಿದ್ದರು. ಇಲ್ಲದಿದ್ದರೆ ಅಂತಹ ಧೈರ್ಯ ಅವರಿಗೆ ಇರಲೇ ಇಲ್ಲ. ಅಲ್ಲಿಂದಾಚೆಗೆ ಜಾಧವ್‍ರು ಬಿಜೆಪಿಯ ಸಂಪರ್ಕಕ್ಕೆ ಹೆಚ್ಚೆಚ್ಚು ಹೋದರೂ ಅದನ್ನು ತಡೆಯುವ ಕೆಲಸ ಇವರು ಮಾಡಲಿಲ್ಲ. ಅಂತಿಮವಾಗಿ ಅದು ಖರ್ಗೆಯವರ ಸೋಲಿನಲ್ಲಿ ಪರ್ಯವಸಾನವಾಯಿತು. ಕಡೆಯ ದಿನಗಳಲ್ಲಿ ಸ್ವತಃ ಸಿದ್ದು ಕಲಬುರ್ಗಿಗೆ ಹೋಗಿ ಮೂರ್ನಾಲ್ಕು ದಿನ ಉಳಿದರೂ ಏನೂ ಪ್ರಯೋಜವಾಗಲಿಲ್ಲ. ಸೋಮಶೇಖರ್, ಭೈರತಿ ಮತ್ತಿತರರಿಗೂ ಹೋಗಿ ಎಂದು ಇವರು ಹೇಳಿಲ್ಲ. ಹಾಗಾಗಿ ಇಂದಿನ ಬಿಕ್ಕಟ್ಟಿಗೆ ಸಿದ್ದರಾಮಯ್ಯನವರು ಕಾರಣ, ಆದರೆ ಪರೋಕ್ಷ ಕಾರಣ ಎಂಬುದು ಎರಡನೇ ವಾದ.

3. ಸಿದ್ದರಾಮಯ್ಯನವರು ಸ್ಟ್ರಾಟೆಜಿಸ್ಟ್ ಅಲ್ಲವೇ ಅಲ್ಲ. ಅವರ ಸಮಸ್ಯೆ ಇರುವುದು ಬೇರೆ ರೂಪದಲ್ಲಿ. ಅವರು ಇಂತಹ ತಂತ್ರಗಳನ್ನೆಲ್ಲಾ ಹೆಣೆದು ಕೆಲಸ ಮಾಡಿಲ್ಲ. ಆದರೆ, ಸಮನ್ವಯ ಸಮಿತಿ ಅಧ್ಯಕ್ಷರಾಗಿ ತಮ್ಮ ಪಾತ್ರ ನಿರ್ವಹಿಸಲಿಲ್ಲ. ಮೊದಲ ದಿನದಿಂದ ಎಂದೂ ಸಮ್ಮಿಶ್ರ ಸರ್ಕಾರದ ಕುರಿತು ಹೃತ್ಪೂರ್ವಕವಾದ ಒಂದೇ ಒಂದು ಮಾತನ್ನು ಹೇಳಲಿಲ್ಲ. ಸಮಸ್ಯೆಗಳಾದಾಗ ಮಧ್ಯೆ ನಿಂತು ಬಗೆಹರಿಸಲಿಲ್ಲ. ಬದಲಿಗೆ, ತಮ್ಮ ವಲಯದಲ್ಲಿ ಸದಾ ಗೌಡರ ಕುಟುಂಬ ಮತ್ತು ಸಿಎಂಅನ್ನು ಬೈದುಕೊಂಡೇ ಕಾಲ ಕಳೆದರು. ಇದು ಒಟ್ಟಾರೆ, ಪ್ರಯೋಜನಕ್ಕಿಲ್ಲದ ಸರ್ಕಾರ ಎಂಬ ಭಾವನೆ ಬಲವಾಗಲು ಕಾರಣವಾಯಿತು. ಅವರ ಹತ್ತಿರದ ಬಳಗಕ್ಕೆ ಈ ಸರ್ಕಾರ ಬೀಳಲು ಏನು ಮಾಡಿದರೂ ತಪ್ಪಿಲ್ಲ ಎಂಬ ಭಾವನೆ ಬಲವಾಗುವಂತೆ ಮಾಡಿದರು.

