Homeಚಳವಳಿಮದ್ಯದ ವಿರುದ್ಧ ಕದಲಿದ ಮಹಿಳೆಯರ ಪಾದಗಳು

ಮದ್ಯದ ವಿರುದ್ಧ ಕದಲಿದ ಮಹಿಳೆಯರ ಪಾದಗಳು

- Advertisement -
- Advertisement -

ಕೆ.ಪಿ.ಸುರೇಶ |

ಮದ್ಯ ನಿಷೇಧಕ್ಕೆ ಆಗ್ರಹಿಸಿ ಸಾವಿರಾರು ಮಹಿಳೆಯರು ಚಿತ್ರದುರ್ಗದಿಂದ ವಿಧಾನಸೌಧಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. ಇದೊಂದು ಚಾರಿತ್ರಿಕ ಬೆಳವಣಿಗೆ. ಆದರೆ ಈ ಬಗ್ಗೆ ನಮ್ಮ ರಾಜಕೀಯ ಪಕ್ಷಗಳಷ್ಟೇ ಅಲ್ಲ ಒಟ್ಟಾರೆ ನಾಗರಿಕ ಸಮಾಜದ ಪ್ರತಿಕ್ರಿಯೆ ನಿರಾಶಾದಾಯಕವಾಗಿದೆ.
ರಾಜಕೀಯ ಪಕ್ಷಗಳ ನಿಲುವು ನಿರೀಕ್ಷಿತ. ನಮ್ಮ ಸರಕಾರಗಳು ಈ ದುಡ್ಡಿನಿಂದಲೇ ನಡೆಯುವುದು ಎಂಬ ನಂಬಿಕೆ ಇವಕ್ಕಿದೆ. ಸರ್ಕಾರವೂ ಇದೊಂದು ಅನಿವಾರ್ಯ ಚಟವೆಂಬಂತೆ ಬಿಂಬಿಸಿದೆ. ಆದರೆ ಆರ್ಥಿಕ ವಿವರಗಳನ್ನು ನೋಡಿದರೆ ಸರ್ಕಾರಕ್ಕಿರುವ ಆದಾಯ ಸುಮಾರು 18 ಸಾವಿರ ಕೋಟಿ ಎಂದು ಅಂಕಿಅಂಶಗಳು ಹೇಳುತ್ತಿವೆ. ಈ ಮೊತ್ತ ಅಷ್ಟೇನೂ ದೊಡ್ಡದಲ್ಲ. ಎರಡು ದಶಕಗಳ ಮೊದಲು ಬೇರೆ ಸೇವಾ ತೆರಿಗೆಗಳೇ ಇಲ್ಲದ ಕಾಲದಲ್ಲಿ ಮದ್ಯದ ತೆರಿಗೆಯೇ ಪ್ರಮುಖ ಆದಾಯ ಮೂಲವಾಗಿತ್ತು ಎಂಬುದು ನಿಜ. ಆದರೆ ಪ್ರಸ್ತುತ ಇದು ಅಷ್ಟೇನೂ ನಿಜವಲ್ಲ. ಇಂದು ಇzರ ಪ್ರಾಮುಖ್ಯತೆ ಬೇರೆ ಕಾರಣಕ್ಕಾಗಿ ಇದೆ. ಈ ಮದ್ಯದ ಅಂಗಡಿ, ಬಾರುಗಳು ರಾಜಕೀಯ ನೇತಾರರ ನೆಚ್ಚಿನ ಕಾಳಧನದ ಮೂಲ. ಅಷ್ಟೇ ಅಲ್ಲ ಚುನಾವಣಾ ಕಾಲದಲ್ಲಿ ನೆಚ್ಚಿಕೊಳ್ಳಬಹುದಾದ ಸರಬರಾಜು ಮೂಲ.
