Homeಕರ್ನಾಟಕದೇಶದ ಆರ್ಥಿಕ ಬಿಕ್ಕಟ್ಟು ನಿಜವೇ? ಹೇಗೆ?

ದೇಶದ ಆರ್ಥಿಕ ಬಿಕ್ಕಟ್ಟು ನಿಜವೇ? ಹೇಗೆ?

- Advertisement -
- Advertisement -

| ಡಾ. ಬಿ.ಸಿ.ಬಸವರಾಜು |

ಚಳ್ಳಕೆರೆ ಕಡೆಯಿಂದ ಬಂದು ಬೆಂಗಳೂರಲ್ಲಿ ನೆಲೆಸಿರೋ ಮೂರ್ತಿ ಪೀಣ್ಯದ ವಾಹನಗಳ ಬಿಡಿಭಾಗ ತಯಾರಿಸೊ ಒಂದು ಸಣ್ಣ ಕಾರ್ಖಾನೆಯಲ್ಲಿ ದಿನಗೂಲಿ ನೌಕರ.

ಅವತ್ತು ಅವನಿಗೆ ದಿನದ ಕೊನೇಲಿ ಸಿಗೋ ಮುನ್ನೂರು ರೂಪಾಯಿಯಲ್ಲಿ ಒಂದೆರಡು ಟೀ ಶರ್ಟು, ಒಂದೆರಡು ಅಂಡರ್‍ವೇರ್ ತೆಗೆದುಕೊಳ್ತಾನೆ. ಇವನಿಂದ ತೆಗೆದುಕೊಂಡ ಮುನ್ನೂರು ರೂಪಾಯಿಯಲ್ಲಿ ಆ ಸಣ್ಣ ಬಟ್ಟೆ ಅಂಗಡಿಯ ಮಾಲೀಕ ಅಬ್ದುಲ್ಲಾ ತನ್ನ ಮಗಳಿಗೆ ಕೆಲ ಪುಸ್ತಕ ಪೆನ್ನು ಇತ್ಯಾದಿ ಕೊಂಡುಕೊಳ್ತಾನೆ. ಆ ಪುಸ್ತಕದಂಗಡಿಯ ಒಡತಿ ಗೌರಿ ಆ ಮುನ್ನೂರು ರೂಪಾಯಿಯಲ್ಲಿ ಅವತ್ತು ಸಂಜೆ ಗಂಡುಮಕ್ಕಳ ಜತೆ ಹೋಗಿ ಹೋಟಲಲ್ಲಿ ತಿಂಡಿ ತಿನ್ನುತ್ತಾರೆ. ಆ ಹೋಟೆಲಿನ ಮಾಲೀಕ ಸಂದೇಶ್ ಆ ಮುನ್ನೂರು ರೂಪಾಯಿಯಲ್ಲಿ ಹೋಗಿ ಪೆಟ್ರೋಲ್ ಬಂಕಲ್ಲಿ ತನ್ನ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ತಾನೆ. ಆ ಪೆಟ್ರೋಲ್ ಬಂಕಿನ ಜಾರ್ಜ್ ಅದೇ ಮುನ್ನೂರು ರೂಪಾಯಿಯಲ್ಲಿ ತನ್ನ ಮೊಬೈಲ್ ರೀಚಾರ್ಜ್ ಮಾಡಿಸಿಕೊಳ್ತಾನೆ. (ಈ ಉದಾಹರಣೆಯಲ್ಲಿ ವಿಷಯವನ್ನು ಸರಳಗೊಳಿಸುವ ಕಾರಣಕ್ಕಾಗಿ ಕೈಗೆ ಬಂದ ಅಷ್ಟೂ ಹಣವನ್ನು ಖರ್ಚು ಮಾಡಿದಂತೆ ತೋರಿಸಲಾಗಿದೆ)

ಇಷ್ಟಾಗುವ ಹೊತ್ತಿಗೆ, ಮೂರ್ತಿ ದುಡಿದ ಮುನ್ನೂರು ರೂಪಾಯಿ ಒಟ್ಟಾರೆಯಾಗಿ ಸಾವಿರದ ಐನೂರು ರೂಪಾಯಿಯಷ್ಟು ಆರ್ಥಿಕ ಚಟುವಟಿಕೆ ಮಾಡಿದೆ. ಅಂದರೆ, ಈ ಮುನ್ನೂರು ರೂಪಾಯಿ ದೇಶದ ಜಿಡಿಪಿಗೆ (ದೇಶದ ಒಟ್ಟು ಆಂತರಿಕ ಉತ್ಪನ್ನ) ಒಂದೂವರೆ ಸಾವಿರ ರೂಪಾಯಿಗಳಷ್ಟು ಕೊಡುಗೆ ನೀಡಿದೆ (ಜಿಡಿಪಿ ಅಂದರೆ ಪ್ರಸಕ್ತ ವರ್ಷದಲ್ಲಿ ದೇಶದಲ್ಲಿ ಉತ್ಪತ್ತಿಯಾಗುವ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ಮೊತ್ತ).

ಇದೇ ಉದಾಹರಣೆಯ ಇನ್ನೊಂದು ಮಜಲನ್ನೂ ನೋಡುವುದಾದರೆ, ಮೂರ್ತಿಗೆ ಮುನ್ನೂರು ರೂಪಾಯಿ ಕೊಟ್ಟು ಅವನಿಂದ ಕೆಲಸ ತೆಗೆದುಕೊಂಡ ಕಾರ್ಖಾನೆಯ ಮಾಲೀಕ ಹಿತೇಶ್, ಆ ಮುನ್ನೂರು ರೂಪಾಯಿಗೆ ಪ್ರತಿಯಾಗಿ ಐನೂರು ರೂಪಾಯಿಯಷ್ಟು ಬೆಲೆಬಾಳುವ ಬಿಡಿಭಾಗ ತಯಾರಿಸಿಕೊಂಡಿರುತ್ತಾನೆ. ಆ ಬಿಡಿಭಾಗವನ್ನು ವಾಹನಾ ತಯಾರಿಕಾ ಸಂಸ್ಥೆಗೆ ಮಾರಿ ಇನ್ನೂರು ರೂಪಾಯಿ ಸಂಪಾದನೆ ಮಾಡಿಕೊಂಡು ತನ್ನ ಅವಶ್ಯಕತೆಗೆ ಬಳಸಿಕೊಳ್ಳುತ್ತಾನೆ (ಇದರಿಂದ ಇನ್ನೊಂದು ಆರ್ಥಿಕ ಚಟುವಟಿಕೆಯ ಸರಪಳಿ ಆರಂಭವಾಗುತ್ತದೆ). ಆ ಬಿಡಿಭಾಗ ಉಪಯೋಗಿಸಿ ವಾಹನ ತಯಾರಿಸಿ ಗ್ರಾಹಕರಿಗೆ ಮಾರುವ ವಾಹನಾ ತಯಾರಿಕಾ ಸಂಸ್ಥೆ ಬರುವ ದುಡ್ಡಲ್ಲಿ ತನ್ನ ನೌಕರರಿಗೆ ಸಂಬಳ ಕೊಟ್ಟು ಮಿಕ್ಕ ಲಾಭವನ್ನು ಮತ್ತೆ ಉತ್ಪಾದನೆಯಲ್ಲಿ ತೊಡಗಿಸಿ ಮತ್ತಷ್ಟು ಆರ್ಥಿಕ ಚಟುವಟಿಕೆಗೆ ಕಾರಣವಾಗುತ್ತದೆ.

