Homeರಾಜಕೀಯರಾಷ್ಟ್ರಪ್ರೇಮದ ಹೆಸರಿನಲ್ಲಿ ‘ದೊಂಬಿ-ದಾಸ’ರ ಕಾರ್ಖಾನೆ!

ರಾಷ್ಟ್ರಪ್ರೇಮದ ಹೆಸರಿನಲ್ಲಿ ‘ದೊಂಬಿ-ದಾಸ’ರ ಕಾರ್ಖಾನೆ!

- Advertisement -
- Advertisement -

ನಿಖಿಲ್ ಕೊಲ್ಫೆ |

ಬಿಜೆಪಿಯ ಮೆದುಳಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ವು ಹಿಂದಿನಿಂದಲೂ ಹೇಗೆ ತ್ರಿವರ್ಣ ರಾಷ್ಟ್ರಧ್ವಜ ಮತ್ತು ಭಾರತೀಯ ಸಂವಿಧಾನವನ್ನು ವಿರೋಧಿಸುತ್ತಾ ಬರುತ್ತಿದೆ, ಭಗವಾಧ್ವಜ ಮತ್ತು ಮನುಸ್ಮøತಿಯನ್ನು ತರಲು ಹವಣಿಸುತ್ತಿದೆ ಎಂಬುದನ್ನು ಕಳೆದ ಸಂಚಿಕೆಯಲ್ಲಿ ನೋಡಿದ್ದೆವು.
1925ರ ಸೆಪ್ಟೆಂಬರ್ 27ರಂದು ಸ್ಥಾಪನೆಯಾದ ಆರೆಸ್ಸೆಸ್ ರಾಷ್ಟ್ರಪ್ರೇಮದ ಹೆಸರಿನಲ್ಲಿ ಪ್ರತಿಪಾದಿಸುತ್ತಾ ಬಂದಿರುವ ರಾಷ್ಟ್ರ ಯಾವುದು, ಅದಕ್ಕಾಗಿ ಬಳಸಿಕೊಳ್ಳುತ್ತಿರುವ ನಾಜಿ ತಂತ್ರಗಳು ಯಾವುವು ಎಂಬುದನ್ನು ಈಗ ನೋಡೋಣ.

ಆರೆಸ್ಸೆಸ್ಸಿಗೆ ಮೂಲ ಪ್ರೇರಣೆಯಾಗಿದ್ದದ್ದು ಕಾಂಗ್ರೆಸ್‍ನ ಒಳಗೇ ಇದ್ದ ಹಿಂದೂ ಮಹಾಸಭಾ ಎಂಬ ಒಂದು ಸಮಾನಾಸಕ್ತಿ ಗುಂಪು. 1923ರಲ್ಲಿ ಇದು ಮದನ ಮೋಹನ ಮಾಳವೀಯ ಎಂಬವರ ನೇತೃತ್ವದಲ್ಲಿ ಒಂದು ಸ್ವಯಂ ಆಸ್ತಿತ್ವ ಇರುವ ಸಂಘಟನೆಯಾಗಿ ಹುಟ್ಟಿತು. ‘ಹಿಂದೂ’ ಹೆಸರಿನಲ್ಲಿ ಬ್ರಾಹ್ಮಣವಾದಿ ಮೇಲ್ಜಾತಿಗಳ ಹಿತರಕ್ಷಣೆಗಾಗಿಯೇ ಇದ್ದ ಈ ಸಂಘಟನೆ ತಳವರ್ಗದವರನ್ನು ಸೇರಿಸಿಕೊಳ್ಳಲೂ ಇಲ್ಲ. ತಳವರ್ಗದವರು ಅದನ್ನು ಮೂಸಿ ನೋಡಲೂ ಇಲ್ಲ. ಅದು ವರ್ಣಾಶ್ರಮ ಧರ್ಮ, ಬ್ರಾಹ್ಮಣ್ಯದ ಮೇಲ್ಮೆಯನ್ನು ಉಳಿಸಿಕೊಳ್ಳಲು ಬಯಸುವ ಒಂದು ಪಿತೂರಿಗಾರರ, ಪ್ರಚೋದಕರ ಹಲ್ಲಿಲ್ಲದ ಸಂಘಟನೆಯಾಗಿ ಉಳಿದುಕೊಂಡಿತ್ತು.