ಮುಖ್ಯತಃ ಈ ಪಾದಯಾತ್ರೆ ನಮ್ಮ ಒಟ್ಟಾರೆ ಸಮಾಜದ ಪುರುಷಪ್ರಧಾನ ಉಡಾಫೆಯನ್ನು ಅನಾವರಣಗೊಳಿಸಲಿದೆ. ಶೇ. ಐವತ್ತರಷ್ಟು ಇರುವ ಮಹಿಳೆಯರು, ಮತ್ತದರ ಅರ್ಧದಷ್ಟಿರುವ ಮಕ್ಕಳನ್ನು ಬಿಟ್ಟರೆ ಉಳಿಯುವ ಶೇ.25 ಗಂಡಸರಲ್ಲಿ ಕುಡುಕರೆಷ್ಟು? ಪೂರಾ ಅಂದರೂ ಅವರೇನು ಬಹುಮತವಲ್ಲ. ಇದಿಷ್ಟೇ ಸಾಕು ಸರ್ಕಾರದ ಅಷಾಡಭೂತಿತನವನ್ನು ಬೆತ್ತಲೆಗೊಳಿಸಲು.
ಕುಡಿತದ ಸಾಮಜಿಕ ಆರ್ಥಿಕ ಮತ್ತು ಆರೊಗ್ಯದ ಮೇಲಿನ ದುಷ್ಪರಿಣಾಮಗಳ ಬಗ್ಗೆ ಹೊಸತೇನೂ ಹೇಳಬೇಕಿಲ್ಲ. ಒಂದು ದಿನ ಮುಸ್ಸಂಜೆ ಯಾವುದೇ ಊರಲ್ಲಿ ನಿಂತರೂ ಇದು ಕಾಣಿಸುತ್ತೆ.
ಆದರೂ ದೇಶದ ಪ್ರತಿಷ್ಠಿತ ನರ ಆರೋಗ್ಯ ಸಂಸ್ಥೆ ನಿಮ್ಹಾನ್ಸ್ ಇತ್ತೀಚೆಗೆ ಪ್ರಕಟಿಸಿರುವ ಅಧ್ಯಯನ ವರದಿ ಈ ಕೇಡಿನ ಪರಿಣಾಮಗಳ ಬಗ್ಗೆ ಛಳಿ ಹುಟ್ಟಿಸುವಂಥಾ ವಿವರಗಳನ್ನು ಮುಂದಿಟ್ಟಿದೆ.
ಭಾರತದಲ್ಲಿ ವರುಷಕ್ಕೆ 230 ಕೋಟಿ ಲೀಟರ್ ಮದ್ಯ ಉತ್ಪಾದನೆಯಾಗುತ್ತದೆ. ಅಂದರೆ ಸುಮಾರು ತಲಾ 2 ಲೀಟರ್!! ಹತ್ತು ವರುಷಗಳ ಹಿಂದೆಯೇ ಇದರಿಂದ ಬರುತ್ತಿದ್ದ ರಾಜಸ್ವ 40 ಸಾವಿರ ಕೋಟಿ. ಆದಾಯ ಎಲ್ಲಿಂದ ಬರುತ್ತಿದೆ ಎಂಬ ನೈತಿಕ ಪ್ರಶ್ನೆಯನ್ನು ಸರ್ಕಾರ ಎಂದೂ ತನಗೆ ತಾನೇ ಹಾಕಿಕೊಂಡಿಲ್ಲ.
ನಿಮ್ಹಾನ್ಸ್ ಅಧ್ಯಯನದ ಪ್ರಕಾರ ಶೇ. 30-35 ಗಂಡಸರು ಮದ್ಯಪಾನ ಮಾಡುತ್ತಾರೆ. ಶೇ.5ರಷ್ಟು ಮಹಿಳೆಯರೂ ಮದ್ಯಪಾನಿಗಳು.
ಆತಂಕ ಹುಟ್ಟಿಸುವ ಸಂಗತಿ ಎಂದರೆ ‘80ರ ದಶಕದಲ್ಲಿ ಮದ್ಯಪಾನ ಆರಂಭಿಸುವ ವಯಸ್ಸು 28 ಆಗಿತ್ತು. ಆದರೆ ಇದು 2007ರ ವೇಳೆಗೆ ಇದು 17ಕ್ಕಿಳಿದಿತ್ತು. ಇವರಲ್ಲಿ ಅರ್ಧಕ್ಕರ್ಧ ಮಂದಿ ಅಪಾಯಕಾರಿ ಮಟ್ಟದ ಕುಡಿತದ ಚಟ ಅಂಟಿಸಿಕೊಳ್ಳುತ್ತಾರೆ.
