- ಈಶ್ವರ್ |
ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಗೆ ಮತದಾರ ಕೊಂಚ ಉಸಿರಾಡುವಷ್ಟು ಅವಕಾಶ ನೀಡುವ ಸಾಧ್ಯತೆ ಕಾಣಿಸುತ್ತಿದೆ. ಯಡ್ಡಿ-ಈಶು ಗ್ಯಾಂಗಿನ ಪರಸ್ಪರ ಜಗಳದ ನಡುವೆ ಬಿಜೆಪಿಯನ್ನು ಬಚಾವು ಮಾಡಲು ಆರೆಸ್ಸೆಸ್ ಧಾವಿಸಿದೆ. ಬಡಾಯಿ ಭಾಷಣದ ನರೇಂದ್ರ ಮೋದಿ ಬಂದು ಹೋದಮೇಲೆ ಶಿವಮೊಗ್ಗ ಬಿಜೆಪಿಯಲ್ಲಿ ಸಂಚಲನ ಕಂಡುಬರುತ್ತಿದೆ.
ಮುಖ್ಯವಾಗಿ ಸಾಗರ, ಶಿವಮೊಗ್ಗ ಗ್ರಾಮಾಂತರ ಹಾಗು ಸೊರಬ ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯವಾಗಿ ಸೋಲಲಿದೆ ಎಂಬ ವಾತಾವರಣ ಬದಲಾಗಿದೆ.
ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಸೇರಿದ ಮೇಲೆ ಕಾಗೋಡು ತಿಮ್ಮಪ್ಪರ ಗೆಲುವು ನಿಚ್ಚಳವಾಯಿತು ಎಂಬ ವಾತಾವರಣವಿತ್ತು. ಆದರೆ ಚುನಾವಣೆ 4 ದಿನವಿರುವಾಗ ಗುಪ್ತಚರ ಇಲಾಖೆ ನೀಡುತ್ತಿರುವ ವರದಿ ಹೇಳುವಂತೆ ಹಾಲಪ್ಪಗಿಂತ ಕಾಗೋಡು ಕೇವಲ 5 ಸಾವಿರ ಮತಗಳಷ್ಟು ಮುನ್ನಡೆಯಲ್ಲಿದ್ದಾರೆ. ಇದು ಮತದಾನದ ಹೊತ್ತಿಗೆ ಬದಲಾಗಬಹುದು. 40 ಸಾವಿರ ಮತಗಳ ಅಂತರದಿಂದ ಗೆದ್ದಿದ್ದ ಕಾಗೋಡು ಬೆಂಬಲಕ್ಕೆ 23 ಸಾವಿರ ಮತ ಪಡೆದು ಸೋತಿದ್ದ ಬೇಳೂರು ಇರುವಾಗಲೂ ಸಾಗರದಲ್ಲಿ ಹರತಾಳ ಹಾಲಪ್ಪ ಎಲ್ಲರ ನಿರೀಕ್ಷೆ ಮೀರಿ ಮತ ಪಡೆಯುವತ್ತ ಮುಂದೆ ಸಾಗಿದ್ದಾರೆ. ಸ್ವರಾಜ್ ಇಂಡಿಯಾದ ಅಭ್ಯರ್ಥಿ ದೂಗೂರು ಪರಮೇಶ್ವರ್ ಕೂಡ ಕಾಂಗ್ರೆಸ್ ಮತಗಳಿಗೆ ಲಗ್ಗೆ ಹಾಕುತ್ತಿರೋದು ಕೈಗೆ ನುಂಗಲಾರದ ತುತ್ತು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಅಶೋಕ ನಾಯ್ಕ ವಿರುದ್ಧ ಬಿಜೆಪಿಯಲ್ಲೇ ಭಾರೀ ವಿರೋಧವಿತ್ತು. ಲಿಂಗಾಯತರು ಸಿಟ್ಟು ಮಾಡಿಕೊಂಡಿದ್ದರು. ಯಡಿಯೂರಪ್ಪ ಸುತ್ತಾಟ ಆರಂಭಿಸಿದ ನಂತರ ಅಶೋಕನಾಯ್ಕನ ಕುದುರೆ ಕುಂಟುವುದನ್ನು ಬಿಟ್ಟು ಓಡ ತೊಡಗಿತು. ಗೆಲ್ಲಬೇಕಾದ ಜೆಡಿಎಸ್ನ ಶಾರದ ಪೂರ್ಯನಾಯ್ಕ ಏದುಸಿರು ಬಿಡತೊಡಗಿದ್ದಾರೆ. ಕಾಂಗ್ರೆಸ್ನ ಡಾ.ಶ್ರೀನಿವಾಸ್ ಡಮ್ಮಿಯಾಗುವ ಸಾಧ್ಯತೆಯೇ ಹೆಚ್ಚು.