ಮಾಳವೀಯರ ವಿಚಾರಗಳಿಂದ ಪ್ರಭಾವಿತರಾದ ಕೇಶವರಾವ್ ಬಲಿರಾಮ ಹೆಡಗೆವಾರ್ ಅವರ ಎಳೆ ಮನಸ್ಸಿಗೆ ಹೊಕ್ಕಿದ್ದೂ ಬಾಲಿಶ ಆದರೆ ಸಹಜ ವಿಚಾರಗಳೇ ಆಗಿದ್ದವು. ಕೇವಲ 5000 ಸಾವಿರ ಸೈನಿಕರನ್ನು ಹೊಂದಿದ್ದ ರಾಬರ್ಟ್‍ಕ್ಲೈವ್ ಹೇಗೆ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಡಿಗಲ್ಲಿ ಹಾಕಿದ? ಅಲ್ಲಾವುದ್ದೀನ್ ಖಿಲ್ಜಿ ಹದಿನೇಳು ಬಾರಿ ದಂಡಯಾತ್ರೆ ಮಾಡಿ ಸೋಮನಾಥ ಸಹಿತ ಹಲವಾರು ದೇವಾಲಯಗಳಿಗೆ ದಾಳಿ ಮಾಡಿ ಸಂಪತ್ತು ಲೂಟಿ ಮಾಡಿದ- ಇತ್ಯಾದಿ ವಿಚಾರಗಳು ಅವರ ತಲೆಯಲ್ಲಿದ್ದವು. ಆದರೆ ಸೋಮನಾಥಪುರದಲ್ಲಿ ಅಪಾರ ಪ್ರಮಾಣದ ಸಂಪತ್ತನ್ನು ಬಚ್ಚಿಡಲಾಗಿತ್ತು; ಅದಕ್ಕಾಗಿ ಹಿಂದೂ ರಾಜರುಗಳೂ ಅಂತಹಾ ದೇವಾಲಯಗಳಿಗೆ ದಾಳಿ ಮಾಡಿದ್ದರು; ಇದರಿಂದ ಬಡ ಜನರಿಗಾಗಲೀ ದೇವಾಲಯ ಪ್ರವೇಶ ಇಲ್ಲದ ದಲಿತರಿಗಾಗಲೀ ಯಾವ ವ್ಯತ್ಯಾಸವೂ ಆಗುತ್ತಿರಲಿಲ್ಲ; ಖಿಲ್ಜಿಯ ಸೇನಾನಾಯಕ ಮಲ್ಲಿಕ್ ಕಾಫರ್ ಒಬ್ಬ ಮತಾಂತರಗೊಂಡ ಹಿಂದೂವಾಗಿದ್ದ; ಅವನು ಮತಾಂತರವಾಗಲು ಕಾರಣವೇನು? ದಾಳಿಗಳು ನಡೆದಾಗ ಹಿಂದೂ ರಾಜರುಗಳೇನು ಮಾಡುತ್ತಿದ್ದರು? ಕ್ಲೈವ್ ಆದಿಯಾಗಿ ಬ್ರಿಟಿಷರ ವಿರುದ್ಧ ಎರಡು ಶತಮಾನ ಕಾಲ ಹಿಂದೂಗಳಾಗಲಿ, ಮುಸ್ಲಿಮರಾಗಲೀ-ಭಾರತೀಯರು ಯಾಕೆ ಒಟ್ಟಾಗಲಿಲ್ಲ? ಬಿಟಿಷರೂ, ಮೊಗಲರೂ, ಅವರೂ, ಇವರೂ-ಎಲ್ಲಾ ಆಡಳಿತಗಾರರು ಒಂದೇ ಎಂಬ ಭಾವನೆ ಮೇಲು ಕೀಳಿನ ಜಾತಿವ್ಯವಸ್ಥೆಗೆ ಒಗ್ಗಿಕೊಂಡಿದ್ದ ಭಾರತೀಯರಲ್ಲಿ ಇರಲಿಲ್ಲವೆ? ಈ ಪ್ರಶ್ನೆಗಳು ಬಹುಶಃ ಬ್ರಾಹ್ಮಣರಾಗಿದ್ದ ಹೆಡಗೆವಾರ್ ಅವರಿಗೆ ಹೊಳೆದಿರಲಾರದು. ಅವರು ಹಿಂದೂ ಏಕತೆಯನ್ನು ಪ್ರತಿಪಾದಿಸಿದಾಗ ಆ ಹಿಂದೂತ್ವ ಸಮಾನತೆಯ ಹಿಂದೂತ್ವ ಆಗಿರಲಿಲ್ಲ. ಬದಲಾಗಿ ಬಹುಸಂಖ್ಯಾತರು