Homeಮುಖಪುಟಹೆಬ್ಬಾರ್ ಹಿಕಮತ್ತಿನ ಹಕೀಕತ್!!

ಹೆಬ್ಬಾರ್ ಹಿಕಮತ್ತಿನ ಹಕೀಕತ್!!

- Advertisement -
- Advertisement -

| ನಹುಷ |

ಉತ್ತರ ಕನ್ನಡದ ರಾಜಕಾರಣದ ರಂಗು ಬದಲಾಗುತ್ತಿದೆ. ಕಾರಣವಿಷ್ಟೆ ಆಪರೇಷನ್ ಕಮಲಕ್ಕೆ ಬಿಕರಿಗೊಂಡು ರಾಜೀನಾಮೆ ಕೊಟ್ಟಿರುವ ಯಲ್ಲಾಪುರ-ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ್ ಒಬ್ಬರೇ ಅಲ್ಲದೆ ಮಿನಿಸ್ಟರ್ ಆರ್.ವಿ.ದೇಶ್‍ಪಾಂಡೆಯೂ ಬಿಜೆಪಿ ಸೆಳೆತಕ್ಕೆ ಸಿಲುಕಿದ್ದಾರೆಂಬ ಸುದ್ದಿ ದೊಡ್ಡ ಚರ್ಚೆಗೀಡಾಗಿ ಹೋಗಿದೆ. ಮಜಾ ಎಂದರೆ, ಕಾಂಗ್ರೆಸಲ್ಲಿದ್ದರೆ ತನ್ನ ಆಸೆಗೆಲ್ಲ ದೇಶಪಾಂಡೆ ಕಲ್ಲು ಹಾಕುತ್ತಾರೆಂಬ ಸಿಟ್ಟಿಂದ ಬಿಜೆಪಿ ಪಾಳೆಯಕ್ಕೆ ಎಂಟ್ರಿ ಹೊಡೆದಿದ್ದ ಹೆಬ್ಬಾರ್ ಅದೇ ಹಿತಶತ್ರು ದೇಶಪಾಂಡೆ ತನ್ನ ಬೆನ್ನಟ್ಟಿ ಬರುತ್ತಿರುವುದು ಕೇಳಿ ಬೆಚ್ಚಿಬಿದ್ದಿದ್ದಾರೆ!!

ಕಾಂಗ್ರೆಸ್‍ನಿಂದಲೇ ಸ್ಪರ್ಧಿಸಿ ಏದುಸಿರು ಬಿಡುತ್ತಲೇ ಗೆಲ್ಲುತ್ತಿದ್ದಂತೆಯೇ ಹೆಬ್ಬಾರ್, ದೇಶಪಾಂಡೆಗೆ ಸೆಡ್ಡು ಹೊಡೆದು ಮಂತ್ರಿಗಿರಿಗೆ ಲಾಬಿ ಮಾಡಿದರು. ಮತ್ತೊಂದೆಡೆ ಬಿಜೆಪಿಯವರಿಂದ ಆಪರೇಷನ್ ಮಾಡಿಸಿಕೊಳ್ಳಲು ಪ್ರಯತ್ನಿಸಿದರು. ಯಡ್ಡಿ ಮಗ ಹೆಬ್ಬಾರ್ ಹೆಂಡತಿಯೊಂದಿಗೆ ಲೇವಾದೇವಿ ವ್ಯವಹಾರಕ್ಕಿಳಿದ ಆಡಿಯೋ ಕೂಡ ಆಗ ಹೊರಬಂದಿತ್ತು. ಹೆಬ್ಬಾರ್ ಪರಿವಾರ ಮಾನ ಹರಾಜಾದರೂ ಇದೇ ಸಾಹಸ ಎಂಬಂತೆ ಬೀಗಿದರು. ಮಂತ್ರಿಗಿರಿಗಾಗಿ ಕಾಂಗ್ರೆಸ್ ಹೈಕಮಾಂಡನ್ನು ಬ್ಲಾಕ್‍ಮೇಲ್ ಮಾಡುತ್ತಲೇ ಇದ್ದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷತೆ ಕೊಟ್ಟರೂ ಬೇಡವೆನ್ನಲಿಲ್ಲ ಈ ಆಸೆಬುರುಕ!!

