Homeಸಾಮಾಜಿಕಶತಾಯುಷಿಯಿಂದ ಮಠಾಧೀಶರಿಗೆ ಒಂದು ಪತ್ರ

ಶತಾಯುಷಿಯಿಂದ ಮಠಾಧೀಶರಿಗೆ ಒಂದು ಪತ್ರ

- Advertisement -
- Advertisement -

ಗೌರವಾನ್ವಿತ ಸ್ವಾಮೀಜಿಗಳೆ,

ಬಸವ ತತ್ವ ಅಸ್ತಿತ್ವಕ್ಕೆ ಬಂದ ಮೇಲೆ ಬಸವ ಅನುಯಾಯಿಗಳು ಜಾತಿ, ಮತ, ಪಂಥಗಳನ್ನು ತೊರೆದು ನಿಜ ಮಾನವರಾಗಿ ಬಾಳಬೇಕೆಂದು ತೀರ್ಮಾನಿಸಿದರೆಂಬುದು ತಿಳಿದ ಸಂಗತಿ. ಆದರೆ ಬಸವ ತತ್ವದ ಅಸ್ತಿತ್ವಕ್ಕೆ ಮುಂಚೆಯೇ ನಮ್ಮದು ಲಿಂಗಾಯತ ಮತ ಇತ್ತೆಂಬ ವಾದವನ್ನು ಪಂಚಾಚಾರ್ಯರು ಮುಂದಿಟ್ಟಿದ್ದಾರೆ. ಈಗ ಬಸವ ತತ್ವದವರಿಗೂ ತಮ್ಮ ರಂಭಾಪುರಿ ಮಠದವರಿಗೂ ನಡುವೆ ಹೋರಾಟ ಶುರುವಾಗಿದೆ. ಈ ಭಿನ್ನಾಭಿಪ್ರಾಯದ ವಿಚಾರವನ್ನು ಉಭಯತ್ರರೂ ಕೂತು, ಗೌರವಯುತವಾಗಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬರಬಹುದಿತ್ತು. ಬದಲಿಗೆ ನಿಮ್ಮ ಜಗಳ ಈಗ ಬೀದಿಗೆ ಬಂದಿದೆ.

ತಾವುಗಳು ಶಿವನ ಭಕ್ತರಿಗೂ ಹಾಗೂ ಬಸವನ ಅನುಯಾಯಿಗಳಿಗೂ ನಡುವೆ ಸಾಮರಸ್ಯ ಮೂಡಿಸುವ ಬದಲಿಗೆ ವೈಮನಸ್ಯ ಹೆಚ್ಚಾಗಲು ಕಾರಣರಾಗಿದ್ದೀರಿ ಎಂಬುದನ್ನು ಅತ್ಯಂತ ನೋವಿನಿಂದ ಹೇಳಲೇಬೇಕಿದೆ. ಮಠಾಧಿಪತಿಗಳು ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ ಬಿತ್ತಬೇಕು. ಅದು ಬಿಟ್ಟು ನಿಮ್ಮ ಪರಸ್ಪರರ ಭಿನ್ನಾಭಿಪ್ರಾಯಗಳನ್ನು ಮುಂದಿಟ್ಟುಕೊಂಡು ನೀವೇ ಬೀದಿ ಹೋರಾಟಕ್ಕಿಳಿದರೆ ತಾವು ಭಕ್ತರಿಗೆ ಏನು ಸಂದೇಶ ಕೊಟ್ಟಂತಾಗುತ್ತದೆ?

ತಮ್ಮ ಅನುಯಾಯಿಗಳ ನಡುವೆಯೇ ತಾವು ಸಾಮರಸ್ಯ ಸಾಧಿಸಲಾಗದಿದ್ದ ಮೇಲೆ ಮತ್ತೇನನ್ನು ಸಾಧಿಸುತ್ತೀರಿ? ಹೋಗಲಿ, ಇಂಥ ಮಠಗಳಿದ್ದು ಸಮಾಜಕ್ಕೆ ಪ್ರಯೋಜನವಾದರೂ ಏನು?