ಬ್ರಾಹ್ಮಣ್ಯವನ್ನು ಒಪ್ಪಿಕೊಂಡು ಅವರ ಅಡಿಯಾಳುಗಳಾಗಿ ಬದುಕಿ ಬಂದ ಹಿಂದೂತ್ವವಾಗಿತ್ತು. ಅವರ ಹಿಂದೂತ್ವ ವೇದ-ಉಪನಿಷದ್‍ಗಳಲ್ಲಿ ಇದ್ದ ಕೆಲವು ಉದಾತ್ತ ತತ್ವಗಳು (ಸಹಾನುಭವತು, ಸಹಾನೌಭುನತ್ತು… ಜತೆಗೆ ಬಾಳುವ, ಜೊತೆಗೆ ಉಣ್ಣುವ..) ಮತ್ತು ಸರ್ವೇ ಜನಾ ಸುಖಿನೋ ಭವಂತು ಎಂಬಂತಹ ಆದರ್ಶದ ಮೇಲೆ ನಿಂತಿರಲಿಲ್ಲ. ಮುಸ್ಲಿಮರು, ‘ಕ್ರೈಸ್ತ’ರಾದ ಬ್ರಿಟಿಷರ ವಿರುದ್ಧ ಹಿಂದೂಗಳು ಭೇದ ಭಾವವನ್ನು ಒಪ್ಪಿಕೊಂಡು ಒಂದಾಗಬೇಕು ಎಂಬ ಆಗ್ರಹದ ಮೇಲೆ ನಿಂತಿತ್ತು!
ವೈದ್ಯಕೀಯ ಕಲಿಯುತ್ತಿದ್ದಾಗ ಕಲ್ಕತ್ತಾದಲ್ಲಿ ಹೆಡಗೇವಾರ್ ಅವರಿಗೆ ಬಲಪಂಥೀಯ ಭೂಗತ ಗುಪ್ತ ಸಮಾಜಗಳ ಸಂಪರ್ಕ ಸಿಕ್ಕಿತು. ಅವರ ತಂತ್ರ-ಕುತಂತ್ರಗಳನ್ನು ಬಹುಶಃ ಚೆನ್ನಾಗಿಯೇ ಕಲಿತುಕೊಂಡರು. ಅವರು ಆರೆಸ್ಸೆಸ್ ಸ್ಥಾಪಿಸುವ ಕೆಲ ವರ್ಷ ಮೊದಲಷ್ಟೇ ಜರ್ಮನಿಯ ಜರ್ಮನ್ ನ್ಯಾಷನಲಿಸ್ಟ್ ಸೋಷಿಯಲಿಸ್ಟ್ ಪಾರ್ಟಿ ಸ್ಥಾಪನೆಯಾಗಿತ್ತು. ಅದರ ಸಂಘಟನಾ ಸಂರಚನೆ (oಡಿgಚಿಟಿisಚಿಣioಟಿಚಿಟ sಣಡಿuಛಿಣuಡಿe) ವಿದ್ಯಾವಂತರಾಗಿದ್ದ ಹೆಡಗೇವಾರ್ ಅವರ ಗಮನಕ್ಕೆ ಬಂದಿರುವ ಎಲ್ಲಾ ಸಾಧ್ಯತೆಗಳಿವೆ. ಆ ಪಕ್ಷದಲ್ಲಿ ಮುಂದೆ ಎಸ್‍ಎಸ್ (ಸ್ಟ್ರೂಮ್ಸ್ ಪ್ವಾಫೆಲ್-ಭದ್ರತಾ ಸಿಬ್ಬಂದಿ ಅಥವಾ ಚೌಕಿದಾರ್!) ಎಂದು ಕರೆಸಿಕೊಂಡ ಸಮವಸ್ತ್ರಧಾರಿ ಗೂಂಡಾ ವಿಭಾಗವಿತ್ತೆಂದೂ, ಅದು ಮುಂದೆ ಭಯಾನಕ ಹಿಂಸಾಚಾರಕ್ಕೆ ಅಸ್ತ್ರವಾಯಿತೆಂದು ಇಲ್ಲಿ ಓದಿದ್ದೇವೆ. ಅದೇ ಮಾದರಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತರಿಗೆ ಬ್ರಿಟಿಷ್ ಕಾಲದ ಆಗಿನ ಪೊಲೀಸರ ಸಮವಸ್ತ್ರದ ಮಾದರಿಯಲ್ಲಿ ಖಾಕಿ ಚಡ್ಡಿ, ಬೆಲ್ಟು-ಬೂಟುಗಳನ್ನು ನೀಡಿದ್ದಲ್ಲದೆ ಕೈಗೊಂದು ದಂಡವನ್ನೂ ನೀಡಲಾಯಿತು!