ಆದರೆ, ದೇಶದಲ್ಲಿ ಸರ್ಕಾರದ ಕೆಲ ತಪ್ಪು ನಡೆಗಳಿಂದಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಾಗ ಜನರಲ್ಲಿ ಕೊಳ್ಳುವ ಶಕ್ತಿ ಕಡಿಮೆಯಾಗಿ ಮೇಲಿನ ಉದಾಹರಣೆಯಲ್ಲಿ ಬರುವ ವಾಹನ ತಯಾರಿಕಾ ಸಂಸ್ಥೆಯ ವಾಹನಗಳು ಮಾರಾಟವಾಗದೆ ಉಳಿಯುತ್ತವೆ. ಆಗ ಬಿಡಿಭಾಗ ತಯಾರಿಕಾ ಕಾರ್ಖಾನೆಯವರಿಗೂ ವ್ಯಾಪಾರವಾಗದೆ ಅವರು ಮೂರ್ತಿಯನ್ನು ಕೆಲಸದಿಂದ ತೆಗೆಯುತ್ತಾರೆ. ಒಬ್ಬ ಮೂರ್ತಿಯ ಕೆಲಸ ಹೋಗಿ ಸಂಪಾದನೆಗೆ ಪೆಟ್ಟು ಬಿದ್ದಾಗ ಮೇಲೆ ಹೆಸರಿಸಿದ ಅಷ್ಟೂ ಜನರ ಸಂಪಾದನೆಗೂ ಒಂದು ಮಟ್ಟಿನ ಪೆಟ್ಟು ಬಿದ್ದು ಅವರು ಖರ್ಚು ಮಾಡುವುದೂ ಕಡಿಮೆಯಾಗುತ್ತದೆ. ಇಲ್ಲಿ ಒಬ್ಬನ ಖರ್ಚು ಮತ್ತೊಬ್ಬನ ಸಂಪಾದನೆಯಾಗಿದ್ದು, ಈ ರೀತಿಯ ಸರಪಳಿಯೇ ಕಡಿದುಬೀಳುತ್ತದೆ. ಒಟ್ಟಾರೆಯಾಗಿ ಆರ್ಥಿಕ ಚಟುವಟಿಕೆ ಕಡಿಮೆಯಾಗುತ್ತದೆ ಮತ್ತು ಅದರಿಂದ ದೇಶದ ಜಿಡಿಪಿ ಕುಸಿಯುತ್ತದೆ. ಇದು ಇನ್ನಷ್ಟು ಉದ್ಯೋಗ ನಷ್ಟಕ್ಕೆ ಕಾರಣವಾಗಿ ಜನರನ್ನು ಮತ್ತೂ ಸಂಕಷ್ಟಕ್ಕೆ ದೂಡುತ್ತದೆ.

ಈಗ ದೇಶದಲ್ಲಿ ಇಂತದೇ ಆರ್ಥಿಕ ಹಿಂಜರಿತ ಉಂಟಾಗಿದ್ದು 2019-20ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯ ಬೆಳವಣಿಗೆ ಶೇ.5ಕ್ಕೆ ಕುಸಿದಿದ್ದು ಇದು ಕಡೆಯ ಆರು ವರ್ಷಗಳಲ್ಲೇ ಅತ್ಯಂತ ಕನಿಷ್ಟ ಜಿಡಿಪಿ ಬೆಳವಣಿಗೆಯಾಗಿದೆ. ಇಂತಹ ಆರ್ಥಿಕ ಹಿಂಜರಿತದ ಸಮಯದಲ್ಲಿ ಕೇಂದ್ರ ಸರ್ಕಾರವು ಹೆಚ್ಚು ಹಣವನ್ನು ಸಾರ್ವಜನಿಕ ಯೋಜನೆಗಳಿಗೆ ಖರ್ಚು ಮಾಡುವ ಮೂಲಕ ಜನರ ಕೈಲಿ ಸ್ವಲ್ಪ ಹಣಕಾಸು ಓಡಾಡುವಂತೆ ಮಾಡಿ ಆರ್ಥಿಕ ಪುನಶ್ಚೇತನಕ್ಕೆ ಪ್ರಯತ್ನಿಸಬೇಕಾಗುತ್ತದೆ.

ಅಂದರೆ, ಈಗ ಸರ್ಕಾರ ಗ್ರಾಮೀಣ ಉದ್ಯೋಗಖಾತ್ರಿಯಂತಹ ಯೋಜನೆಗಳಿಗೆ ಹೆಚ್ಚು ಹಣ ಕೊಟ್ಟು ಜನರ ಬಳಿ ಹಣ ಓಡಾಡುವಂತೆ ಮಾಡಿ ಒಟ್ಟಾರೆ ಬೇಡಿಕೆಯನ್ನು ಒಂದು ಮಟ್ಟಿಗೆ ಹೆಚ್ಚಳ ಮಾಡಬಹುದು. ಹೀಗೆ ಮಾಡಿದಾಗ ಆರ್ಥಿಕ ಪುನಶ್ಚೇತನ ಹೇಗಾಗುತ್ತದೆ ಎಂದು ಒಂದು ಸರಳ ಉದಾಹರಣೆಯೊಂದಿಗೆ ನೋಡೋಣ.

ಗಂಗಮ್ಮ ರಾಯಚೂರಿನ ಹಳ್ಳಿಯೊಂದರಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಲ್ಲಿಯ ಕೆರೆ ಹೂಳೆತ್ತುವ ಕೆಲಸಕ್ಕೆ ಹೋಗುತ್ತಾಳೆ. ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಹಣ ಕೊಡುತ್ತದೆ. ಅಲ್ಲಿಂದ ಗಂಗಮ್ಮ ಗಳಿಸಿದ ದುಡ್ಡನ್ನು ಅವಳ ಕುಟುಂಬದ ಅವಶ್ಯಕತೆಗಳಿಗೆ ಖರ್ಚು ಮಾಡುವುದರ ಮೂಲಕ ಅವಳು ಒಂದು ಮಟ್ಟಿಗಿನ ಕೊಡುಗೆಯನ್ನು ದೇಶದ ಆರ್ಥಿಕ ಚಟುವಟಿಕೆಗಳಿಗೆ ಕೊಡುತ್ತಾಳೆ. ಇತ್ತಕಡೆ, ಕೆರೆಯ ಮಣ್ಣನ್ನು ಬಳಸಿಕೊಂಡ ಪಕ್ಕದ ಹೊಲಗಳ ಫಲವತ್ತತೆ ಹೆಚ್ಚಾಗಿ ಅಲ್ಲಿಯ ಇಳುವರಿ ಹೆಚ್ಚಾಗಿ ಆ ರೈತನ ಸಂಪಾದನೆ, ಖರ್ಚು (ಮಕ್ಕಳ ಫೀಜು ಕಟ್ಟುವುದು ಇತ್ಯಾದಿ) ಮತ್ತು ಉಳಿತಾಯ ಎಲ್ಲವೂ ಹೆಚ್ಚಿ ಮತ್ತಷ್ಟು ಆರ್ಥಿಕತೆ ಮುಂದುವರೆಯುತ್ತದೆ. ಮತ್ತೊಂದೆಡೆ, ಕೆರೆಯ ಹೂಳೆತ್ತಿದ್ದರಿಂದ ಕೆರೆಯ ನೀರು ಶೇಖರಣಾ ಸಾಮರ್ಥ್ಯ ಹೆಚ್ಚಿ ಸುತ್ತಮುತ್ತಲ ಅಂತರ್ಜಲ ಹೆಚ್ಚುವುದಲ್ಲದೆ, ಪ್ರವಾಹದಂತಹ ಸಮಯದಲ್ಲಿ ಪ್ರವಾಹದ ತೀವ್ರತೆ ಅಲ್ಪಮಟ್ಟಿಗಾದರೂ ಕಡಿಮೆಯಾಗುತ್ತದೆ. ಒಟ್ಟಾರೆ, ಸರ್ಕಾರ ಈ ರೀತಿ ಪ್ರಜೆಗಳ ಮೇಲೆ ಮಾಡುವ ಖರ್ಚು ನೇರವಾಗಿ ಆರ್ಥಿಕ ಚಟುವಟಿಕೆ ಹೆಚ್ಚಿಸುವುದಲ್ಲದೆ, ಪರೋಕ್ಷವಾಗಿ ಸಾಮಾಜಿಕ ಬಂಡವಾಳವಾಗಿಯೂ (ಭೂಮಿಯ ಫಲವತ್ತತೆಯ ಹೆಚ್ಚಳ) ಕೆಲಸಮಾಡಿ ಒಟ್ಟಾರೆ ಆರ್ಥಿಕತೆಯ ಚಕ್ರ ಸರಾಗವಾಗಿ ಉರುಳಲು ಸಹಾಯ ಮಾಡುತ್ತದೆ. ಇದನ್ನೇ ರಸ್ತೆ ನಿರ್ಮಾಣವೂ ಸೇರಿದಂತೆ ಯಾವುದೇ ಸಾರ್ವಜನಿಕ ಯೋಜನೆಗಳಿಗೆ ಅನ್ವಯಿಸಬಹುದು.