ಕೇವಲ ಒಂದು ಸಾವಿರದ ನಾಲ್ಕುನೂರು ಮತಗಳಂತರದಿಂದ ಬಚಾವಾಗಿರುವ ಹೆಬ್ಬಾರ್‍ಗೆ ಮತ್ತೆ ಅದೇ ಕಾಂಗ್ರೆಸ್‍ನಿಂದ ಗೆಲ್ಲುತ್ತೇನೆಂಬ ಧೈರ್ಯ ಉಳಿದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಬಳ್ಳಾರಿಯ ಕಬ್ಬಿಣದ ಅದಿರು ಕದ್ದು ವಿದೇಶಕ್ಕೆ ರಪ್ತು ಮಾಡಿದ ಕೇಸಲ್ಲಿ ಸಿಬಿಐ ವಿಚಾರಣೆ ಎದುರಿಸುತ್ತಿರುವ ಹೆಬ್ಬಾರ್ ಹಾಗೂ ಆತನ ಕುಲೋದ್ಧಾರಕ ವಿವೇಕ್ ಹೆಬ್ಬಾರ್ ಆ ಕುಣಿಕೆಯಿಂದ ಪಾರಾಗಲು ಬಲಾಢ್ಯ ಬಿಜೆಪಿ ಸೇರುವುದು ಅನಿವಾರ್ಯವಾಗಿದೆ. ಒಂದು ಕಾಲದಲ್ಲಿ ಪ್ರಾಥಮಿಕ ಶಿಕ್ಷಣವೂ ಮುಗಿಸಲಾಗದೆ ಲಾರಿ ಡ್ರೈವರಿಕೆ ಮಾಡಿಕೊಂಡಿದ್ದ ಹೆಬ್ಬಾರ್ ಇವತ್ತು ಕೋಟಿ-ಕೋಟಿ ತೂಗುವ ಅದಿರು ಉದ್ಯಮಿಯಾಗಿ, ರಾಜ್ಯ ಸರ್ಕಾರವನ್ನೇ ಉರುಳಿಸುವ ಪ್ರಭಲ ಶಾಸಕ ಸಾಹೇಬನಾಗಿ ಬೆಳೆದಿರುವುದು ಪ್ರಜಾಪ್ರಭುತ್ವದ ದುರಂತವೇ ಸರಿ!

ಹೆಬ್ಬಾರ್‍ಗೆ ಬಿಜೆಪಿ “ಸಂಸ್ಕೃತಿ” ಹೊಸತೇನೂ ಅಲ್ಲ. 1990ರ ದಶಕದ ಅಂತ್ಯದಲ್ಲಿ ಆತ ಜಿಲ್ಲಾ ಬಿಜೆಪಿ ಅಧ್ಯಕ್ಷತೆ ನಿಭಾಯಿಸಿದ್ದ. ಆದರೆ ಬಿಜೆಪಿಯಲ್ಲಿ ಆತನಿಗೆ ಕಾಗೇರಿ ಮಾಣಿ, ಅನಂತ್ಮಾಣಿ ಜತೆ ಏಗಲಾಗಲಿಲ್ಲ. ಸಂಸದ ಅನಂತ್ಮಾಣಿ ಶಿರಸಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲೇ ಈ ಹೆಬ್ಬಾರ್‍ಗೆ ಅಂದು ಕೆನ್‍ಕೆನ್ನೆಗೆ ಬಾರಿಸಿದ್ದ. ತಾನು ಬಿಜೆಪಿಯಲ್ಲಿನ್ನೂ ಬಚಾವಾಗಲಾರೆನೆಂದು ಅರಿತ ಹೆಬ್ಬಾರ್ ಕಾಂಗ್ರೆಸ್‍ನ ಪವರ್‍ಫುಲ್ ನಾಯಕಿಯಾಗಿದ್ದ ಮ್ಯಾಗಿಯ ಸೆರಗು ಹಿಡಿದು ಕಾಂಗ್ರೆಸ್‍ಗೆ ನುಸುಳಿದ್ದ. ಬಂದವನೇ ಡಬಲ್‍ಗೇಮ್ ಶುರುಹಚ್ಚಿಕೊಂಡಿದ್ದ. ಹಗಲು ಮ್ಯಾಗಿ ಬಿಡಾರದಲ್ಲಿದ್ದರೆ ರಾತ್ರಿ ದೇಶ್‍ಪಾಂಡೆ ಕ್ಯಾಂಪಿನಲ್ಲಿ ಕಾಣಿಸುತ್ತಿದ್ದ. ಇದರಿಂದ ಕೆರಳಿದ ದೇಶಪಾಂಡೆ ಆತನ ಬಾಲ ಕಟ್ ಮಾಡಲು ಮುಂದಾದರು. ಮ್ಯಾಗಿ ಕಾಂಗ್ರೆಸಲ್ಲಿ ಕಾವು ಕಳಕೊಳ್ಳುತ್ತಿದ್ದಂತೆಯೇ ಹೆಬ್ಬಾರ್ ದೇಶಪಾಂಡೆಗೆ ಆಹಾರವಾಗಿ ಹೋದ!!
ಕಳೆದ ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಹೆಬ್ಬಾರ್ ಎದುರು ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ.ಎಸ್.ಪಾಟೀಲ್ ತಲೆ ಕಂಡರೆ ಸಂಸದ ಮಾಣಿಗೆ ಆಗದು. ಹಾಗಾಗಿ ಆತ ಹಳೆ ವೈರತ್ವ ಮರೆತು ಸ್ವ-ಜಾತಿಯ ಹೆಬ್ಬಾರ್‍ಗೆ ಸಹಕರಿಸಿದ್ದ. ಈ ಹವ್ಯಕ ಹಿತಾಸಕ್ತಿಯ ರಾಜಕಾರಣದಲ್ಲಿ ಸ್ವರ್ಣವಲ್ಲಿ ಸ್ವಾಮಿಯ “ಮಂತ್ರಾಕ್ಷತೆ”ಯೂ ಕೆಲಸ ಮಾಡಿತ್ತು.