ಆರೆಸ್ಸೆಸ್‍ನ ಸಂಘಟನೆಯಲ್ಲಿ ನಾಜಿ ಸಂರಚನೆ ಇರುವುದನ್ನು ಗಮನಿಸಬಹುದು. ಒಬ್ಬ ಸರಸಂಘಚಾಲಕ (ಪರಮೋಚ್ಛ ನಾಯಕ) ಇರುತ್ತಾನೆ. ಆತ ಪ್ರಶ್ನಾತೀತ! ನಂತರ ಸಂಘಚಾಲಕರು, ಪ್ರಾದೇಶಿಕ ಸಂಚಾಲಕರು, ಪ್ರಾಂತ ಸಂಚಾಲಕರು, ತಳಮಟ್ಟದಲ್ಲಿ ಪ್ರಚಾರಕರು ಇರುತ್ತಾರೆ. ಇವರು ಸಂಘಟನೆಗೆ ಜನರನ್ನು, ಅದರಲ್ಲೂ ಬುದ್ಧಿ ಬೆಳೆಯದ ಬಾಲಕರನ್ನು ಸೇರಿಸುತ್ತಾರೆ. ಸಂಘದ ಶಾಖೆಗಳಲ್ಲಿ ಭಗವಾಧ್ವಜವನ್ನು ಇಟ್ಟುಕೊಂಡು ವ್ಯಾಯಾಮ ಮತ್ತಿತರ ಕವಾಯತುಗಳನ್ನು ಅರೆಮಿಲಿಟರಿ ಮಾದರಿಯಲ್ಲಿ ನಡೆಸಲಾಗುತ್ತದೆ. (ದಕ್ಷ-ಎಟೆನ್ಷನ್, ವಿಶ್ರಮ್- ಸ್ಟ್ಯಾಂಡ್ ಎಟ್‍ಈಸ್, ವಿಸರ್ಜನ್- ಡಿಸ್‍ಪರ್ಸ್ ಇತ್ಯಾದಿ)
ಪ್ರತೀ ಶಾಖೆಯಲ್ಲಿ ಒಬ್ಬ ಬೌದ್ಧಿಕ್ ಪ್ರಮುಖ್ ಇರುತ್ತಾನೆ. ಪೊಲಿಟಿಕಲ್ ಕಮಿಸ್ಸಾರ್ ರೀತಿಯಲ್ಲಿ. ಆತ ಆರೆಸ್ಸೆಸ್ ಸಿದ್ಧಾಂತಗಳನ್ನು ಹೇಳಿಕೊಟ್ಟು ಬ್ರೈನ್‍ವಾಶ್ ಮಾಡುತ್ತಾನೆ. ಆತ ಮೇಲಿನವರ ನೇರ ನಿಯಂತ್ರಣದಲ್ಲಿದ್ದು ಉಳಿದವರಿಗಿಂತ ಮೇಲಿರುತ್ತಾನೆ. ಇಲ್ಲಿ ‘ಆತ’ ಎಂಬುದಕ್ಕೆ ಮಹತ್ವ ಇದೆ. ಆರೆಸ್ಸೆಸ್‍ನಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ದೇಶವನ್ನು ಭಾರತ ಮಾತೆ ಎನ್ನುವ ಆರೆಸ್ಸೆಸ್ ಬಳಗದಲ್ಲಿ ರಾಷ್ಟ್ರ ಸೇವಿಕಾ ಸಂಘ ಎಂಬ ಪ್ರತ್ಯೇಕ ಸಂಘಟನೆ ಇದೆ. ಇದು ಸ್ವಯಂಸೇವಕನೊಬ್ಬನ ತಾಯಿ ಲಕ್ಷ್ಮೀಬಾಯಿ ಕೇಳರ್ ಎಂಬವರಿಂದ ಪ್ರಾರಂಭವಾಯಿತು. 