ಆದರೆ, ಈ ರೀತಿ ಸಾರ್ವಜನಿಕ ಕೆಲಸಗಳಿಗೆ ಹೆಚ್ಚು ಹೆಚ್ಚು ಹಣ ಕೊಟ್ಟು ಆರ್ಥಿಕ ಪುನಶ್ಚೇತನಗೊಳಿಸಲೂ ಸಹ ಹಣವಿಲ್ಲದಂತಹ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ತಂದುಕೊಂಡಿದೆ. ಅಂದರೆ, ದೇಶ ತಕ್ಷಣ ಚೇತರಿಸಿಕೊಳ್ಳಲು ಸುಲಭ ಸಾಧ್ಯವಿರದಂತಹ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ. ಆದರೆ, ಸರ್ಕಾರದ ಕೆಲ ಸಮರ್ಥಕರು ಈಗಿನ ಆರ್ಥಿಕ ಹಿಂಜರಿತವನ್ನು ಒಪ್ಪುತ್ತಲೇ ದೇಶದ ಎಲ್ಲ ಆರ್ಥಿಕ ವಲಯಗಳೂ ಈ ಹಿಂಜರಿಕೆಗೆ ಸಿಕ್ಕಿಲ್ಲವಾದ್ದರಿಂದ ಇದೊಂದು ತಾತ್ಕಾಲಿಕ ಆರ್ಥಿಕ ಹಿಂಜರಿತವಷ್ಟೆ. ಇನ್ನು ಮೂರ್ನಾಲ್ಕು ತಿಂಗಳಿನಲ್ಲಿ ಈ ಪರಿಸ್ಥಿತಿಯಿಂದ ದೇಶ ಈಚೆ ಬರಲಿದೆ ಎಂಬ ಮಾತನಾಡುತ್ತಿದ್ದಾರೆ.

ಹಾಗಿದ್ದರೆ, ದೇಶದ ಯಾವ್ಯಾವ ವಲಯಗಳಲ್ಲಿ ಆರ್ಥಿಕ ಹಿಂಜರಿಕೆಯಾಗಿದೆ ಮತ್ತು ಇದರಿಂದ ಮೂರ್ನಾಲ್ಕು ತಿಂಗಳಲ್ಲಿಯೇ ಹೊರಬರಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸೋಣ.

1) ವಾಹನ ಮಾರಾಟ ಕ್ಷೇತ್ರ: ಕಾರುಗಳ ಮಾರಾಟ 2018ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ 2019ರ ಮೊದಲ ತ್ರೈಮಾಸಿಕದಲ್ಲಿ ಶೇ.23.3ರಷ್ಟು ಇಳಿಕೆಯಾಗಿದ್ದು ಇದು ಕಳೆದ 15 ವರ್ಷಗಳಲ್ಲೇ ಅತ್ಯಂತ ದೊಡ್ಡ ಇಳಿಕೆಯಾಗಿದೆ. ಇದಕ್ಕೆ ತಕ್ಕಂತೆ ವಾಹನ ಸಾಲದ ಪ್ರಮಾಣವೂ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.5.1ರಷ್ಟು ಕಡಿಮೆಯಾಗಿದೆ.

ಅದೇರೀತಿ ದ್ವಿಚಕ್ರ ವಾಹನಗಳ ಮಾರಾಟ ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ.11.7ರಷ್ಟು ಇಳಿಕೆಯಾಗಿದ್ದು ಮತ್ತು ಮೊಪೆಡ್‍ಗಳ ಮಾರಾಟ ಶೇ.19.9ರಷ್ಟು ಇಳಿಕೆಯಾಗಿದ್ದು ಇದು 2008ರ ನಂತರ ಅತಿದೊಡ್ಡ ಇಳಿಕೆಯಾಗಿದೆ.
ಟ್ರ್ಯಾಕ್ಟರುಗಳ ಮಾರಾಟ ಕಳೆದ ವರ್ಷದ ಹೋಲಿಕೆಯಲ್ಲಿ ಶೇ.14ರಷ್ಟು ಇಳಿಕೆಯಾಗಿದ್ದು ಗ್ರಾಮೀಣ ಭಾಗದಲ್ಲಿಯ ಬೇಡಿಕೆ ಕುಸಿತವನ್ನು ಸ್ಪಷ್ಟವಾಗಿ ತೋರಿಸುತ್ತಿದೆ.

2) ದೇಶೀಯ ವಾಣಿಜ್ಯ ವಾಹನಗಳ ಮಾರಾಟ: ವಾಣಿಜ್ಯ ವಾಹನಗಳ (ಟ್ರಕ್, ಮಿನಿ ಲಾರಿ ಇತ್ಯಾದಿ) ಮಾರಾಟದ ಪ್ರಮಾಣವು ಇಡೀ ದೇಶದ ಕೈಗಾರಿಕಾ ಚಟುವಟಿಕೆಯ ಮತ್ತು ಮೂಲಸೌಕರ್ಯದ ಮಟ್ಟವನ್ನು ಸೂಚಿಸುತ್ತದೆ.
ಏಕೆಂದರೆ, ಈ ವಾಣಿಜ್ಯ ವಾಹನಗಳು ಸಿದ್ಧಪಡಿಸಿದ ಸರಕುಗಳು ಮತ್ತು ಅರೆ ಸಿದ್ಧಪಡಿಸಿದ ಸರಕುಗಳನ್ನು (finished and semi finished goods) ದೇಶದ ಉದ್ದಗಲಕ್ಕೆ ಸಾಗಿಸುತ್ತವೆ. ಆ ಕಾರಣಕ್ಕಾಗಿಯೇ, ಆರ್ಥಿಕ ಚಟುವಟಿಕೆ ಹೆಚ್ಚಿದ್ದಷ್ಟೂ ಈ ವಾಣಿಜ್ಯ ವಾಹನಗಳ ಅವಶ್ಯಕತೆ ಹೆಚ್ಚಾಗಿಯೇ ಇರುತ್ತದೆ.

ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವಾಣಿಜ್ಯ ವಾಹನಗಳ ಮಾರಾಟ ಶೇ.9.5ರಷ್ಟು ಇಳಿಕೆಯಾಗಿದ್ದು ಇಡೀ ದೇಶದ ಕೈಗಾರಿಕಾ ಚಟುವಟಿಕೆ ಕಡಿಮೆಯಾಗಿರುವುದನ್ನು ಸೂಚಿಸುತ್ತದೆ.

ಒಟ್ಟಾರೆಯಾಗಿ, ಮೇಲಿನ ಎರಡೂ ಅಂಶಗಳು ವಾಹನಾ ತಯಾರಿಕಾ ಕ್ಷೇತ್ರದ (Automobile sector) ಬೆಳವಣಿಗೆ ಭಾರೀ ಕುಂಠಿತವಾಗಿರುವುದನ್ನು ಸೂಚಿಸುತ್ತವೆ. ಇದರಿಂದಾಗಿಯೇ ಕಳೆದ ಕೇವಲ ನಾಲ್ಕು ತಿಂಗಳುಗಳಲ್ಲಿ ಈ ಒಂದು ಕ್ಷೇತ್ರದಲ್ಲಿಯೇ ಮೂರೂವರೆ ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದು, ಮುಂದಿನ ತಿಂಗಳುಗಳಲ್ಲಿ ಇನ್ನೂ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸುತ್ತಿವೆ (ಆಗಸ್ಟ್ 2019ರ ಮಾರಾಟ ಕೂಡ ಭಾರೀ ಇಳಿಕೆ ಕಂಡಿರುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು).

