ಸಾಕೇತ್ ಗೋಖಲೆ ಎಂಬ ಮಾಜಿ ಪತ್ರಕರ್ತ ನಿನ್ನೆಯೇ ತನ್ನ ಫೇಸ್ಬುಕ್ನಲ್ಲಿ ಇಂದು ಮೋದಿಯವರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಲಿದ್ದೇನೆಂದು ಹೇಳಿದ್ದರು. ಅದರಲ್ಲಿ ಏನಿರುತ್ತದೆಂಬುದರ ಬಗ್ಗೆ ಕುತೂಹಲ ಮೂಡಿತ್ತು. ಇಂದು ಅದನ್ನು ದಾಖಲಿಸಿ ವಿವರಗಳನ್ನು ಹಂಚಿಕೊಂಡಿದ್ದಾರೆ. ವಿವರ ಇಂತಿದೆ.
ನಾನು ಕೊನೆಗೂ ಸುಪ್ರೀಮ್ ಕೋರ್ಟಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಪಿಐಎಲ್ ದಾಖಲಿಸುವಲ್ಲಿ ಯಶಸ್ವಿಯಾದೆ. ಇದು ಸಾಧ್ಯವಾಗಿದ್ದು ಎರಡು ತಿಂಗಳ ಕಠಿಣ ತನಿಖೆ ಮತ್ತು ಆಳವಾಗಿ ಅಗೆಯುವಿಕೆಯ ನಂತರ.
ಇದು ಪ್ರಧಾನಿ ಮೋದಿಯವರ ಅಫಿಡವಿಟ್ಗೆ ಸಂಬಂಧಿಸಿದ್ದು. ಅವರ ಅಫಿಡವಿಟ್ ಅತ್ಯಂತ ಗಂಭೀರವಾದ ಲೋಪಗಳಿಂದ ಕೂಡಿದೆ. 2012ರ ನಂತರ ಅವರ ಪ್ರಕಟಣೆಯಿಂದ ಕೋಟ್ಯಾಂತರ ರೂ. ಬೆಲೆಯ ಭೂಮಿಯು ಕಾಣೆಯಾಗಿದೆ.
ಮೇಲ್ನೋಟಕ್ಕೆ ಕಾಣುವುದೇನೆಂದರೆ, ಇದೊಂದು ದೊಡ್ಡ ಭೂಹಗರಣ ಆಗಿರುವ ಸಾಧ್ಯತೆ ಇದೆ, ಅದೂ ಚೌಕಿದಾರನೇ ಎಲ್ಲವನ್ನೂ ನೋಡಿಕೊಳ್ಳುತ್ತಿರುವಾಗ.
ಇದರ ಕೆಲವು ಸಂಕ್ಷಿಪ್ತ ಸತ್ಯಾಸತ್ಯತೆಗಳು ಇಂತಿವೆ.
2002ರಲ್ಲಿ ಗುಜರಾತಿನ ಆಗಿನ ಮುಖ್ಯಮಂತ್ರಿಯಾದ ನರೇಂದ್ರ ಮೋದಿ ಅವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ, 1.3 ಲಕ್ಷ ರೂಪಾಯಿಗೆ ಒಂದು ಪ್ಲಾಟ್ ನೀಡಲಾಗಿತ್ತು; ಪ್ಲಾಟ್ ನಂಬರ್ 411, ಸೆಕ್ಟರ್ 1, ಗಾಂಧಿನಗರ. ಆ ಪ್ಲಾಟ್ನ ಅಳತೆ 330 ಚದರ ಮೀಟರ್ಗಳು.
2007ರಲ್ಲಿ ತಮ್ಮ ಅಫಿಡವಿಟ್ನಲ್ಲಿ ನರೇಂದ್ರ ಮೋದಿಯವರು ಇದನ್ನು ಪ್ರಕಟಿಸಿದರು.
ಆದರೆ 2012ರ ನಂತರ ಏನಾಯಿತೋ, ಆ ಪ್ಲಾಟ್ ಅನ್ನು ತಮ್ಮ ಅಫಿಡವಿಟ್ನಲ್ಲಿ ಹೆಸರಿಸುವುದನ್ನು ಕೈಬಿಟ್ಟರು. ಅದರ ಬದಲಿಗೆ, 401/ಏ, ಸೆಕ್ಟರ್ 1, ಗಾಂಧಿನಗರದ ಪ್ಲಾಟ್ನ ಕಾಲು ಭಾಗದಷ್ಟು ತಾವು ಹೊಂದಿರುವುದಾಗಿ ಘೋಷಿಸಿದರು.
ಪ್ರಾಸಂಗಿಕವಾಗಿ ಹೇಳಬೇಕಾದ್ದೆಂದರೆ, ಹಣಕಾಸು ಸಚಿವ ಅರುಣ್ ಜೇಟ್ಲಿ ಕೂಡ ಅದೇ ಪ್ಲಾಟ್ 401/ಏ ನಲ್ಲಿ ಕಾಲು ಭಾಗವನ್ನು ಹೊಂದಿದ್ದಾರೆ.