1936ರಲ್ಲಿ ಆಕೆ ಸಂಘದಲ್ಲೇ ಸ್ತ್ರೀಯರ ವಿಭಾಗವೊಂದನ್ನು ಸ್ಥಾಪಿಸುವಂತೆ ಹೆಡಗೆವಾರರನ್ನು ಭೇಟಿ ಮಾಡಿದಾಗ ಅವರು ಸುತಾರಾಮ ಒಪ್ಪಲಿಲ್ಲ. ಕೊನೆಗೆ ಆರೆಸ್ಸೆಸ್ ಮಾದರಿಯಲ್ಲೇ ಪ್ರತ್ಯೇಕ ಸಂಘಟನೆ ಮಾಡಿಕೊಳ್ಳಿ ಎಂದರು.
ಬೌದ್ಧಿಕ್ ಪ್ರಮುಖ್‍ಗಳು ಶಾಖೆಯಲ್ಲಿ ಆಟ, ಕತೆಗಳ ಮೂಲಕ ಹೇಗೆ ದ್ವೇಷಭಾವನೆಯನ್ನು ಗೊತ್ತೇ ಆಗದಂತೆ ಬಿತ್ತುತ್ತಾರೆ ಎಂಬುದನ್ನು ಹಿಂದೆ ಜನಸಂಘದಲ್ಲಿ ಇದ್ದು ಶಾಸಕರೂ ಆಗಿದ್ದ ಎ.ಕೆ.ಸುಬ್ಬಯ್ಯ ಅವರು ತಮ್ಮ ಆರ್.ಎಸ್.ಎಸ್ ಅಂತರಂಗ ಎಂಬ ಪುಸ್ತಕದಲ್ಲಿ ವಿವರಿಸಿದ್ದಾರೆ.(1988, ಸಂಗಾತಿ ಪ್ರಕಾಶನ)
“ಒಂದು ಉದಾಹರಣೆ ಮಾತ್ರ ಇಲ್ಲಿಡುತ್ತೇನೆ. ‘ಮೈ ಶಿವಾಜಿ ಹೂಂ’ ಎನ್ನುವ ಆಟವನ್ನು ಶಾಖೆಗಳಲ್ಲಿ ಆಡಿಸುತ್ತಾರೆ. ಮಕ್ಕಳೆಲ್ಲರೂ ‘ಮೈ ಶಿವಾಜಿ ಹೂಂ, ಮೈ ಶಿವಾಜಿ ಹೂಂ’ ಎಂದು ಓಡಾಡುತ್ತಾರೆ. ಮಧ್ಯದಲ್ಲಿ ಒಬ್ಬ ‘ಮೈ ಔರಂಗಜೇಬ್ ಹೂಂ’ ಎನ್ನುತ್ತಾನೆ. ಉಳಿದ ಮಕ್ಕಳು ಮಕ್ಕಳೆಲ್ಲರೂ ಹೋಗಿ ‘ಮೈ ಔರಂಗಜೇಬ್ ಹೂಂ’ ಎಂದವನ ಮೇಲೆ ಬೀಳುತ್ತಾರೆ – ಅವನನ್ನು ಥಳಿಸುತ್ತಾರೆ.” ಇಂತದ್ದೇ ಬ್ರೈನ್ ವಾಷಿಂಗ್ ಕೆಲಸವನ್ನು ನಾಜಿಗಳು ‘ಹಿಟ್ಲರ್ ಯೂತ್’ ಎಂಬ ಸಂಘಟನೆಯ ಹೆಸರಲ್ಲಿ ಮಾಡಿದ್ದರು.