ಯಾವಾಗ ವಾಹನ ತಯಾರಿಕಾ ಕ್ಷೇತ್ರ ಹಿನ್ನಡೆ ಅನುಭವಿಸುತ್ತದೆಯೋ ಆಗ ಅದಕ್ಕೆ ಸಂಬಂಧಿಸಿದ ಸ್ಟೀಲ್, ಟೈರ್, ಪೇಂಟ್, ಗ್ಲಾಸ್, ಬಿಡಿಭಾಗಗಳು ಕಡೆಗೆ ಸ್ಟಿಕರ್ ತಯಾರಿಕೆಯಂತಹ ಉದ್ಯಮಗಳೂ ಹಿನ್ನಡೆ ಅನುಭವಿಸುತ್ತವೆ (ಇದು ಈಗಾಗಲೇ ಆರಂಭವಾಗಿದೆ). ಈ ಎಲ್ಲಾ ಸಂಬಂಧಿತ ಉದ್ಯಮಗಳಲ್ಲೂ ಬೇಡಿಕೆಯ ಕೊರತೆ, ಉತ್ಪಾದನೆಯ ಇಳಿಕೆ ಮತ್ತು ಅದರಿಂದ ಉದ್ಯೋಗ ನಷ್ಟವೂ ಆಗಿ ಆರ್ಥಿಕ ಹಿಂಜರಿತ ಮತ್ತಷ್ಟು ಜಾಸ್ತಿಯಾಗುತ್ತಾ ಎಲ್ಲಾ ವಲಯಗಳನ್ನೂ ಆವರಿಸುತ್ತದೆ.

3) ಗ್ರಾಹಕ ಸರಕುಗಳು (Fast Moving Consumer Goods, FMCG): ದಿನನಿತ್ಯದ ಬಳಕೆಯ ವಸ್ತುಗಳಾದ ಕಾಫಿ ಪೌಡರ್, ಬಿಸ್ಕತ್, ಎಣ್ಣೆ, ಬಟ್ಟೆ, ಮೆಮೋರಿ ಕಾರ್ಡ್ ಇತ್ಯಾದಿಗಳು ಗ್ರಾಹಕ ಸರಕುಗಳ ಅಡಿಯಲ್ಲಿ ಬರುತ್ತವೆ. ಈ ಸರಕುಗಳ ಮಾರಾಟವೂ ಕುಸಿದಿರುವುದು ಜನರಲ್ಲಿ ಕೊಳ್ಳುವ ಶಕ್ತಿಯೇ ಕಡಿಮೆಯಾಗಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಪ್ರಮುಖ ಗ್ರಾಹಕ ಸರಕು ತಯಾರಿಕಾ ಕಂಪನಿಗಳಾದ ಹಿಂದೂಸ್ತಾನ್ ಯೂನಿಲಿವರ್ (2018ರ ಮೊದಲ ತ್ರೈಮಾಸಿಕದಲ್ಲಿ 12% ಮತ್ತು 2019ರಲ್ಲಿ 5%), ಬ್ರಿಟಾನಿಯ (2018ರಲ್ಲಿ 13% ಮತ್ತು 2019 ರಲ್ಲಿ 6%), ಡಾಬರ್ (2018 ರಲ್ಲಿ 21% ಮತ್ತು 2019 ರಲ್ಲಿ 6%)ಗಳ ಬೆಳವಣಿಗೆಯ ದರ ಹೋದ ವರ್ಷಕ್ಕಿಂತ ಕಡಿಮೆಯಾಗಿದೆ.

ಬ್ರಿಟಾನಿಯ ಎಂಡಿ ವರುಣ್ ಬೆರಿ ಹೇಳಿದ “ಐದು ರೂಪಾಯಿಯ ಬಿಸ್ಕತ್ ಪ್ಯಾಕ್ ಖರೀದಿಸಲೂ ಕೂಡ ಜನ ಹಿಂದೆಮುಂದೆ ನೋಡುತ್ತಿದ್ದಾರೆ” ಎಂಬ ಮಾತುಗಳನ್ನು ಮತ್ತು ಪಾರ್ಲೆ ಜಿ ಕಂಪನಿಯು ತನ್ನ ಹತ್ತು ಸಾವಿರ ಉದ್ಯೋಗಿಗಳನ್ನು ತೆಗೆದುಹಾಕುವ ಸಾಧ್ಯತೆಯನ್ನೂ ಈ ಹಿನ್ನೆಲೆಯಲ್ಲಿ ಗಮನಿಸಬಹುದು.

4) ಉತ್ಪಾದನಾ ವಲಯ (Manufacturing sector): ಉತ್ಪಾದನಾ ವಲಯವು ದೇಶದ ಜಿಡಿಪಿಗೆ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚು ಕೊಡುಗೆ ನೀಡುವ ಕ್ಷೇತ್ರವಾಗಿದ್ದು 2018ರ ಮೊದಲ ತ್ರೈಮಾಸಿಕದಲ್ಲಿ 12.1%ರಷ್ಟು ಬೆಳವಣಿಗೆ ಕಂಡಿದ್ದ ಈ ವಲಯ 2019ರಲ್ಲಿ ಕೇವಲ 0.6%ರಷ್ಟು ಬೆಳವಣಿಗೆ ಕಂಡಿದೆ. ಇದು ಭಾರೀ ಕಳವಳಕಾರಿ ಎನ್ನುವಷ್ಟು ಕಡಿಮೆ ಬೆಳವಣಿಗೆಯಾಗಿದ್ದು ದೇಶದ ಜಿಡಿಪಿ ಮತ್ತು ಉದ್ಯೋಗ ಸೃಷ್ಟಿ ಎರಡರ ಮೇಲೂ ಮತ್ತಷ್ಟು ನಕಾರಾತ್ಮಕ ಪರಿಣಾಮ ಬೀರಲಿದೆ.

5) ಕೃಷಿ ಕ್ಷೇತ್ರ: ಕಳೆದ ವರ್ಷ ಒಳ್ಳೆಯದು ಎನಿಸುವ 5.1%ರಷ್ಟು ಬೆಳವಣಿಗೆ ಕಂಡಿದ್ದ ಕೃಷಿ ಕ್ಷೇತ್ರ 2019 ಏಪ್ರಿಲ್ – ಜೂನ್ ಮಧ್ಯೆ ಕೇವಲ ಶೇ.2ರಷ್ಟು ಮಾತ್ರ ಬೆಳೆದಿದೆ. ಈಗಲೂ ದೇಶದ ಕನಿಷ್ಟ ಶೇ.50ರಷ್ಟು ಮಂದಿ ಕೃಷಿಯ ಮೇಲೆಯೇ ಅವಲಂಬಿತರಾಗಿದ್ದು, ಈ ರೀತಿಯ ಕನಿಷ್ಟ ಬೆಳವಣಿಗೆ ಗ್ರಾಮೀಣ ಭಾಗದ ಬೇಡಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಈಗಾಗಲೇ ಕುಸಿದಿರುವ ಟ್ರ್ಯಾಕ್ಟರ್, ಮೊಪೆಡ್ ಮತ್ತು ಗ್ರಾಹಕ ಸರಕುಗಳ ಮಾರಾಟದಲ್ಲಿ ಪ್ರತಿಫಲಿತವಾಗುತ್ತಿದೆ.

6) ಕಟ್ಟಡ ನಿರ್ಮಾಣ ಕ್ಷೇತ್ರ: ನಿರ್ಮಾಣ ಕ್ಷೇತ್ರವು ಇತ್ತೀಚಿನ ವರ್ಷಗಳಲ್ಲಿ ಅಂದಾಜು ಶೇ.10ರಷ್ಟು ಜನರಿಗೆ (ದೇಶದ ಒಟ್ಟು ಉದ್ಯೋಗಗಳಲ್ಲಿ ಶೇ.10) ಉದ್ಯೋಗ ನೀಡುವ ಕ್ಷೇತ್ರವಾಗಿದ್ದು, ಒಂದು ಮಟ್ಟಿಗೆ ದೇಶದ ಆರ್ಥಿಕ ಚಟುವಟಿಕೆಗಳ ಚಾಲನಾಶಕ್ತಿಯೂ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.9.7ರಷ್ಟು ಬೆಳವಣಿಗೆ ಕಂಡಿದ್ದ ಈ ಕ್ಷೇತ್ರ ಈ ವರ್ಷ ಕೇವಲ ಶೇ.5.7ರಷ್ಟು ಮಾತ್ರ ಬೆಳೆದಿದೆ.