ರಾಮಕೃಷ್ಣ ಹೆಗಡೆ ಕಾಲದಿಂದ ನಿರಂತರವಾಗಿ ಒಂದಿಲ್ಲೊಂದು ಅಧಿಕಾರ ಅನುಭವಿಸುತ್ತಿರುವ ದೇಶಪಾಂಡೆ ಈಗ ಹಣ್ಣಾಗಿದ್ದಾರೆ. ಈ ಮುದಿ ಕಾಲದಲ್ಲಿ ಎರಡು ಆಸೆ ಆತನಲ್ಲಿದೆ. ಒಂದು ತಾನು ಮುಖ್ಯಮಂತ್ರಿ ಆಗಬೇಕೆಂಬುದು. ಮತ್ತೊಂದು, ತನ್ನ ಸುಪುತ್ರ ಪ್ರಶಾಂತನನ್ನು ಎಂಪಿ ಅಥವಾ ಎಮ್ಮೆಲ್ಲೆ ಮಾಡಬೇಕೆಂಬುದು. ಬಿಜೆಪಿ ಸೇರಿದರೆ ಸಿಎಂ ಆಗುವುದು ಕಷ್ಟ. ಹಾಗೆಯೇ ಕಾಂಗ್ರೆಸಲ್ಲುಳಿದರೆ ಮಗನ ಭವಿಷ್ಯಕ್ಕೆ ಮಾರಕ. ಹೀಗಾಗಿ ದೇಶಪಾಂಡೆ ಎರಡು ದೋಣಿಯ ಮೇಲೆ ಕಾಲಿಟ್ಟು ಹೊಯ್ದಾಡುತ್ತಿದ್ದಾರೆ. ಈಗೀಗ ಕಾಂಗ್ರೆಸಲ್ಲೂ ದೇಶಪಾಂಡೆಗೆ ಅಂಥ ಪ್ರಾಮುಖ್ಯತೆ ಸಿಗುತ್ತಿಲ್ಲ. ಆದರೂ ತಾನೇನಾದರೂ ರಾಜಿ ಅಭ್ಯರ್ಥಿಯಾಗಿ ಸಮ್ಮಿಶ್ರದ ಸಿಎಂ ಆಗಬಹುದೆಂಬ ಯೋಚನೆಯಿಂದ ದೇಶಪಾಂಡೆ ಗಡಿಬಿಡಿಗೆ ಬಿದ್ದಿದ್ದಾರೆ. ದೇವೇಗೌಡರ ಮನೆಗೆ ಹೋಗಿ ಗಂಟೆಗಟ್ಟಲೆ ಮಾತಾಡುತ್ತಿದ್ದಾರೆ. ಅತ್ತ ಕಾಂಗ್ರೆಸ್ ಹೈಕಮಾಂಡ್‍ಗೆ ತನ್ನನ್ನು ಸಿಎಂ ಕ್ಯಾಂಡಿಡೇಟ್ ಮಾಡಿದರೆ ಓಡಿಹೋಗಿರುವ ಶಾಸಕರಲ್ಲಿ ಕೆಲವರನ್ನಾದರೂ ಖರೀದಿಸಿ ತರುತ್ತೇನೆಂದು ಭರವಸೆ ಕೊಡುತ್ತಿದ್ದಾರೆ.
ಈ ನೈಚ್ಯಾನುಸಂಧಾನದಲ್ಲಿ ಸೋತರೆ ದೇಶಪಾಂಡೆಗೆ ಮಗನ ಭವಿಷ್ಯ ಮುಖ್ಯವಾಗುತ್ತಿದೆ. ಅಂದರೆ ಆತ ಬಿಜೆಪಿ ಪಾಲಾಗುವುದು ಪಕ್ಕಾ. ಅಮಿತ್ ಶಾ ಈಚೆಗೆ ಗೋವಾಕ್ಕೆ ಬಂದಾಗ ದೇಶಪಾಂಡೆ ರಹಸ್ಯವಾಗಿ ಸಂಧಿಸಿ ಬಂದಿದ್ದಾರೆ. ಸಮ್ಮಿಶ್ರ ಸರ್ಕಾರ ಪತನವಾಗುತ್ತಲೇ ಆತ ಬಿಜೆಪಿಗೆ ಅಧಿಕೃತವಾಗಿ ಪ್ರವೇಶ ಪಡೆಯುತ್ತಾರೆ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಮಂತ್ರಿಯಾಗುವ ಯೋಗದ ದೇಶಪಾಂಡೆ ಈ ಬಾರಿ ಬಿಜೆಪಿಯಲ್ಲಿ ಮಂತ್ರಿಗಿರಿ ಕೇಳುತ್ತಿಲ್ಲ. ಬದಲಿಗೆ ತನ್ನ ಮಗ ಪ್ರಶಾಂತನಿಗೆ ಎಂಪಿ ಅಥವಾ ಹಳಿಯಾಳದ ಎಮ್ಮೆಲ್ಲೆ ಟಿಕೆಟ್ ಕೇಸರಿ ಪಕ್ಷದಿಂದ ಬಯಸುತ್ತಿದ್ದಾರೆ. ಹಳಿಯಾಳದಲ್ಲಿ ಬಗಲಲ್ಲಿರುವವ ದುಷ್ಮನ್-ಎಮ್ಮೆಲ್ಲೆ ಎಸ್.ಎಲ್.ಘೋಟನೇಕರ್ ತಿರುಗಿ ಬಿದ್ದರೆ ಬಿಜೆಪಿಯಿಂದಲೂ ತನ್ನ ಮಗ ಗೆಲುವು ಕಷ್ಟವೆಂಬ ಲೆಕ್ಕಾಚಾರವೂ ಆತ ಹಾಕಿದ್ದಾರೆ. ಬಹುಸಂಖ್ಯಾತ ಮರಾಠ ಸಮಾಜದ ಘೋಟನೇಕರ್ ತನ್ನ ಮಗನನ್ನು ಹಳಿಯಾಳದ ಭಾವಿ ಎಮ್ಮೆಲ್ಲೆ ಎಂದೇ ದೃಢವಾಗಿ ನಂಬಿದ್ದಾರೆ. ಹೀಗಾಗಿ ದೇಶಪಾಂಡೆ ತನ್ನ ಬೀಗ, ಪ್ರಶಾಂತನಿಗೆ ಹೆಣ್ಣುಕೊಟ್ಟು ಮಾವ ಮುಂಬೈನ ಪ್ರಭಾವಿ ರಾಜಕಾರಣಿ ಪ್ರಫುಲ್ ಪಟೇಲ್ ಬಲವೂ ಸೇರಿಸಿಕೊಂಡು ಮಗನಿಗೆ ಎಂಪಿ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
ದೇಶಪಾಂಡೆ ಬಿಜೆಪಿ ಸೇರಿದರೆ ಏನಾಗುತ್ತದೆ? ಆತನ ಮಗನ ಭವಿಷ್ಯ ಬೆಳಗುತ್ತದೆ. ಶಿವರಾಮ ಹೆಬ್ಬಾರನ ಗ್ರಹಚಾರ ಮತ್ತೆ ಕೆಡುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...