ಹಿಂದೂ ಮಹಾಸಭಾದಲ್ಲಿ ಎರಡು-ಮೂರು ವರ್ಷ ಸಕ್ರಿಯರಾಗಿದ್ದ ಹೆಗಡೆವಾರ್ ಅವರು ವಿನಾಯಕ ದಾಮೋದರ ಸಾವರ್ಕರ್ ಅವರ ವಿಚಾರಗಳಿಂದಲೂ ಪ್ರಭಾವಿತರಾಗಿದ್ದರು. ಅಂಡಮಾನ್ ಜೈಲಿನಲ್ಲಿದ್ದು, ನಂತರ ಬ್ರಿಟಿಷರಿಗೆ ‘ಕ್ಷಮಾಪಣಾ’ ಪತ್ರ ಬರೆದಿದ್ದ ಸಾವರ್ಕರ್ ಅವರನ್ನು ಈಗ ವೀರ ಸಾವರ್ಕರ್ ಎಂದು ಹೊಗಳುತ್ತಿರುವವರು ಗೋಹತ್ಯೆ ಬಗ್ಗೆ ಸಾವರ್ಕರರ ವಿಚಾರಗಳನ್ನು ತಿಳಿದರೆ ಇಂದಿನ ಹಿಂದೂತ್ವದ ಬೆಂಬಲಿಗರು ಕಂಗಾಲಾಗಿಬಿಡಬಹುದು. ತಿನ್ನುವವರನ್ನು ಅವರ ಪಾಡಿಗೆ ಬಿಟ್ಟರೆ ಒಳ್ಳೆಯದು ಎಂಬುದು ಅವರ ನಿಲುವು.
ಆರಂಭದಲ್ಲಿ ಹೆಡಗೆವಾರ್ ಅವರು ಬ್ರಿಟಿಷರ ವಿರುದ್ಧ ಪ್ರತಿರೋಧದಲ್ಲಿ ಭಾಗವಹಿಸಿ ಒಂದು ವರ್ಷ ಜೈಲು ಅನುಭವಿಸಿದ್ದರೂ, ನಂತರ ಬ್ರಿಟಿಷರ ವಿರುದ್ಧ ಒಂದು ಗಟ್ಟಿಯಾದ ನಿಲುವು ತಳೆಯಲು ಅಸಮರ್ಥವಾಗಿದ್ದರು ಎಂಬುದು ವಾಸ್ತವ. ಇದೀಗ ಭಗತ್‍ಸಿಂಗ್ ಅವರಂತಹ ಕಮ್ಯುನಿಸ್ಟ್ ಒಲವುಳ್ಳ ಕ್ರಾಂತಿಕಾರಿಗಳನ್ನು ತಮ್ಮವರೆಂದು ಹೇಳಿಕೊಳ್ಳುತ್ತಿರುವವರು ಆಗ ಬ್ರಿಟಿಷರನ್ನು ಓಲೈಸುವ ಕಾರ್ಯದಲ್ಲಿ ತೊಡಗಿದ್ದರು ಎಂಬುದಕ್ಕೆ ಲಿಖಿತ ಸಾಕ್ಷ್ಯಾಧಾರಗಳಿದ್ದರೂ, ಒಂದು ಲೇಖನದ ಸೀಮಿತತೆಯಲ್ಲಿ ಅದನ್ನು ಪ್ರಸ್ತುತಪಡಿಸಲಾಗದು. ಆರೆಸ್ಸೆಸ್ಸನ್ನು ಕೇವಲ ಒಂದು ಬಾರಿ ಮಾತ್ರ ನಿಷೇಧಿಸಿದ್ದ ಬ್ರಿಟಿಷರು, ಈ ಸಂಘಟನೆ ‘ಉಪಯೋಗಿ’ ಎಂದು ಬರೆದ ಪತ್ರಗಳು ಕೂಡ ಲಭ್ಯವಿವೆ.