ರಾಮಲಿಂಗಾರೆಡ್ಡಿ ಮತ್ತಿತರರನ್ನು ಉಪೇಕ್ಷೆ ಮಾಡಿದ್ದು, ಬಿ.ಸಿ.ಪಾಟೀಲರಂಥವರಿಗೆ ಮಂತ್ರಿ ಸ್ಥಾನ ಸಿಗದಂತಾಗಿದ್ದು ಇಂತಹ ಹಲವು ತಪ್ಪುಗಳಿಗೆ ಸಿದ್ದರಾಮಯ್ಯರೇ ಕಾರಣ. ಎಚ್.ವಿಶ್ವನಾಥ್‍ರು ಕಾಂಗ್ರೆಸ್ ಬಿಟ್ಟು ಹೋಗಲು ಸಿದ್ದರಾಮಯ್ಯನವರ ಉಡಾಫೆ ವ್ಯಕ್ತಿತ್ವ ಹಾಗೂ ಅಹಂಕಾರದ ಧೋರಣೆಗಳು ಪಾತ್ರ ವಹಿಸಿದ್ದವು. ಈ ಸರ್ಕಾರ ಉಳಿಸಿಕೊಳ್ಳುವುದರಲ್ಲಿ ಅವರಿಗೆ ಯಾವ ಆಸಕ್ತಿಯೂ ಇರಲಿಲ್ಲ. ಹಾಗೆಂದು ನೀವು ಬಿಜೆಪಿಗೆ ಹೋಗಿ ಎಂದು ಅವರು ಹೇಳಿಲ್ಲ. – ಇದು ಮೂರನೆಯ ವಾದ.

ಮೂರರಲ್ಲಿ ಯಾವುದನ್ನೂ ತಳ್ಳಿ ಹಾಕುವಂತಿಲ್ಲ. ಆದರೆ ಮೂರನೆಯದಷ್ಟೇ ಕಾರಣ ಎಂದುಕೊಂಡರೂ ಸಿದ್ದರಾಮಯ್ಯನವರ ನಡೆ ಆಕ್ಷೇಪಾರ್ಹವೇ ಆಗಿತ್ತು. ರಾಜ್ಯದಲ್ಲಿ ಪಕ್ಷವನ್ನು ಕಟ್ಟಲು ಪ್ರವಾಸ ಮಾಡಿದರೂ ಸಮ್ಮಿಶ್ರ ಸರ್ಕಾರವನ್ನು ಬೆಂಬಲಿಸಿದಂತಾಗುತ್ತದೆಂಬ ಮಾತಿಗೆ ಅರ್ಥವಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡುತ್ತಲೇ ಉಳಿದುದನ್ನು ಮಾಡುವುದು ಮುತ್ಸದ್ದಿಯ ಲಕ್ಷಣ. ಅಂತಹ ಮುತ್ಸದ್ದಿ ಅವರಲ್ಲವೇ ಅಲ್ಲ. ಸರ್ಕಾರದ ಬಗ್ಗೆಯಿರಲಿ, ಮಲ್ಲಿಕಾರ್ಜುನ ಖರ್ಗೆಯವರನ್ನು ಹೃತ್ಪೂರ್ವಕವಾಗಿ ಅವರು ಹೊಗಳಿದ್ದೇ ಇಲ್ಲ. ಖರ್ಗೆಯಂಥವರು ಪಾರ್ಲಿಮೆಂಟಿನಲ್ಲಿರಬೇಕು ಎಂದು ಕಲಬುರ್ಗಿಯ ಚುನಾವಣಾ ಭಾಷಣದಲ್ಲಿ ಹೇಳಿದರಾದರೂ, ಅದೂ ಸಹಾ ಒಂದೆರಡು ವಾಕ್ಯಗಳಿಗಿಂತ ಹೆಚ್ಚಿರಲಿಲ್ಲ. ತಾನು ಯಾವುದೋ ಒಂದು ರೀತಿಯಲ್ಲಿ ಖರ್ಗೆಯವರ ಅವಕಾಶವನ್ನು ಕಸಿದಿದ್ದೇನೆ ಎಂದು ಸಿದ್ದರಾಮಯ್ಯನವರು ಖಾಸಗಿ ಮಾತುಕತೆಗಳಲ್ಲಿಯಾದರೂ ಹೇಳಿದ್ದು ಬೆಳಕಿಗೆ ಬಂದಿಲ್ಲ.