7) ನಿರ್ಮಿತ ವಸತಿಗಳ ಮಾರಾಟ: ಲಯಾಸಸ್ ಫೆರಾಸ್ (Liases  Foras, a real estate research company) ವರದಿಯ ಪ್ರಕಾರ ಭಾರತದ ಮೂವತ್ತು ದೊಡ್ಡ ನಗರಗಳಲ್ಲಿ ನಿರ್ಮಾಣಗೊಂಡಿರುವ ಮನೆಗಳಲ್ಲಿ ಒಟ್ಟು ಹನ್ನೆರಡು ಲಕ್ಷದ ಎಂಬತ್ತು ಸಾವಿರ ಮನೆಗಳು ಮಾರಾಟವಾಗದೆ ಉಳಿದಿವೆ. ಕಳೆದ ವರ್ಷ ಇದೇ ಸಮಯದಲ್ಲಿ ಅವುಗಳ ಸಂಖ್ಯೆ ಹನ್ನೆರಡು ಲಕ್ಷ ಇತ್ತು.

ಈ ಮೇಲಿನ ಕಟ್ಟಡ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ಉದ್ಯಮವು ಸ್ಟೀಲ್, ಸಿಮೆಂಟ್, ಪೇಂಟ್, ಟಿಂಬರ್, ಇಟ್ಟಿಗೆ ಸೇರಿದಂತೆ ಅಂದಾಜು ಇನ್ನೂರೈವತ್ತು ಇತರೆ ಉದ್ಯಮಗಳ ಜೊತೆ ತಳುಕು ಹಾಕಿಕೊಂಡಿದ್ದು, ಈ ಕ್ಷೇತ್ರದ ಹಿನ್ನಡೆ ಉಳಿದ ಇನ್ನೂರೈವತ್ತು ಸಂಬಂಧಿತ ಉದ್ಯಮ ಕ್ಷೇತ್ರಗಳ ಮೇಲೂ ಪ್ರಭಾವ ಬೀರುತ್ತದೆ.

8) ಉತ್ಪಾದಿತ ಉಕ್ಕಿನ ಬಳಕೆಯ ಪ್ರಮಾಣ: ಉಕ್ಕು ಅಥವಾ ಸ್ಟೀಲ್‍ನ ಬಳಕೆಯು ಮೂಲಸೌಕರ್ಯದ ಬೆಳವಣಿಗೆ ಮತ್ತು ಬಂಡವಾಳದ ಹರಿವಿನ ಪ್ರಮಾಣವನ್ನು ಸೂಚಿಸುತ್ತದೆ. ಕಳೆದ ವರ್ಷದ ಈ ಅವಧಿಯಲ್ಲಿ ಶೇ.8.8ರಷ್ಟು ಪ್ರಗತಿ ಸಾಧಿಸಿದ್ದು, ಈ ವರ್ಷ ಕೇವಲ ಶೇ.6.6ರ ಪ್ರಗತಿ ತೋರಿಸಿದೆ. ಇದು ದೇಶೀ ಅಥವಾ ವಿದೇಶೀ ಬಂಡವಾಳದ ಹರಿವಿನ ಕೊರತೆ ಮತ್ತು ಮೂಲಸೌಕರ್ಯದ ಅಭಿವೃದ್ಧಿಯ ಕೊರತೆಯನ್ನೂ ಸ್ಪಷ್ಟವಾಗಿ ತೋರಿಸುತ್ತಿದೆ.

9) ಉದ್ದಿಮೆಗಳಿಗೆ ಬ್ಯಾಂಕ್ ಸಾಲ ನೀಡಿಕೆ: ಕಳೆದೆರಡು ವರ್ಷಗಳಲ್ಲಿ ಬಹುತೇಕ ಬೆಳವಣಿಗೆಯೇ ಇಲ್ಲದಿದ್ದ ಉದ್ದಿಮೆಗಳಿಗೆ ಬ್ಯಾಂಕ್ ಸಾಲದ ಪ್ರಮಾಣ ಕಳೆದ ಬಾರಿಗೆ ಹೋಲಿಸಿದರೆ 2019 ಏಪ್ರಿಲ್ – ಜೂನ್ ಅವಧಿಯಲ್ಲಿ ಶೇ.6.5ರಷ್ಟು ಏರಿಕೆ ಕಂಡಿದೆ. 2018ರ ಇದೇ ಅವಧಿಯಲ್ಲಿ ಈ ಪ್ರಮಾಣ ಕೇವಲ ಶೇ.0.9ರಷ್ಟು ಮಾತ್ರ ಏರಿಕೆ ದಾಖಲಿಸಿತ್ತು.

ಆದರೆ, ಈ ಸಾಲದಲ್ಲಿ ಬೃಹತ್ ಉದ್ದಿಮೆಗಳಿಗೆ ಸಾಲ ನೀಡಿಕೆಯ ಪ್ರಮಾಣ ಶೇ.0.8ರಿಂದ ಈ ವರ್ಷ ಶೇ.7.6ರಷ್ಟು ಏರಿಕೆಯಾಗಿದ್ದರೆ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಹೋದವರ್ಷ ಶೇ0.7 ಏರಿಕೆಯಾಗಿದ್ದು ಈ ವರ್ಷ ಬಹುತೇಕ ಅಷ್ಟೇ ಅಂದರೆ ಶೇ.0.6ರಷ್ಟು ಮಾತ್ರ ಏರಿಕೆ ದಾಖಲಿಸಿದೆ. ಅಂದರೆ, ಅತಿಹೆಚ್ಚು ಉದ್ಯೋಗ ಸೃಷ್ಟಿಸುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಬರೀ ಬಾಯಿಮಾತಿನ ಬೆಂಬಲ ಬಿಟ್ಟರೆ ಅತ್ಯವಶ್ಯವಾದ ಆರ್ಥಿಕ ಸಹಾಯ ದೊರೆಯುತ್ತಿಲ್ಲ. ಕಳೆದ ಎರಡು ಮೂರು ವರ್ಷಗಳಲ್ಲಿ ಉಂಟಾದ ಲಕ್ಷಾಂತರ ಉದ್ಯೋಗ ನಷ್ಟವನ್ನು ಈ ಹಿನ್ನೆಲೆಯಲ್ಲಿಯೂ ನೋಡಬಹುದಾಗಿದೆ.

10) ಸರಕು ಸಾಗಣೆ ರೈಲುಗಳ ಆದಾಯ ವೃದ್ಧಿ: ದೇಶದಲ್ಲಿ ಉತ್ಪತ್ತಿಯಾಗುವ ಸರಕುಗಳ ಬಹುತೇಕ ಭಾಗ ದೇಶದ ಉದ್ದಗಲಕ್ಕೂ ಸರಬರಾಜಾಗುವುದು ಗೂಡ್ಸ್ ರೈಲುಗಳ ಮುಖಾಂತರವೆ. ಮುಖ್ಯವಾಗಿ ಕಲ್ಲಿದ್ದಲು, ಪಿಗ್ ಐರನ್, ಸಿಮೆಂಟ್, ಪೆಟ್ರೋಲಿಯಂ ಉತ್ಪನ್ನಗಳ, ರಸಗೊಬ್ಬರ, ಕಬ್ಬಿಣದ ಅದಿರು ಇತ್ಯಾದಿ ಸರಕುಗಳು ದೇಶದ ಬಹುತೇಕ ಕಡೆಗಳಿಗೆ ಸರಬರಾಜಾಗುತ್ತವೆ. ಈ ಸರಕುಗಳು ಸರಬರಾಜಾಗುವ ಪ್ರಮಾಣ ದೇಶದಲ್ಲಿನ ಬಂಡವಾಳ ಹೂಡಿಕೆಯ ಮತ್ತು ಕೈಗಾರಿಕಾ ಅಭಿವೃದ್ಧಿಯ ಪ್ರಮಾಣಗಳನ್ನು ಸ್ಪಷ್ಟವಾಗಿ ಸೂಚಿಸುತ್ತವೆ. 2018ರ ಮೊದಲ ತ್ರೈಮಾಸಿಕದಲ್ಲಿ ಶೇ.6.4ರಷ್ಟು ಏರಿಕೆ ದಾಖಲಿಸಿದ್ದ ಸರಕು ಸಾಗಣೆ ರೈಲಿನ ಆದಾಯವು ಈ ವರ್ಷದ ಇದೇ ಅವಧಿಯಲ್ಲಿ ಕೇವಲ ಶೇ.2.7ರಷ್ಟು ಮಾತ್ರ ಬೆಳವಣಿಗೆ ಸಾಧಿಸಿದ್ದು ದೇಶದೆಲ್ಲೆಡೆ ಬಂಡವಾಳ ಹೂಡಿಕೆಯ ಮತ್ತು ಒಟ್ಟಾರೆ ಆರ್ಥಿಕ ಹಿಂಜರಿತದ ಸ್ಥಿತಿ ಇರುವುದನ್ನು ಎತ್ತಿ ತೋರಿಸುತ್ತಿದೆ.