ಭಿನ್ನಮತಗಳ ಕಾರಣಕ್ಕೆ ಮಠಾಧೀಶರಾದ ತಾವುಗಳೇ ಬೀದಿಗಿಳಿದಿರುವ ಸನ್ನಿವೇಶದಲ್ಲಿ ಜನಸಾಮಾನ್ಯರು ಮಾರ್ಗದರ್ಶನಕ್ಕಾಗಿ ಯಾರ ಬಳಿಗೆ ಹೋಗಬೇಕು?

ಇದು ನಿಮಗೆ ಸಲ್ಲದು. ಇದು ಮಠಾಧೀಶರಿಗೆ ತಕ್ಕುನಾದ ನಡೆಯಲ್ಲ. ನಿಮ್ಮ ಮಾತುಗಳು ಹಾಗೂ ನಡವಳಿಕೆ ಜನರಿಗೆ ಅಸಹ್ಯ ಉಂಟುಮಾಡುತ್ತಿವೆ. ಹೆಂಡ, ಹಣ ಹಂಚಿ ಓಟು ಗಳಿಸುವ ರಾಜಕಾರಣಿಗಳ ಮಟ್ಟಕ್ಕೆ ಕೆಲವು ಮಠಾಧೀಶರು ಇಳಿದಿರುವುದು ಜನರಲ್ಲಿ ಜಿಗುಪ್ಸೆ ಮೂಡಿಸಿದೆ.

ನಿಮಗೆ ರಾಜ್ಯಾಂಗದ ಪರಿಕಲ್ಪನೆಯೇ ಇಲ್ಲವೇ? ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಸಾರುವ ರಾಜ್ಯಾಂಗದ ಮಹತ್ವದ ಬಗ್ಗೆ ಅರಿವಿದೆಯೆ? ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಮಠಾಧೀಶರೆನಿಸಿಕೊಂಡ ತಾವು ಸಮಾಜದಲ್ಲಿ ಉನ್ನತ ಮೌಲ್ಯಗಳನ್ನು, ಆದರ್ಶಗಳನ್ನು ಬೋಧಿಸಬೇಕೆಂಬುದು ಶ್ರೀಸಾಮಾನ್ಯರ ಅಪೇಕ್ಷೆ.

ಈ ಹಿಂದೆ ಸಿರಿಗೆರೆ ಮಠದವರು ಜಗಳೂರು ಕ್ಷೇತ್ರದಲ್ಲಿ ಭ್ರಷ್ಟಾಚಾರರಹಿತವಾಗಿ, ಸೌಹಾರ್ದಯುತವಾಗಿ ಚುನಾವಣೆ ನಡೆಸುವ ಪ್ರಯೋಗ ಮಾಡಿದ್ದಾರೆ. ಜನರ ನಡುವೆ ಸಾಮರಸ್ಯ ಮೂಡಿಸಲು ಪ್ರಯತ್ನಿಸಿದ್ದಾರೆ. ಇದು ಸಂತರು, ಸನ್ಯಾಸಿಗಳು ಮಾಡಬೇಕಾದ ಮಾದರಿ ಕೆಲಸ. ಆದರೆ ತಾವು ಇಂಥಾ ಸನ್ಮಾರ್ಗವನ್ನು ಬಿಟ್ಟು ದುರ್ಮಾರ್ಗವನ್ನು ತುಳಿದಿದ್ದೀರಿ. ತಮ್ಮ ಮೇಲೆ ವಿಶ್ವಾಸವಿರಿಸಿರುವ ಭಕ್ತರನ್ನು ದಿಕ್ಕುತಪ್ಪಿಸುವ ಕೃತ್ಯದಲ್ಲಿ ತೊಡಗಿದ್ದೀರಿ.

ಸ್ವಾಮಿಗಳೇ,
ಇಂದಿನ ರಾಜಕೀಯ ಯಾವ ಹಂತಕ್ಕೆ ತಲುಪಿದೆಯೆಂಬುದು ಪಾಮರರಿಗೂ ತಿಳಿದಿರುವ ವಿಚಾರ. ಹೀಗಿರುವಾಗ ನಿತ್ಯವೂ ಜನರಿಗೆ ಉಪದೇಶ ಮಾಡುವ ತಮಗೆ ಈ ವಿಷಯ ತಿಳಿಯದೇ ಹೋಗಿರುವುದು ವಿಷಾದಕರ. ಅಧೋಗತಿಗಿಳಿದಿರುವ ರಾಜಕೀಯದ ಜೊತೆಗೆ ಧರ್ಮವನ್ನು ಬೆರೆಸುವ ನಿಮ್ಮ ಕೃತ್ಯದಿಂದ ಸಮಾಜವನ್ನು ಮತ್ತಷ್ಟು ವಿಪ್ಪತ್ತಿಗೆ ದೂಡಿದಂತಾಗುತ್ತದೆ.