ಅಧ್ಯಯಯನಗಳ ಪ್ರಕಾರ ಕುಡಿತಕ್ಕಂಟಿದವರಲ್ಲಿ ಶೇ.20 ಮಂದಿ ಬೇಗನೆ ಸಾವನ್ನಪ್ಪುತ್ತಾರೆ. ಅಪಘಾತ, ಗಾಯಗಳೂ ಕುಡುಕರಿಗೇ ಜಾಸ್ತಿ. ಶೇ. 25ರಷ್ಟು ರಸ್ತೆ ಅಪಘಾತ ಮತ್ತು ಸಾವುಗಳು ಮದ್ಯ ಸಂಬಂಧೀ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಕೌಟುಂಬಿಕ ಹಿಂಸೆಯ ಅರ್ಧಾಂಶ ಈ ಕುಡಿತದ ಕಾರಣಕ್ಕೆ ನಡೆಯುತ್ತಿರುತ್ತೆ. ಶೇ.25ರಷ್ಟು ಪಾಶ್ರ್ವವಾಯು ಪೀಡಿತರು ಮದ್ಯವ್ಯಸನಿಗಳಾಗಿದ್ದಾರೆ. ಲಿವರ್ ಕಾಯಿಲೆಯಂತೂ ಬಹುತೇಕ ಕುಡಿತದ ಪರಿಣಾಮದಿಂದಲೇ ಎಂಬುದೂ ಸಿದ್ಧವಾಗಿದೆ.
ಇದರ ಸಾಮಾಜಿಕ ಪರಿಣಾಮಗಳಲ್ಲಿ ಕೆಲಸಕ್ಕೆ ಗೈರು ಹಾಜರಾಗುವುದು, ಕುಂಠಿತ ಆರೋಗ್ಯ, ಮಕ್ಕಳಿಗೆ ಶಿಕ್ಷಣದಲ್ಲಾಗುವ ತೊಡಕು ಹೀಗೆ ಹತ್ತು ಹಲವು ಬಗೆಯ ವಿವರಗಳಿಗೆ ಅಧ್ಯಯನಗಳೇ ಬೇಕಿಲ್ಲ ತಾನೇ?
ಆರ್ಥಿಕವಾಗಿ, ಇದರ ಆದಾಯ ನೆಚ್ಚಿಕೊಂಡಿರುವ ಸರ್ಕಾರ ಎಂಥಾ ಮೂರ್ಖವಾಗಿದೆಯೆಂದರೆ ಒಂದು ಅಧ್ಯಯನದ ಪ್ರಕಾರ ಹೆಂಡದ ಆದಾಯ 20 ಸಾವಿರ ಕೋಟಿ ಇದ್ದರೆ, ಹೆಂಡದ ಪರಿಣಾಮದಿಂದ ಸರ್ಕಾರಕ್ಕೆ ಆರೋಗ್ಯ ವ್ಯವಸ್ಥೆ ಮತ್ತಿತರ ಕಾರಣಕ್ಕಾಗುವ ವೆಚ್ಚ 24 ಸಾವಿರ ಕೋಟಿ. (ಇದು 2004ರ ಲೆಕ್ಕಾಚಾರ!!).