11) ಹೊಸಾ ಬಂಡವಾಳ ಹೂಡಿಕೆಯ ಘೋಷಣೆ ಮತ್ತು ಹಳೆಯ ಯೋಜನೆಗಳ ಪೂರ್ಣಗೊಂಡ ಪ್ರಮಾಣ: 2018ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ 2019ರ ಅದೇ ಅವಧಿಯಲ್ಲಿ ಹೊಸಾ ಯೋಜನೆಗಳಿಗೆ ಬಂಡವಾಳ ಹೂಡಿಕೆಯ ಘೋಷಣೆಯ ಪ್ರಮಾಣ ಶೇ.79.5ರಷ್ಟು ಕಡಿಮೆಯಾಗಿದ್ದು ಇದು ಕಳೆದ ಹದಿನೈದು ವರ್ಷಗಳಲ್ಲೇ ಅತೀ ಕಡಿಮೆಯಾದುದಾಗಿದೆ. ಅಂದರೆ, ಸರ್ಕಾರ ಏನೇ ಬಣ್ಣದ ಮಾತುಗಳಾಡುತ್ತಿದ್ದರೂ ಸಹ ಬಂಡವಾಳ ಹೂಡಲು ಉದ್ದಿಮೆದಾರರಲ್ಲಿ ದೇಶದ ಆರ್ಥಿಕ ಭವಿಷ್ಯದ ಬಗ್ಗೆ ವಿಶ್ವಾಸ ಮೂಡುತ್ತಿಲ್ಲ.

ಇದರ ಜೊತೆಗೆ, ಮೊದಲೇ ಬಂಡವಾಳ ಹೂಡಿ (ಖಾಸಗಿ ಮತ್ತು ಸರ್ಕಾರಿ) ಆರಂಭಿಸಲಾಗಿರುವ ಯೋಜನೆಗಳು ಪೂರ್ಣಗೊಳ್ಳದೆ ಕುಂಟುತ್ತಾ ಸಾಗಿವೆ. ಯೋಜನೆಗಳು ಪೂರ್ಣಗೊಂಡ ಪ್ರಮಾಣ ಶೇ.48ರಷ್ಟು ಕೆಳಗಿಳಿದಿದ್ದು ಕೇವಲ 69,484 ಕೋಟಿ ರೂಪಾಯಿಗಳಷ್ಟು ಮೌಲ್ಯದ ಯೋಜನೆಗಳು ಪೂರ್ಣಗೊಂಡಿದ್ದು ಇದು ಕಳೆದ ಐದು ವರ್ಷಗಳಲ್ಲೆ ಅತಿ ಕಡಿಮೆಯಾಗಿದೆ.

12) ರಫ್ತಿನ ಪ್ರಮಾಣ: 2018ರ ಮೊದಲ ತ್ರೈಮಾಸಿಕದಲ್ಲಿ ಭಾರತದಿಂದಾದ ಒಟ್ಟು ನಿವ್ವಳ ರಫ್ತಿನ ಮೌಲ್ಯ 46.6 ಬಿಲಿಯನ್ ಡಾಲರುಗಳಾಗಿದ್ದು, ಈ ವರ್ಷವೂ ಹೆಚ್ಚೂಕಡಿಮೆ ಅದೇ ಮಟ್ಟದಲ್ಲಿದ್ದು 46 ಬಿಲಿಯನ್ ಡಾಲರುಗಳಾಗಿದೆ. ಅಂದರೆ, ರಫ್ತು ಕ್ಷೇತ್ರದಲ್ಲೂ ಆರ್ಥಿಕ ಚಟುವಟಿಕೆಗಳು ನೀರಸವಾಗಿವೆ ಎಂಬುದನ್ನು ಇದು ಸೂಚಿಸುತ್ತದೆ.

ಈ ಮೇಲಿನೆಲ್ಲ ಅಂಶಗಳು ದೇಶ ಈಗಾಗಲೇ ಗಂಭೀರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿವೆ. ಇಂಥಾ ಸನ್ನಿವೇಶದಲ್ಲಿ, ಸರ್ಕಾರ ಹೆಚ್ಚು ಖರ್ಚು ಮಾಡುವುದರ ಮೂಲಕ ಆರ್ಥಿಕ ಚಟುವಟಿಕೆಗಳನ್ನು ಒಂದು ಮಟ್ಟಿಗೆ ಪುನಶ್ಚೇತನಗೊಳಿಸಬಹುದು. ಪ್ರತಿ ವರ್ಷವೂ ಸರ್ಕಾರ ಸಾರ್ವಜನಿಕ ಯೋಜನೆಗಳಿಗೆ ಮಾಡುವ ಖರ್ಚು ದೇಶದ ಜಿಡಿಪಿಯ ಕನಿಷ್ಟ ಶೇ.10ರಿಂದ ಶೇ.11ರಷ್ಟಿರುತ್ತದೆ. 2017 ಮತ್ತು 2018ರಲ್ಲಿ ಈ ಖರ್ಚು ಶೇ.19.1 ಮತ್ತು ಶೇ.13.2ರಷ್ಟು ಬೆಳವಣಿಗೆ ಕಂಡಿದೆ.

ಆದರೆ, ಆ ರೀತಿ ಹೆಚ್ಚು ಖರ್ಚು ಮಾಡಲು ಸರ್ಕಾರಕ್ಕೆ ತೆರಿಗೆ ಸಂಗ್ರಹ ಮತ್ತು ಪ್ರಜೆಗಳ ಉಳಿತಾಯದ ಹಣವೇ ಮೂಲವಾಗಿರುತ್ತದೆ. ಆದರೆ ಈ ತ್ರೈಮಾಸಿಕದಲ್ಲಿ ತೆರಿಗೆ ಸಂಗ್ರಹ ಕೇವಲ 1.4%ರಷ್ಟು ಮಾತ್ರ ಹೆಚ್ಚಾಗಿದ್ದು, ಜೊತೆಗೆ ದೇಶೀಯ ಉಳಿತಾಯದ ಪ್ರಮಾಣ 2008ಕ್ಕೆ ಹೋಲಿಸಿದರೆ 7% ಪಾಯಿಂಟುಗಳಷ್ಟು ಕಡಿಮೆಯಾಗಿದ್ದು ಸರ್ಕಾರದ ಬಳಿ ಖರ್ಚು ಮಾಡಲು ಹಣವಿಲ್ಲದಾಗಿದೆ (ಈ ಹಿನ್ನೆಲೆಯಲ್ಲಿ ಸರ್ಕಾರ ರಿಸರ್ವ್ ಬ್ಯಾಂಕಿಂದ ಹಣ ವರ್ಗಾವಣೆ ಮಾಡಿಕೊಂಡಿರುವುದನ್ನು ನೋಡಬಹುದು. ಇದರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ).
ಹಾಗಾಗಿ, ಸರ್ಕಾರ ಸದ್ಯದ ಸ್ಥಿತಿಯಲ್ಲಿ ಸಾರ್ವಜನಿಕ ಯೋಜನೆಗಳಿಗೆ (ನರೇಗ, ಮೂಲಸೌಕರ್ಯ ಇತ್ಯಾದಿ) ಹಣ ಖರ್ಚು ಮಾಡಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ಸ್ಥಿತಿಯಲ್ಲಿಯೂ ಇದ್ದಂತೆ ಕಾಣುತ್ತಿಲ್ಲ.