ಮಠಾಧೀಶರೆನಿಸಿಕೊಂಡವರು ಜನರಿಗೆ ಸಾತ್ವಿಕ ಮಾರ್ಗ ಸೂಚಿಸುವ ಮಹತ್ಕಾರ್ಯ ಮಾಡಬೇಕಿತ್ತು. ಆದರೆ ಅದು ಬಿಟ್ಟು ರಾಜಕೀಯ ಪಕ್ಷಗಳಿಗೆ ಓಟು ಹಾಕಿಸುವ ಏಜೆಂಟರಂತೆ ವರ್ತಿಸುತ್ತಿರುವ ನಿಮ್ಮ ನಡೆ ಖಂಡನಾರ್ಹವಾದುದು. ಇದು `ಮಠಾಧೀಶ’ರ ಸ್ಥಾನಮಾನಕ್ಕೆ ಎಸಗುವ ಮಹಾಪರಾಧವಾಗುತ್ತದೆ. ಪೀಠಕ್ಕೆ ಮಾಡುವ ದ್ರೋಹವಾಗುತ್ತದೆ.

ಆದ್ದರಿಂದ ತಮ್ಮಲ್ಲಿ ನನ್ನ ಕಳಕಳಿಯ ಮನವಿ ಇಷ್ಟೆ. ಜನರ ಭಾವನೆಗಳಿಗೆ ಬೆಲೆ ಕೊಟ್ಟು ದಯಮಾಡಿ ತಮ್ಮ ಬೀದಿ ಕಚ್ಚಾಟವನ್ನು ಕೂಡಲೇ ನಿಲ್ಲಿಸಿ, ತಮ್ಮ ತಾತ್ವಿಕ ಭಿನ್ನಮತವನ್ನು ಸೌಹಾರ್ದಯುತ ಚರ್ಚೆಯ ಮೂಲಕ ಪರಿಹರಿಸಿಕೊಳ್ಳಿ. ಹಾಗೆಯೆ ತಮ್ಮ ರಾಜಕೀಯ ಪ್ರೇರಿತ ನಡವಳಿಕೆಗಳನ್ನು ಬದಲಿಸಿಕೊಂಡು ಪೀಠದ ಗೌರವವನ್ನು ಹಾಗೂ ತಮ್ಮ ಸ್ಥಾನಮಾನದ ಘನತೆಯನ್ನು ಕಾಪಾಡುತ್ತೀರೆಂದು ಆಶಿಸುತ್ತೇನೆ.

ವಂದನೆಗಳೊಂದಿಗೆ,
ಎಚ್.ಎಸ್.ದೊರೆಸ್ವಾಮಿ
ಬೆಂಗಳೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಮಾದಕ ದ್ರವ್ಯ ಕಳ್ಳಸಾಗಣೆ, ಜುಗಾರಿ,  ಭಿಕ್ಷೆ ಬೇಡುವುದನ್ನು ‘ವೃತ್ತಿ’ ಎಂದು ಪಟ್ಟಿ ಮಾಡಿದ...

0
ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರಪ್ರದೇಶ ಸರಕಾರ ಮತ್ತೆ ಮುಜುಗರಕ್ಕೆ ಈಡಾಗಿದ್ದು, ಉತ್ತರಪ್ರದೇಶ ಪೊಲೀಸ್ ಮೊಬೈಲ್ ಅಪ್ಲಿಕೇಶನ್ UPCOPನಲ್ಲಿ ಬಾಡಿಗೆದಾರರ ಪರಿಶೀಲನೆಗಾಗಿ ವೃತ್ತಿ ಬಗ್ಗೆ ಪಟ್ಟಿ ಮಾಡಿದೆ. ಅವುಗಳಲ್ಲಿ 'ಮಾದಕ ದ್ರವ್ಯಗಳ ಕಳ್ಳಸಾಗಣೆ', 'ಜುಗಾರಿ',  ಮತ್ತು...