ಇನ್ನಷ್ಟು ಆತಂಕಕಾರೀ ವಿವರಗಳು ನಿಮ್ಹಾನ್ಸ್ ಅಧ್ಯಯನದಲ್ಲಿದೆ. ಮುಖ್ಯವಾಗಿ ಕುಡಿತದಿಂದಾಗುವ ಆರೋಗ್ಯ, ಸಾಮಾಜಿಕ, ಕೌಟುಂಬಿಕ ಅನಾಹುತಗಳಿಗೆ ಸರ್ಕಾರ ತೆರುವ ಬೆಲೆ ಅದರಿಂದ ಹುಟ್ಟುವ ಆದಾಯಕ್ಕಿಂತ ಜಾಸ್ತಿ ಎಂಬುದು ಗಮನಾರ್ಹ. ಇಂಥಾ ವೈದ್ಯಕೀಯ ವೃತ್ತಿಪರ ಸಂಸ್ಥೆಗಳ ಸೂಚಿಗಳನ್ನು ಸರ್ಕಾರ ಗೌರವಿಸಿದ್ದಿಲ್ಲ. ಆದರೆ ತುಲನಾತ್ಮಕವಾಗಿ ಗಮನಿಸಿ:
ಒಂದು ಕೀಟನಾಶಕದ ಬಗ್ಗೆ ಅಥವಾ ಮ್ಯಾಗೀ ನೂಡಲ್ ಬಗ್ಗೆ ಸರ್ಕಾರದ ಸಂಸ್ಥೆಯೊಂದು ವರದಿ ಕೊಟ್ಟರೆ ಮಾಧ್ಯಮಗಳು ಕೋಲಾಹಲವೆಬ್ಬಿಸುತ್ತವೆ. ಒತ್ತಡ ಗುಂಪುಗಳು ಹೌಹಾರಿ ಸರ್ಕಾರದ ಮೇಲೆ ಒತ್ತಡ ತರುತ್ತವೆ. ನಿಷೇಧ ಸಹಿತ ಹತ್ತು ಹಲವು ಕ್ರಮಗಳನ್ನು ಸರ್ಕಾರ ಮಿಂಚಿನ ವೇಗದಲ್ಲಿ ಜರುಗಿಸುತ್ತದೆ.
ಹೆಂಡದ ಬಗ್ಗೆ ಮಾತ್ರಾ ಅತ್ತ ಪರಿಣಿತರ ಅಧ್ಯಯನ, ಇತ್ತ ಕಣ್ಣಿಗೇ ಗಿಡಿಯುವ ನಿತ್ಯ ವರದಿಗಳಿದ್ದರೂ ಸರ್ಕಾರ ಗಮನಿಸುವುದಿಲ್ಲ. ಏನಿದರ ಅರ್ಥ?
ಸೊಷಿಯಲ್ ಡ್ರಿಂಕಿಂಗ್ ಅಂತ ಒಂದಿದೆ. ಅಂದರೆ ಆಗೀಗ ಮೋಜಿಗಾಗಿ ಕುಡಿಯುವುದು. ಇದನ್ನು ತಡೆಯಲಾಗದು. ಮನುಷ್ಯನ ಆದಿಮ ವ್ಯಸನ ಇದು ಎಂದೆಲ್ಲಾ ವಾದ ಇದೆ. ಚಾರಿತ್ರಿಕವಾಗಿ ಗಮನಿಸಬೇಕಾದ್ದು ಭಾರತದಲ್ಲಿ ಆಧುನಿಕ ಪಾಶ್ಚಿಮಾತ್ಯ ರಸಾಯನ ಶಾಸ್ತ್ರದ ಉತ್ಪನ್ನಗಳು ಪ್ರವೇಶಿಸುವ ಮೊದಲು ನಮ್ಮಲ್ಲಿದ್ದ ಮದ್ಯದ ಅಲ್ಕೋಹಾಲ್ ಪ್ರಮಾಣ ಅಷ್ಟೇನೂ ಅಪಾಯಕಾರಿಯಾಗಿರಲಿಲ್ಲ. ಇಂದಿಗೂ ಆದಿವಾಸಿ ಪಂಗಡಗಳು ಬಿಡಿ, ನಮ್ಮ ಕೊಡಗು ಮಲೆನಾಡುಗಳಲ್ಲೂ ವಿಶಿಷ್ಟ ಮದ್ಯಗಳನ್ನು ತಯಾರಿಸುವುದಿದೆ. ಇವೆಲ್ಲಾ ತೀರಾ ಅಪಾಯಕಾರೀ ಮದ್ಯಸಾರದ ಪ್ರಮಾಣ ಹೊಂದಿಲ್ಲ.
ಆಧುನಿಕ ಮದ್ಯಗಳ ಪ್ರವೇಶ ಆಗಿದ್ದೇ ನಮ್ಮ ಪಾರಂಪರಿಕ ಗ್ರಾಮವಾಸಿಗಳು ಪಂಗಡಗಳೂ ಈ ಅಪಾಯಕಾರೀ ಅಲ್ಕೋಹಾಲ್ ಪ್ರಮಾಣವಿರುವ ಮದ್ಯಕ್ಕೆ ಶರಣಾಗಿದ್ದಾರೆ. ಇಂದಿಗೂ ಹಳ್ಳಿಗಳ ಕುಡುಕರನ್ನು ಕೇಳಿದರೆ ಕಂಟ್ರಿ ಸರಾಯಿ ಬಗ್ಗೆ ಮಾತಾಡುತ್ತಾರೆ.