ಒಟ್ಟಾರೆಯಾಗಿ ನೋಡಿದಾಗ, ಸರ್ಕಾರದ ಕೆಲ ಸಮರ್ಥಕರು ಹೇಳುವುದಕ್ಕೆ ವಿರುದ್ಧವಾಗಿ ದೇಶದ ಎಲ್ಲಾ ಮುಖ್ಯ ಆರ್ಥಿಕ ವಲಯಗಳೂ ಹಿಂಜರಿತಕ್ಕೆ ಸಿಲುಕಿವೆ. ಇಂಥಾ ಸಮಗ್ರ ಹಿಂಜರಿಕೆಯಿಂದ ಅದೇ ಸಮರ್ಥಕರು ಹೇಳುವಂತೆ ಮುಂದಿನ ಮೂರ್ನಾಲ್ಕು ತಿಂಗಳುಗಳಲ್ಲಿಯಂತೂ ಈಚೆ ಬರಲು ಸಾಧ್ಯವಿಲ್ಲ. ಈಗಾಗಲೇ ಎರಡನೇ ತ್ರೈಮಾಸಿಕದಲ್ಲೂ ವಾಹನ ತಯಾರಿಕಾ ಕ್ಷೇತ್ರ ಮತ್ತು ಸಣ್ಣ ಕೈಗಾರಿಕಾ ಕ್ಷೇತ್ರಗಳು ಮತ್ತಷ್ಟು ಹಿಂಜರಿಕೆಗೆ ಒಳಗಾಗಿರುವ ಸುದ್ದಿಗಳು ಬರುತ್ತಿವೆ. ಬೆಂಗಳೂರಿನ ಏಷ್ಯಾದಲ್ಲೇ ದೊಡ್ಡದಾಗಿದ್ದ ಪೀಣ್ಯ ಕೈಗಾರಿಕಾ ವಲಯವೊಂದರಲ್ಲೇ ಕನಿಷ್ಟ ಆರೇಳು ಲಕ್ಷ ಜನ ಮುಂದಿನ ಮೂರ್ನಾಲ್ಕು ತಿಂಗಳುಗಳಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ರೀತಿಯ ಉದ್ಯೋಗ ನಷ್ಟ ದೇಶದಾದ್ಯಂತ ಇನ್ನಷ್ಟು ಭೀಕರವಾಗುವ ಸಾಧ್ಯತೆಯಿದೆ.

ನಮಗೆಲ್ಲ ತಿಳಿದಿರುವಂತೆ ಮೊದಲು ಸಮಸ್ಯೆಯನ್ನು ಸರಿಯಾಗಿ ಗುರುತಿಸಿ ಒಪ್ಪಿಕೊಂಡಾಗ ಮಾತ್ರ ಸಮಸ್ಯೆಯ ಪರಿಹಾರದ ದಾರಿಗಳನ್ನು ಹುಡುಕಲು ಸಾಧ್ಯ. ಆದರೆ, ಸರ್ಕಾರ ಆರ್ಥಿಕ ಹಿಂಜರಿತ ಇದೆ ಎಂದು ಒಪ್ಪಿಕೊಳ್ಳಲೇ ತುಂಬಾ ವಿಳಂಬ ಮಾಡಿತು ಮತ್ತು ಈ ಹಿಂಜರಿತದ ಆಳವನ್ನು ಇನ್ನೂ ಸರಿಯಾಗಿ ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ. ಇದನ್ನು ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ಕೆಲ ತೆಳುವಾದ ಕ್ರಮಗಳು ಸ್ಪಷ್ಟಪಡಿಸುತ್ತಿವೆ (ಇದರ ಬಗ್ಗೆ ಮುಂದೆ ಬರೆಯಲಾಗುವುದು).

ಇದರ ಜೊತೆಗೆ, ಭಾರತದ ಆರ್ಥಿಕ ಹಿಂಜರಿತಕ್ಕೆ ಸರ್ಕಾರ ಜವಾಬ್ದಾರಿಯಲ್ಲ. ಇಡೀ ವಿಶ್ವವೇ ಆರ್ಥಿಕ ಹಿಂಜರಿತದಲ್ಲಿರುವುದರಿಂದ ಅದರ ಪರಿಣಾಮ ಭಾರತದ ಮೇಲೂ ಸಹಜವಾಗಿ ಉಂಟಾಗಿದೆ ಅಷ್ಟೆ ಎಂಬ ವಾದವನ್ನೂ ತೇಲಿ ಬಿಡಲಾಗಿದೆ.

ಇದಕ್ಕೆ ಉತ್ತರವಾಗಿ 2008ರಲ್ಲಿ ಅಮೆರಿಕವೂ ಸೇರಿದಂತೆ ಇಡೀ ವಿಶ್ವವೇ ಈಗಿಗಿಂತ ತೀವ್ರವಾದ ಆರ್ಥಿಕ ಹಿಂಜರಿತಕ್ಕೆ ಸಿಲುಕಿದ್ದಾಗ ಭಾರತ ಹೇಗೆ ಅಷ್ಟೊಂದು ಹಿಂಜರಿತಕ್ಕೆ ಸಿಗದೆ ಪಾರಾಯಿತು ಎಂಬುದನ್ನೂ ಗಮನಿಸಬೇಕಿದೆ.

ಹಾಗೆಯೇ, ಅಮೆರಿಕದ ಜತೆ ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದ ತೀವ್ರ ಕಲಹ ಮತ್ತು ಜಾಗತಿಕ ಹಿಂಜರಿಕೆಯ ಹೊರತಾಗಿಯೂ ಚೀನಾದ ಜಿಡಿಪಿ 2018ರ ಮೊದಲ ತ್ರೈಮಾಸಿಕದಲ್ಲಿ ಶೇ.6.8ರಷ್ಟು ವೃದ್ಧಿ ಕಂಡಿದ್ದು 2019ರಲ್ಲಿ ಶೇ.6.2ರಷ್ಟು ಪ್ರಗತಿ ದಾಖಲಿಸಿದ್ದು ಕೇವಲ 0.6ರಷ್ಟು ಮಾತ್ರ ಇಳಿಕೆ ಕಂಡಿದೆ. ಚೀನಾದ ಬೆಳವಣಿಗೆಯ ಈ ಅಂಶವು ನಮ್ಮ ದೇಶದ ಆರ್ಥಿಕ ಸಂಕಷ್ಟಕ್ಕೆ ಜಾಗತಿಕ ಹಿಂಜರಿತಕ್ಕಿಂತ (ಜಾಗತಿಕ ಹಿಂಜರಿತದ ಪ್ರಭಾವ ಒಂದು ಮಟ್ಟಿಗೆ ಇದ್ದೇ ಇರುತ್ತದೆ) ನಮ್ಮದೇ ಸರ್ಕಾರದ ತಪ್ಪು ಆರ್ಥಿಕ ನಿರ್ಧಾರಗಳಿಂದ ಎಂಬುದು ಸುಸ್ಪಷ್ಟವಾಗುತ್ತದೆ. ಇದೇ ಮಾತನ್ನು ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಹೇಳಿದ್ದಾರೆ.

ಸದ್ಯಕ್ಕೆ ಈ ಆರ್ಥಿಕ ಸಂಕಷ್ಟ ಮುಂದಿನ ವರ್ಷದ ಕೊನೆಯವರೆಗೂ ಮುಂದುವರೆಯುವ ಲಕ್ಷಣಗಳು ಕಾಣಿಸುತ್ತಿವೆ. ಸರ್ಕಾರ ಈಗಲಾದರೂ ದೂರದೃಷ್ಟಿ ಮತ್ತು ಅನುಭವವುಳ್ಳ ಆರ್ಥಿಕ ತಜ್ಞರ ಸಲಹೆ ಸೂಚನೆಗಳನ್ನು ಪಡೆದು ತಕ್ಕ ಕ್ರಮಗಳನ್ನು ಕೈಗೊಂಡು ಆರ್ಥಿಕತೆಯ ಹಿಂಜರಿಕೆಯಿಂದ ಹೊರಬರುವ ದಾರಿಗಳನ್ನು ಹುಡುಕಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮನೆ ಕಟ್ಟಲು, ವಾಹನ ಖರೀದಿಸಲು ಇದು ಸುಸಮಯ: ರೆಪೊ ದರ ಕಡಿತಗೊಳಿಸಿದ ಆರ್.ಬಿ.ಐ

ಡಿಸೆಂಬರ್ 05, ಶುಕ್ರವಾರದಂದು ನಡೆದ ಹಣಕಾಸು ನೀತಿ ಸಭೆಯಲ್ಲಿ (MPC) ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಇಂದಿನ ಕಡಿತದ ನಂತರ, ಕೇಂದ್ರ ಬ್ಯಾಂಕ್ ಈ...