ಸೊರಬದಲ್ಲೂ ಇದೇ ಕತೆ. ಜೆಡಿಎಸ್ನ ಮಧು ಬಂಗಾರಪ್ಪರೆದುರು ಅವರ ಸೋದರ ಬಿಜೆಪಿಯ ಕುಮಾರ ಬಂಗಾರಪ್ಪ ಡಮ್ಮಿಯಾಗಿ ಹೋಗುವ ವಾತಾವರಣವಿತ್ತು. ಆದರಿಲ್ಲಿ ಯಡ್ಡಿ ಮ್ಯಾಜಿಕ್ ನಡೆಯತೊಡಗಿದೆ. ಸೋದರರ ನಡುವೆ ನೇರ ಹಣಾಹಣಿ ಇದೆ. ಕುಮಾರ ಬಂಗಾರಪ್ಪ ನಿರೀಕ್ಷೆಗಿಂತ ಹೆಚ್ಚು ಮತ ಪಡೆವ ಸಾಧ್ಯತೆ ನಿಚ್ಚಳವಾಗತೊಡಗಿದೆ. ಅಂದರೆ ಗೆಲುವಿನ ಸಾಧಯತೆಯೇ ಇಲ್ಲವೆಂದು ಭಾವಿಸಲಾಗಿದ್ದ ಸೊರಬ, ಸಾಗರ ಮತ್ತು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಗಳಲ್ಲಿ ಯಡ್ಡಿಯ ಛಾಯೆ ಸ್ಪಷ್ಟವಾಗಿ ಗೋಚರವಾಗ ತೊಡಗಿದ್ದು ಬಿಜೆಪಿ ಗೆಲುವಿನ ಆಶಾವಾದ ಮೂಡತೊಡಗಿದೆ.
ಶಿಕಾರಿಪುರದಲ್ಲಿ ಯಡಿಯೂರಪ್ಪರ ಲೀಡ್ ಕಡಿಮೆಯಾಗಲಿದೆ. ಭದ್ರಾವತಿಯಲ್ಲಿ ಕಾಂಗ್ರೆಸ್ನ ಸಂಗಮೇಶ್ ಗೆಲ್ಲುವ ಸಾಧ್ಯತೆ ನಿಚ್ಚಳವಾಗಿದೆ. ತೀರ್ಥಹಳ್ಳಿಯಲ್ಲಿ ಬಿಜೆಪಿಯ ಆರಗ ಜ್ಞಾನೇಂದ್ರ ಈ ಬಾರಿಯೂ 3ನೇ ಸ್ಥಾನ ಪಡೆಯುವ ಸಾಧ್ಯತೆ ಇದ್ದು ಕಾಂಗ್ರೆಸ್ನ ಕಿಮ್ಮನೆ ರತ್ನಾಕರ್, ಜೆಡಿಎಸ್ನ ಆರ್.ಎಂ. ಮಂಜುನಾಥ್ ಗೌಡರ ನಡುವೆ ನೇರ ಹಣಾಹಣಿ ಇದೆ.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಈಶ್ವರಪ್ಪ ದುಡ್ಡಿನ ಹೊಳೆ ಹರಿಸುತ್ತಿದ್ದಾರಾದರೂ ಅವರ ಸೋಲು ಕಟ್ಟಿಟ್ಟ ಬುತ್ತಿ. ಚುನಾವಣಾ ತಂತ್ರ ಗೊತ್ತಿಲ್ಲದ ಜೆಡಿಎಸ್ನ ನಿರಂಜನ್ ಡಮ್ಮಿಯಾಗುತ್ತಾರೆ ಅಂತ ಭಾವಿಸಿದವರು ಅಚ್ಚರಿ ಪಡುವಷ್ಟು ಸ್ಪರ್ಧೆ ಗಟ್ಟಿಗೊಳ್ಳತೊಡಗಿದೆ. ಕಾಂಗ್ರೆಸ್ನ ಪ್ರಸನ್ನಕುಮಾರ್ ಗೆಲುವು ನಿಶ್ಚಿತವಾಗಿದೆ.
ಹೀಗೆ ಭದ್ರಾವತಿ, ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಕಾಂಗ್ರೆಸ್ ಗೆಲ್ಲುವ ಎಲ್ಲಾ ಸಾಧ್ಯತೆ ಇದ್ದು, ಶಿಕಾರಿಪುರದಲ್ಲಿ ಯಡಿಯೂರಪ್ಪ ಗೆಲ್ಲಲಿದ್ದಾರೆ. ಉಳಿದಂತೆ ಸೊರಬ, ಸಾಗರ, ಶಿವಮೊಗ್ಗ ಗ್ರಾಮಾಂತರದಲ್ಲಿ ಬಿಜೆಪಿ ಪ್ರಬಲ ಸ್ಪರ್ಧೆ ಒಡ್ಡಲಿದೆ. ಮಧು, ಕಾಗೋಡು ಹಾಗು ಶಾರದ ಪೂರ್ಯ ನಾಯ್ಕರ ಭವಿಷ್ಯ ಡೋಲಾಯಮಾನವಾಗಿದೆ.