ಈ ಸರ್ಕಾರಕ್ಕೆ ರಾಜ್ಯದ ನಾಲ್ಕು ಪ್ರಮುಖ ಸಮುದಾಯಗಳ ಬೆಂಬಲವಿತ್ತು (ಯಾವ ಪಕ್ಷಕ್ಕೂ ಯಾವುದೇ ಸಮುದಾಯದ ಶೇ.100ರಷ್ಟು ಬೆಂಬಲವಿರಲ್ಲ ಎಂಬುದನ್ನು ಮನದಲ್ಲಿಟ್ಟುಕೊಂಡೇ ಇದನ್ನು ನೋಡಬೇಕು). ಒಕ್ಕಲಿಗರು, ಕುರುಬರು, ದಲಿತರು (ಎಡಗೈ ಸಮುದಾಯದ ಒಂದು ಸಣ್ಣ ಭಾಗವಷ್ಟೇ ದೂರವಾಗಿತ್ತು) ಮತ್ತು ಮುಸ್ಲಿಮರು. ಅದರ ಜೊತೆಗೆ ಜಾರಕಿಹೊಳಿ ಬ್ರದರ್ಸ್, ಬಳ್ಳಾರಿಯ ಶಾಸಕರು ಹಾಗೂ ಕೆ.ಎನ್.ರಾಜಣ್ಣ ಮತ್ತು ಉಗ್ರಪ್ಪನಂಥವರನ್ನು ಮುಂದೆ ತಂದು ವಾಲ್ಮೀಕಿ ಸಮುದಾಯದ ಗಣನೀಯ ಭಾಗವನ್ನು ಜೊತೆಗೆ ತರುವುದು ಹಾಗೂ ಎಂ.ಬಿ.ಪಾಟೀಲರಂಥವರೂ ಸೇರಿಸಿ ಲಿಂಗಾಯಿತ ಸಮುದಾಯದ ಒಂದಷ್ಟು ಭಾಗವನ್ನು ಗೆದ್ದುಕೊಳ್ಳುವುದು ಇತ್ಯಾದಿ ಸಾಧ್ಯತೆಗಳಿದ್ದವು. ಅಂತಹ ಪ್ರಯತ್ನಗಳಿಗಿಂತ ಸೀಮಿತವಾದ ಗೌಡರ ಕುಟುಂಬಕ್ಕೆ ವಿರೋಧ ಎಂಬಷ್ಟಕ್ಕೇ ಸೀಮಿತವಾದದ್ದು ಸಿದ್ದರಾಮಯ್ಯನವರ ಮಿತಿಯೂ ಆಗಿದೆ. ಆ ದೃಷ್ಟಿಯಲ್ಲಿ ಸಿದ್ದರಾಮಯ್ಯನವರು ತಮ್ಮ ಪಾತ್ರ ನಿರ್ವಹಿಸಲು ವಿಫಲರಾಗಿದ್ದಾರೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಇದನ್ನು ಓದಿರಿ; ಮಾನಗೇಡಿ ಶಾಸಕರು, ಹೊಣೆಗೇಡಿ ನಾಯಕರೂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

Fact Check : ನಿರುದ್ಯೋಗ ಕುರಿತ ಬಿಜೆಪಿ ಸಂಸದನ ಹೇಳಿಕೆಯ ವಿಡಿಯೋ ‘ಡೀಪ್ ಫೇಕ್’...

0
ಯೂಟ್ಯೂಬರ್ ಒಬ್ಬರು ನಿರುದ್ಯೋಗದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಉತ್ತರ ಪ್ರದೇಶದ ಆಝಂಗಢ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ ಅಥವಾ ನಿರಹುವಾ ಅವರು "ಪ್ರಧಾನಿ...