ಇದರರ್ಥ ಇಷ್ಟೇ. ಈ ಚಟ ಕ್ರಮೇಣ ಎಲ್ಲಾ ಚಟಗಳಂತೆ ಹೆಚ್ಚು ಹೆಚ್ಚು ಪ್ರಮಾಣದ ಕುಡಿತವನ್ನು ಪ್ರೇರೇಪಿಸುತ್ತಾ ಹೋಗುತ್ತದೆ.
ಒಂದೆಡೆ ಗ್ರಾಮೀಣ ರೈತನ ಕೌಟುಂಬಿಕ ಆದಾಯ ದಿನಕ್ಕೆ ಕೇವಲ ರೂ.200 ಎಂದು ಮರುಗುವ ಸರ್ಕಾರ ಇದೇ ಕುಟುಂಬದ ಗಂಡಸೊಬ್ಬ ಈ ಮೊತ್ತವನ್ನು ಹೆಂಡಕ್ಕೆ ವ್ಯಯಿಸುವುದರ ಬಗ್ಗೆ ಗೊತ್ತಿದ್ದೂ ಮೌನ ತಾಳುತ್ತದೆ.
ಹಳ್ಳಿಯ ಗೂಡಂಗಡಿಗಳಲ್ಲೂ ಮದ್ಯ ಮಾರಾಟವಾಗುವುದು ಬಹಿರಂಗವಾಗಿದ್ದರೂ ಇಲಾಖೆಗಳಾಗಲೀ ಜನಪ್ರತಿನಿಧಿಗಳಾಗಲೀ ಈ ಬಗ್ಗೆ ಕ್ರಮಕೈಗೊಂಡ ಉದಾಹರಣೆ ಇದೆಯೇ?
ಅರ್ಥಾತ್ ಈ ಮದ್ಯ ಎಂಬುದು ಕೌಟುಂಬಿಕ ನೆಮ್ಮೆದಿ, ಆರೋಗ್ಯಕ್ಕೆ ಮಾರಕವಾಗಿದೆಯಷ್ಟೇ ಅಲ್ಲ, ನಮ್ಮ ಸಾರ್ವಜನಿಕ ಜೀವನವನ್ನು ಭ್ರಷ್ಟಗೊಳಿಸುವಲ್ಲೂ ಮಹತ್ವದ ಪಾತ್ರ ವಹಿಸಿದೆ.
ಈ ಹಿಂದೆ ಕರ್ನಾಟಕದ ಮಹತ್ವದ ಹೋರಾಟಗಳನ್ನೂ ಮಹಿಳೆಯರೇ ಮುನ್ನಡೆಸಿದ್ದರು ಎಂಬುದನ್ನು ನೆನಪಿಸಿಕೊಂಡರೆ ಈ ಪಾದಯಾತ್ರೆ ನಿರ್ಣಾಯಕವಾಗುವ ಲಕ್ಷಣ ಕಾಣಿಸುತ್ತಿದೆ. ನಾಳೆಗೇ ಈ ಮಹಿಳೆಯರು ಗೆಲ್ಲುತ್ತಾರೆಂಬ ಭ್ರಮೆ ಈ ಮಹಿಳೆಯರಿಗೂ ಇಲ್ಲ. ಆದರೆ ಮುಂಬರುವ ದಿನಗಳಲ್ಲಿ ಕಿರಗೂರಿನ ಗಯ್ಯಾಳಿಗಳು ಕಥೆಯಲ್ಲಿ ಸ್ಫೋಟವಾಗುವ ಆಕ್ರೋಶ ರಾಜ್ಯದ ಹಳ್ಳಿಹಳ್ಳಿಗಳಲ್ಲೂ ಮೊಳಕೆ ಒಡೆಯಲಿದೆ.
ಈಗ ಉಡಾಫೆ, ಕಿತಾಪತಿಯಲ್ಲಿ ಈ ಹೋರಾಟವನ್ನು ನೋಡುತ್ತಿರುವ ಪಕ್ಷಗಳಿಗೂ ಈ ಬಿಸಿ ತಟ್ಟಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...