ಅಮೇಥಿಯಲ್ಲಿ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪತ್ರಕರ್ತರೊಡನೆ ಮಾತನಾಡುತ್ತಿರಬೇಕಾದರೆ, ಅವರ ತಲೆ, ಕಿವಿಯ ಮೇಲಿನ ಭಾಗಗಳಲ್ಲಿ ಲೇಸರ್ ಲೈಟ್ನಿಂದ ಹೊರಡುವ ರೀತಿಯ ಬೆಳಕು ಬಿದ್ದಿದೆ. ಅತೀ ಸಣ್ಣ ಅವಧಿಯಲ್ಲೇ 7 ಬಾರಿ ಈ ರೀತಿಯ ಬೆಳಕು ಓಡಾಡಿದೆ. ಆ ಸಂದರ್ಭದಲ್ಲಿ ಅವರ ಹೇಳಿಕೆಯನ್ನು ಪಡೆಯುತ್ತಿದ್ದ ಕ್ಯಾಮೆರಾಗಳಲ್ಲಿ ಇದು ಸ್ಪಷ್ಟವಾಗಿ ಕಂಡಿದೆ. ಇದು ಸ್ನೈಪರ್ ಗನ್ನಿಂದ ಶೂಟ್ ಮಾಡಲು ಪ್ರಯತ್ನಿಸುತ್ತಿದ್ದಾಗ ಆ ರೀತಿಯ ಬೆಳಕು ಬರುತ್ತದೆ ಎಂದು ರಕ್ಷಣಾ ಕೆಲಸದಲ್ಲಿರುವ ಕೆಲವರೂ ಹೇಳಿದ್ದಾರೆಂದು ಉಲ್ಲೇಖಿಸಿ, ಕಾಂಗ್ರೆಸ್ ನಾಯಕರಾದ ಅಹ್ಮದ್ ಪಟೇಲ್, ಸುರ್ಜೇವಾಲಾ ಮತ್ತು ಜೈರಾಂ ರಮೇಶ್ ಅವರು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. ಇದು ರಾಹುಲ್ ಗಾಂಧಿಯವರನ್ನು ಹತ್ಯೆಗೈಯ್ಯುವ ಸಂಚು ಆಗಿರಬಹುದು. ಹಾಗಾಗಿ ಅದರ ಕುರಿತು ಉನ್ನತ ಮಟ್ಟದ ತನಿಖೆ ನಡೆದು ಅಂತಹ ಅಪಾಯ ಇಲ್ಲದಂತೆ ಮಾಡಬೇಕು ಎಂದು ಈ ಪತ್ರ ಕೇಳಿದೆ.
ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಇಲಾಖೆಯು, ಎಸ್ಪಿಜಿ ಮುಖ್ಯಸ್ಥರ ಜೊತೆ ಈ ಕುರಿತು ಚರ್ಚೆ ನಡೆದಿದೆಯೆಂತಲೂ, ಅದು ಯಾರದ್ದೋ ಮೊಬೈಲ್ ಫೋನ್ನಿಂದ ಹೊರಟಿರುವ ಬೆಳಕು ಅಷ್ಟೇ ಆಗಿದೆಯೆಂಬ ಅಭಿಪ್ರಾಯವಿದೆ ಎಂದು ಹೇಳಿದೆಯೆಂದು ಎನ್ಡಿಟಿವಿ ವರದಿ ಮಾಡಿದೆ. ಆದರೆ, ಉತ್ತರ ಪ್ರದೇಶ ಸರ್ಕಾರವು ಭದ್ರತೆಯಲ್ಲಿ ತೋರಿಸುತ್ತಿರುವ ಲೋಪದ ಕಾರಣಕ್ಕೇ ಹೀಗೆ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕಕ್ಕೆ ಪ್ರಚಾರಕ್ಕೆ ಆಗಮಿಸಿದ್ದ ರಾಹುಲ್ಗಾಂಧಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗಲೂ ಅವಘಡ ಸಂಭವಿಸಿತ್ತು. ವಿಮಾನವು ಸರಿಯಾಗಿ ಲ್ಯಾಂಡ್ ಆಗದೇ, ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೂ ಸಹಾ ಹತ್ಯೆಯ ಪ್ರಯತ್ನ ಇರಬಹುದೇ ಎಂಬ ಸಂದೇಹವನ್ನು ಹಲವರು ವ್ಯಕ್ತಪಡಿಸಿದ್ದರು. ನಂತರ ನಾಗರಿಕ ವಿಮಾನಯಾನ ನಿಯಂತ್ರಣ ಪ್ರಾಧಿಕಾರ ಡಿಜಿಸಿಎ, ಅದನ್ನು ಅಲ್ಲಗಳೆದಿತ್ತು. ಆಟೋ ಪೈಲಟ್ ಮೋಡ್ಗೆ ವಿಮಾನವನ್ನು ಹಾಕಲಾಗಿತ್ತೆಂದೂ, ನಂತರ ಚಾಲಕ ಅದನ್ನು ಮ್ಯಾನ್ಯುಯೆಲ್ ಮೋಡ್ಗೆ ಹಾಕಿ ನಿಭಾಯಿಸಿದರೆಂದೂ, ಇದು ಮಾಮೂಲಿಯೆಂತಲೂ ಅದು ಹೇಳಿತ್ತು.
ರಾಹುಲ್ಗಾಂಧಿಯವರ ತಂದೆ ರಾಜೀವ್ಗಾಂಧಿ ಮತ್ತು ಅವರ ಅಜ್ಜಿ ಇಂದಿರಾಗಾಂಧಿಯವರೂ ಅವರ ಮೇಲೆ ನಡೆದ ಹತ್ಯಾಪ್ರಯತ್ನಗಳಿಂದಲೇ ಜೀವ ಕಳೆದುಕೊಂಡಿದ್ದರು ಎಂಬುದನ್ನಿಲ್ಲಿ ಸ್ಮರಿಸಬಹುದು.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆತಂಕ ವ್ಯಕ್ತವಾಗಿದ್ದು, ಅವರು ರಾಜಕಾರಣದಿಂದಲೇ ಹೊರಗುಳಿದರೂ ಪರವಾಗಿಲ್ಲ, ವಿದೇಶಕ್ಕೆ ಹೋದರೂ ಪರವಾಗಿಲ್ಲ, ಅವರ ಸುರಕ್ಷತೆ ಮುಖ್ಯ. ಆ ಕುಟುಂಬದಲ್ಲಿ ಮತ್ತೊಂದು ದುರಂತ ನಡೆಯದಿರಲಿ ಎಂಬ ಚರ್ಚೆಯನ್ನು ಹಲವರು ಮಾಡಿದ್ದಾರೆ.