‘ಧರ್ಮ-ಸಂಸ್ಕøತಿ ರಕ್ಷಣೆ ಮೂಲಕ ಸ್ವಾತಂತ್ರ್ಯ’ ಇದು ಅವರ ಘೋಷಣೆ! ಅರ್ಥವೇನು?
ನಂತರ ಬಂದ ‘ಗುರೂಜಿ’ ಅಥವಾ ಎಂ.ಎಸ್ ಗೋಲ್ವಾಲ್ಕರ್ ಎಂಬ ಸರಸಂಘಚಾಲಕರು ಸ್ವಾತಂತ್ರ್ಯ ಚಳವಳಿಯಿಂದ ಇನ್ನಷ್ಟು ದೂರ ಸರಿದರು. ಬ್ರಿಟಿಷರಿಗೆ ಪರವಾದ ನಿಲುವುಗಳನ್ನು ಕುರಿತು 1940ರಲ್ಲಿ ಎಲ್ಲಾ ಪ್ರಾದೇಶಿಕ ಸಂಘ ಚಾಲಕರಿಗೆ ಕಳುಹಿಸಲಾಗಿತ್ತು. ಗೋಲ್ವಾಲ್ಕರ್ ಅವರ ‘ಶ್ರೀ ಗುರೂಜಿ ದರ್ಶನ’ ಸಂಪುಟ 4ರಲ್ಲಿ (ಭಾರತೀಯ ವಿಚಾರ ಸಾಧನ ಪ್ರಕಾಶನ, 1974) ಇಂತಹ ಹಲವಾರು ವಿಚಾರಗಳನ್ನು ನೋಡಬಹುದು. (‘ವೇಬ್ಯಾಕ್ ಮೆಷಿನ್’ ಎಂಬ ನೆಟ್‍ನಲ್ಲಿ ಲಭ್ಯವಿರುವ ಪಿಡಿಎಫ್‍ನಲ್ಲಿ ಕೂಡಾ ಇಂತಹ ವಿಚಾರಗಳಿವೆ). ಶಂಶುಲ್ ಇಸ್ಲಾಂ ಅವರ ‘ರಿಲೀಜಿಯಸ್ ಡೈಮೆನ್ಷನ್ಸ್’ ಎಂಬ ಪುಸ್ತಕದಲ್ಲೂ ಬಹಳಷ್ಟು ವಿವರ –ದಾಖಲೆಗಳಿವೆ.
ಅದಿರಲಿ, ದೇಶಪ್ರೇಮಿ ಎಂದು ಕರೆದುಕೊಳ್ಳುತ್ತಿರುವ ಆರೆಸ್ಸೆಸ್ ಬ್ರಿಟಿಷ್ ಆಡಳಿತದಲ್ಲಿ ಒಂದು ಬಾರಿ ಮಾತ್ರ ನಿಷೇಧಕ್ಕೆ ಗುರಿಯಾಗಿತ್ತು. ಅದು 1947ರ ಮೊದಲ ಭಾಗದಲ್ಲಿ – ಅದೂ ಕೂಡ ಪಂಜಾಬ್ ಪ್ರಾಂತ್ಯದಲ್ಲಿ! ಕಾರಣ- ಸ್ವಾತಂತ್ರ್ಯ ಹೋರಾಟವಲ್ಲ – ಅವಿಭಜಿತ ಪಂಜಾಬಿನಲ್ಲಿ ಕೋಮುಗಲಭೆ ಹಬ್ಬಿಸಲು ಯತ್ನಿಸಿದ್ದು. ಆದರೆ, ಸ್ವಾತಂತ್ರ್ಯದ ಬಳಿಕ ಆರೆಸ್ಸೆಸ್ ಮೂರು ಭಾರಿ ನಿಷೇಧಿತವಾಯಿತು!. ಯಾವುದೇ ಜನಪರ ಹೋರಾಟದ ಕಾರಣಗಳಿಗಲ್ಲ!, ದೇಶದ ಶಾಂತಿಯನ್ನು ಕದಡಿದ ಕಾರಣಕ್ಕಾಗಿ! ‘ಕದಡಿದ ನೀರಲ್ಲಿ ಮೀನು ಹಿಡಿಯುವುದು’ ಎಂಬ ಮಾತು ಆರೆಸ್ಸೆಸ್‍ಗೆ ಚೆನ್ನಾಗಿ ಅನ್ವಯವಾಗುತ್ತದೆ.