ಉತ್ತರ ಪ್ರದೇಶ| ದಲಿತ ಯುವಕನ ಮೇಲೆ ಹಲ್ಲೆ; ಬಂದೂಕು ತೋರಿಸಿ ವಿವಸ್ತ್ರಗೊಳಿಸಿದ ಗುಂಪು

ಸಿಗರೇಟ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಗುಂಪೊಂದು ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ವರದಿಯಾಗಿದೆ. ಗುಂಪು ದಲಿತ ಯುವಕನನ್ನು ಚಪ್ಪಲಿಯಿಂದ ಹೊಡೆದು, ಮುಷ್ಟಿ, ಕಾಲು ಮತ್ತು...

ಶುಕ್ರವಾರ ದೆಹಲಿ ವಿಮಾನ ನಿಲ್ದಾಣದಿಂದ ಎಲ್ಲಾ ದೇಶೀಯ ವಿಮಾನಗಳನ್ನು ರದ್ದುಗೊಳಿಸಿದ ಇಂಡಿಗೋ

ಶುಕ್ರವಾರ ದೆಹಲಿ ವಿಮಾನ ನಿಲ್ದಾಣದಿಂದ ಎಲ್ಲಾ ದೇಶೀಯ ವಿಮಾನಗಳನ್ನು ಇಂಡಿಗೋ ರದ್ದುಗೊಳಿಸಿದೆ. ಶುಕ್ರವಾರ ಹಲವಾರು ವಿಮಾನ ನಿಲ್ದಾಣಗಳಲ್ಲಿ 400 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ತಿಳಿದುಬಂದಿದೆ.  ಶುಕ್ರವಾರ (ಡಿಸೆಂಬರ್ 5, 2025) ಮಧ್ಯರಾತ್ರಿಯವರೆಗೆ ಎಲ್ಲಾ...

ದ್ವೇಷ ಭಾಷಣ ಮಸೂದೆಗೆ ಕರ್ನಾಟಕ ಸಚಿವ ಸಂಪುಟ ಅನುಮೋದನೆ, ಕಠಿಣ ಶಿಕ್ಷೆ ಪ್ರಸ್ತಾವನೆ

ಕರ್ನಾಟಕ ಸಚಿವ ಸಂಪುಟವು ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಮಸೂದೆಯನ್ನು ಅಂಗೀಕರಿಸಿದೆ, ದ್ವೇಷ ಭಾಷಣಕ್ಕೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹50,000 ದಂಡವನ್ನು ವಿಧಿಸುವ ಕಠಿಣ ಶಿಕ್ಷೆಯ ಪ್ರಸ್ತಾವನೆಯನ್ನು ಈ...

BREAKING NEWS: ಚನ್ನರಾಯಪಟ್ಟಣ ರೈತ ಹೋರಾಟಕ್ಕೆ ‘ತಾಂತ್ರಿಕ’ ಅಂತ್ಯ: 1777 ಎಕರೆ ಡಿನೋಟಿಫೈಗೆ ಒಪ್ಪಿದ ಸಚಿವ ಸಂಪುಟ

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಹೋರಾಟಕ್ಕೆ ಅಂತಿಮವಾಗಿ ತಾಂತ್ರಿಕ ಜಯವೂ ಸಿಕ್ಕಿದೆ. ಡಿಸೆಂಬರ್ 4, ಗುರುವಾರ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ...

ಲೈಂಗಿಕ ಕಿರುಕುಳ ಆರೋಪ: ಪಾಲಕ್ಕಾಡ್ ಶಾಸಕನ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರದ ಬೆನ್ನಲ್ಲೇ, ಪಕ್ಷದಿಂದ ಉಚ್ಛಾಟಿಸಿದ ಕಾಂಗ್ರೆಸ್ 

ತಿರುವನಂತಪುರಂ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ ನಂತರ ಕೇರಳ ಕಾಂಗ್ರೆಸ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.  ರಾಹುಲ್ ಮಮ್‌ಕೂಟತಿಲ್ ತಮ್ಮ ಶಾಸಕ...

ದಲಿತರು ಒಗ್ಗಟ್ಟಾಗದೆ ಮುನುವಾದಿಗಳ ವಿರುದ್ಧ ಶಕ್ತಿ ಪ್ರದರ್ಶನ ಸಾಧ್ಯವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ದಲಿತರು ಒಗ್ಗಟ್ಟಾಗದೆ ಇದ್ದರೆ ಮುನುವಾದಿಗಳ ವಿರುದ್ಧ ಶಕ್ತಿ ಪ್ರದರ್ಶನ ಸಾಧ್ಯವಿಲ್ಲ; ನಾವು ನೂರಿನ್ನೂರು ಜನ ಪ್ರತ್ಯೇಕ ಹೋರಾಟ ಮಾಡಿದರೆ ಪ್ರಯೋಜನವಿಲ್ಲ, ಒಂದು ಕರೆ ಕೊಟ್ಟರೆ ಲಕ್ಷಾಂತರ ಜನರು ಸೇರುವಂತಾಗಬೇಕು ಎಂದು ಲೋಕೋಪಯೋಗಿ ಸಚಿವ...

ದಲಿತ ಚಳವಳಿ ಎಲ್ಲ ಶೋಷಿತರನ್ನೂ ಒಳಗೊಂಡಿದೆ; ನಮ್ಮಲ್ಲಿ ಹೊಲೆ-ಮಾದಿಗ ಎಂಬ ಬೇಧವಿಲ್ಲ: ದಸಂಸ ಸಂಚಾಲಕ ಹೆಣ್ಣೂರು ಶ್ರೀನಿವಾಸ್

"ದಲಿತ ಚಳವಳಿ ಯಾವುದೇ ಒಂದು ಜಾತಿಯ ಪರವಾಗಿಲ್ಲ.. ಪೌರ ಕಾರ್ಮಿಕನ ಮಗನನ್ನ ರಾಜ್ಯ ಸಂಚಾಲಕನನ್ನಾಗಿ ಮಾಡಿದೆ. ನಮ್ಮಲ್ಲಿ ಹೊಲೆಯ-ಮಾದಿಗ ಎಂಬ ಬೇಧವಿಲ್ಲ. ಈ ಚಳವಳಿ ಎಲ್ಲ ಶೋಷಿತ ಸಮುದಾಯಗಳನ್ನೂ ಒಳಗೊಂಡಿದೆ" ಎಂದು ಕರ್ನಾಟಕ...

ಚಳಿಗಾಲದ ಅಧಿವೇಶನ: ಸಂಸತ್ತಿನ ಹೊರಗೆ ‘ವಾಯು ಮಾಲಿನ್ಯದ ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳಿಂದ ಪ್ರತಿಭಟನೆ

2025 ರ ಸಂಸತ್ತಿನ ಚಳಿಗಾಲದ ಅಧಿವೇಶನವು ನಾಲ್ಕನೇ ದಿನಕ್ಕೆ ಕಾಲಿಡುತ್ತಿದ್ದಂತೆ, ದೆಹಲಿ-ಎನ್‌ಸಿಆರ್ ಮತ್ತು ಉತ್ತರ ಭಾರತದಾದ್ಯಂತ ಹದಗೆಡುತ್ತಿರುವ ವಾಯು ಮಾಲಿನ್ಯದ ಕುರಿತು ತುರ್ತು ಚರ್ಚೆಗೆ ಒತ್ತಾಯಿಸಿ ಕಾಂಗ್ರೆಸ್ ಸಂಸದರು ಗುರುವಾರ ಲೋಕಸಭೆಯಲ್ಲಿ ಮುಂದೂಡಿಕೆ...

ಭೀಮಾ ಕೋರೆಗಾಂವ್ ಪ್ರಕರಣ: ದೆಹಲಿ ವಿವಿ ಪ್ರಾಧ್ಯಾಪಕ ಹನಿ ಬಾಬುಗೆ ಜಾಮೀನು

ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020 ರಲ್ಲಿ ಬಂಧಿಸಲ್ಪಟ್ಟು ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪ ಎದುರಿಸುತ್ತಿರುವ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಖ್ಯಾತ ಶಿಕ್ಷಣ ತಜ್ಞ ಡಾ....