ಕುತೂಹಲಕಾರಿಯಾದ ಸಂಗತಿಯೆಂದರೆ, ಭೂದಾಖಲೆಗಳಲ್ಲಿ 401/ಏ ಪ್ಲಾಟ್ ಅಸ್ತಿತ್ವದಲ್ಲಿಯೇ ಇಲ್ಲ. ದಾಖಲೆಗಳ ಪ್ರಕಾರ ಪ್ಲಾಟ್ ನಂಬರ್ 411 ಸಂಪೂರ್ಣವಾಗಿ ಪ್ರಧಾನಿ ಮೋದಿಯವರ ಆಸ್ತಿ ಎಂದು ಹೇಳುತ್ತವೆ.
ಇನ್ನೂ ಅತ್ಯಂತ ಕುತೂಹಲಕಾರಿಯಾದ ಸಂಗತಿಯೆಂದರೆ, ಆ ಸ್ಥಳಕ್ಕೆ ಭೇಟಿ ನೀಡಿದಾಗ ಕಾಣುವುದೇನೆಂದರೆ, ಆ ಸ್ಥಳದ ಅಕ್ಕಪಕ್ಕದ 8 ಪ್ಲಾಟ್ಗಳನ್ನು ಮತ್ತು ಒಂದು ಸರಕಾರಿ ಮೈದಾನವನ್ನು ಸೇರಿಸಿ, ಒಂದು ಬೌಂಡರಿ ಗೋಡೆಯನ್ನು ನಿರ್ಮಿಸಿ, ಪ್ಲಾಟ್ 411 ಎಂಬ ಒಂದೇ ಕಂಪೌಂಡ್ ಕಾಣಸಿಗುತ್ತದೆ.
ಮಾನ್ಯ ಸುಪ್ರೀಮ್ ಕೋರ್ಟಿಗೆ ನನ್ನ ವಿನಂತಿಯೇನೆಂದರೆ, ಸಂಶಯಕ್ಕೀಡು ಮಾಡುತ್ತಿರುವ ಒಂದು ಸಲ ಕಾಣಿಸಿಕೊಳ್ಳುವ ಇನ್ನೊಂದು ಸಲ ಕಣ್ಮರೆಯಾಗುವ ಈ ಆಸ್ತಿಯ ಬಗ್ಗೆ ಎಸ್ಐಟಿ ತನಿಖೆ ಆಗಬೇಕು ಮತ್ತು ಇದೊಂದು ಸಂಘಟಿತ ಭೂಹಗರಣವಾಗಿದೆಯೋ ಇಲ್ಲವೋ ಎನ್ನುವುದನ್ನು ತನಿಖೆ ಮಾಡಬೇಕು.
ಈ ರೀತಿ ವಶಪಡಿಸಿಕೊಳ್ಳಲಾದ ಪ್ಲಾಟ್ಗಳ ಒಟ್ಟಾರೆ ಮೊತ್ತ 15 ಕೋಟಿಗಳಿಗಿಂತಲೂ ಹೆಚ್ಚು.
ಲೋಕ್ ಪ್ರಹಾರಿ ವರ್ಸಸ್ ಯುನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸುಪ್ರೀಮ್ ಕೋರ್ಟು ಆರ್ಥಿಕ ಆಸ್ತಿಯನ್ನು ಬಚ್ಚಿಡುವುದು ಒಬ್ಬ ಅಭ್ಯರ್ಥಿಯನ್ನು ಅನರ್ಹಗೊಳಿಸಲು ಖಂಡಿತವಾಗಿಯೂ ಪರಿಗಣಿಸಬಹುದು ಎಂದು ಹೇಳಿದೆ.
ಪ್ರಧಾನ ಮಂತ್ರಿ ಮೋದಿ 411 ಪ್ಲಾಟ್ನ ಒಡೆತನವನ್ನು 7 ವರ್ಷಗಳ ಕಾಲ ಬಚ್ಚಿಟ್ಟಿದ್ದೇಕೆ? 401/ಏ ಪ್ಲಾಟ್ನ ಭೂದಾಖಲೆಗಳು ಎಲ್ಲಿವೆ? ಹಾಗೂ ಮೋದಿ ಮತ್ತು ಜೇಟ್ಲಿ ಅವರೊಂದಿಗೆ ಇನ್ಯಾರು ಆ ಪ್ಲಾಟ್ನ ಒಡೆತನದಲ್ಲಿದೆ?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ಆಸ್ತಿಯಲ್ಲಿ ಮತ್ತು ಗ್ರೌಂಡಿನಲ್ಲಿ ಪರಿಸ್ಥಿತಿಯ ನಡುವೆ ಇಂತಹ ವ್ಯತ್ಯಾಸ ಏಕೆ ಕಾಣುತ್ತಿದೆ?
ಇದಿಷ್ಟು ಕೇಸಿನ ಸಾರಾಂಶ. ಸುಪ್ರೀಂಕೋರ್ಟು ಈ ಕುರಿತು ಏನು ಹೇಳಲಿದೆ? ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸುವಾಗ ಮೋದಿಯವರು ಯಾವ ಆಸ್ತಿಯ ಕುರಿತು ಅಫಿಡವಿಟ್ ಸಲ್ಲಿಸುತ್ತಾರೆ? ಕಾದು ನೋಡಬೇಕು.