ಮೊದಲ ಬಾರಿಗೆ 1948ರಲ್ಲಿಯೇ ಗೃಹ ಸಚಿವ, ಉಪಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಅದನ್ನು ನಿಷೇಧಿಸಿದ್ದರು-ಕಾರಣ? ಗಾಂಧೀಜಿ ಹತ್ಯೆ-ನಾಗಪುರ ಆದಿಯಾಗಿ ಎಲ್ಲೆಡೆ ಅದು ಸಿಹಿಹಂಚಿದ್ದು!. ಎರಡನೇ ಬಾರಿ 1975-77ರಲ್ಲಿ ತುರ್ತು ಪರಿಸ್ಥಿತಿ ವೇಳೆ. ಇದಕ್ಕೆ ಕಾರಣ -ಬಲಪಂಥೀಯರು ಬಿತ್ತುತ್ತಿದ್ದ ವಿಷಬೀಜವಾಗಿ ಇದ್ದರೆ (ಸಿಪಿಐ ಇದಕ್ಕಾಗಿ ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿತ್ತು), ಇನ್ನೊಂದು ಕಡೆಯಲ್ಲಿ ಕಮ್ಯುನಿಸ್ಟರು ಪ್ರಬಲವಾಗಿ ಸಂಸತ್ತಿನಲ್ಲೂ ಗಣನೀಯ ಸ್ಥಾನ ಪಡೆದದ್ದು. ಮತ್ತೊಂದು ಕಡೆಯಲ್ಲಿ ನಕ್ಸಲೀಯರು ಕಲ್ಕತ್ತಾವನ್ನೇ ತುಂಬುವಂತಹ ಪ್ರಭಾವಿ ಮಟ್ಟಕ್ಕೆ ಬೆಳೆದದ್ದು. ಮೂವರು ತದ್ವಿರುದ್ಧ ವಿರೋಧಿಗಳನ್ನು ಒಂದೇ ಏಟಿಗೆ ಮಟ್ಟ ಹಾಕುವ ದುಸ್ಸಾಹಸಕ್ಕೆ ಇಂದಿರಾ ಗಾಂಧಿಯವರು ಕೈಹಾಕಿದ್ದರು.
ಮೂರನೇ ಬಾರಿ ಅದು ನಿಷೇಧಕ್ಕೆ ಒಳಗಾದದ್ದು, 1992ರಲ್ಲಿ ಬಾಬ್ರಿ ಮಸೀದಿಯನ್ನು ಕೆಡವಿ ಮುಸ್ಲಿಮರ ವಿರುದ್ಧ ಶೂದ್ರರನ್ನು, ಅಷ್ಟೇ ಏಕೆ ಇವರಿಂದ ದಮನಿತರಾದ ದಲಿತರನ್ನು ಎತ್ತಿ ಕಟ್ಟಿ-‘ಹಿಂದೂ’ ಎಂಬುದಕ್ಕೆ ಒಂದು ವಂಚಕ ವ್ಯಾಖ್ಯಾನ ಬರೆದಾಗ!. ಈ ಚುನಾವಣೆ ಮುಗಿದು ಯಾರೇ ಅಧಿಕಾರಕ್ಕೆ ಬಂದರೂ, ಸರ್ವಾಧಿಕಾರದ ನಡೆ-ನುಡಿ-ಅಪಾಯಗಳ ಬಗ್ಗೆ ನಮಗೆ ನೆನಪಿರಲಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ದೇವೇಗೌಡರ ಕುರಿತು ಸಚಿವ ರಾಜಣ್ಣ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆಂದು ಹಳೆಯ...

0
ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಬಗ್ಗೆ ಸಚಿವ ರಾಜಣ್ಣ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಬಲ ಪಂಥೀಯ ಎಕ್ಸ್ ಬಳಕೆಗಾರ್ತಿ ಶಕುಂತಲ ನಟರಾಜ್ (@ShakunthalaHS) ವಿಡಿಯೋ ಹಂಚಿಕೊಂಡಿದ್ದು, "ದೇಶವೇ ಹೆಮ್ಮೆ...