Homeಅಂಕಣಗಳುನಮ್ಮ ಮನೋ ಬಯಕೆಗಳೇ ವರದಿಗಳಾದಾಗ....

ನಮ್ಮ ಮನೋ ಬಯಕೆಗಳೇ ವರದಿಗಳಾದಾಗ….

- Advertisement -
- Advertisement -

| ಡಾ. ವಾಸು ಎಚ್.ವಿ |

ಯಾವುದೇ ಪತ್ರಕರ್ತರಿಗೆ ಸುದ್ದಿ ಮಾಡುವಾಗ ಒಂದು ಪ್ರಮುಖ ಸವಾಲು ಇರುತ್ತದೆ. ಅದು ತನ್ನ ಮನಸ್ಸಿನ ಅಪೇಕ್ಷೆಗಿಂತ ಭಿನ್ನವಾಗಿ ಇರುವ ವಸ್ತುಸ್ಥಿತಿಯನ್ನು ವಸ್ತುನಿಷ್ಠವಾಗಿ ವರದಿ ಮಾಡುವುದು. ತನ್ನೊಳಗೆ ನಿರ್ದಿಷ್ಟ ಒಲವು ನಿಲುವುಗಳಿಲ್ಲದ ಪತ್ರಕರ್ತರು ಯಾರೂ ಇರುವುದಿಲ್ಲ. ಅದರಲ್ಲೂ ಸದ್ಯ ದೇಶವನ್ನಾಳುತ್ತಿರುವವರು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಧಕ್ಕೆ ತರುತ್ತಿದ್ದಾರೆ ಎಂಬುದು ಸ್ಪಷ್ಟವಿದ್ದರೆ, ಪತ್ರಕರ್ತರಾದವರು ಮಾಮೂಲಿಗಿಂತ ಹೆಚ್ಚೇ ವಿರೋಧ ಪಕ್ಷದ ಪಾತ್ರ ವಹಿಸಬೇಕಾಗುತ್ತದೆ. ಆದರೆ, ಹಾಗಾದಾಗ ಕಣ್ಣೆದುರಿಗಿನ ವಾಸ್ತವ ಗ್ರಹಿಸದೇ ಅಥವಾ ಗ್ರಹಿಸಿದರೂ ಅದನ್ನು ಬರಹಕ್ಕಿಳಿಸುವಾಗ ತನ್ನ ಮನೋಬಯಕೆಯನ್ನು ವಿಶ್ಲೇಷಣೆಯನ್ನಾಗಿಸುವ ಕೆಲಸ ನಡೆದುಬಿಡುತ್ತದೆ.

ಇದನ್ನು ಈ ನಿಮ್ಮ ಪತ್ರಿಕೆಯೂ ಎದುರಿಸುತ್ತಿರುವ ಸವಾಲು. ಕಾಂಗ್ರೆಸ್ ಅಥವಾ ಜೆಡಿಎಸ್ ಕುರಿತ ಯಾವ ಒಲವೂ ನಮಗಿಲ್ಲ. ಆದರೆ, ನಿಸ್ಸಂದೇಹವಾಗಿ ಬಿಜೆಪಿಯು ಭಾರತ ದೇಶದ ಮೂಲ ಅಡಿಪಾಯಕ್ಕೇ ಧಕ್ಕೆ ತರುತ್ತಿದೆ ಎಂಬ ಅಪಾಯದ ಅರಿವಿದೆ. ಹೀಗಿರುವಾಗ ಕೆಲವು ಎಡವಟ್ಟುಗಳನ್ನು ನಾವೂ ಮಾಡಿದ್ದೇವೆ. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇದ್ದ ಅಲೆಯ ಸಂಪೂರ್ಣ ಗ್ರಹಿಕೆ ಇತ್ತೆಂದು ಹೇಳಲಾಗದಿದ್ದರೂ, ಎನ್‍ಡಿಎ ಸರ್ಕಾರ ರಚನೆ ಮಾಡುವ ಸಾಧ್ಯತೆಯೇ ಹೆಚ್ಚು ಎಂಬುದು ಸ್ಪಷ್ಟವಿತ್ತು. ಇಡೀ ದೇಶದಲ್ಲಿ ಮೋದಿ ಅಲೆ ಅತ್ಯಂತ ಹೆಚ್ಚಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಅದರಲ್ಲೂ ರಾಜ್ಯದ ಮೈತ್ರಿ ಸರ್ಕಾರವು ಜನರಿಗೆ ನಿರಾಶೆ ಮೂಡಿಸಿರುವುದು ಖಚಿತವಿತ್ತು. ಹೀಗಿದ್ದೂ, ನಮ್ಮ ವಿಶ್ಲೇಷಣೆಗಳಲ್ಲಿ ಬಿಜೆಪಿ ಸೋಲಬೇಕೆಂಬ ಬಯಕೆಯು ಎದ್ದು ಕಾಣುತ್ತಿತ್ತು.

ಇಂದು ಈ ಅಪೇಕ್ಷೆಯೇ ತಪ್ಪೆಂದು ಅನಿಸುವುದಿಲ್ಲ. ಅದು ದೇಶದ ನಾಗರಿಕರಾಗಿ ನಮ್ಮ ಕರ್ತವ್ಯವೂ ಆಗಿರಬಹುದು. ಆದರೆ, ಅದು ವಸ್ತುನಿಷ್ಠ ವಿಶ್ಲೇಷಣೆ ಆಗುವುದಿಲ್ಲ. ಹೀಗೆಂದ ಮೇಲೆ ಇನ್ನೊಂದು ಪ್ರಶ್ನೆ ಏಳುತ್ತದೆ. ಹಾಗಾದರೆ, ಪತ್ರಕರ್ತರು ಪ್ರಜಾಪ್ರಭುತ್ವದ ಪರ ನಿಲ್ಲುವ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೇ ಬೇಡವೇ? ಖಂಡಿತವಾಗಿ ಅಂತಹ ಕೆಲಸವನ್ನು ಪತ್ರಕರ್ತರು ಮಾಡಲೇಬೇಕು. ಆದರೆ ಎಂದಿಗೂ ತಮ್ಮ ವರದಿಗಳಲ್ಲಿ ಸುಳ್ಳಿನ ವಾಸನೆ ಇರದಂತೆ ನೋಡಿಕೊಳ್ಳಬೇಕು. ಬಹುಶಃ ಉದ್ದೇಶಪೂರ್ವಕ ಸುಳ್ಳನ್ನು ಈ ಪತ್ರಿಕೆಯಲ್ಲಿ ಬರೆಯುವುದಿಲ್ಲ. ಆದರೆ, ವಿಶ್ಲೇಷಣೆಯಲ್ಲಿ ಮನೋಬಯಕೆಗಳು ತೂರಿಕೊಂಡಿರುವುದು ವಾಸ್ತವ.

ಕಳೆದ ವಾರದ ಸಂಚಿಕೆ ಮುದ್ರಣಕ್ಕೆ ಹೋಗುವ ಮುನ್ನ ಮೂರು ಮೂಲಗಳಿಂದ ನಮಗೆ ಮಾಹಿತಿ ದೊರಕಿತು. ಅದರ ಪ್ರಕಾರ ಖಚಿತವಾಗಿ ಮೂರು ಗುಂಪುಗಳಲ್ಲಿ ಶಾಸಕರು ರಾಜೀನಾಮೆ ಕೊಡುತ್ತಾರೆ. ಎಚ್.ವಿಶ್ವನಾಥ್, ರಮೇಶ್ ಜಾರಕಿಹೊಳಿ ಮತ್ತು ಬೆಂಗಳೂರಿನ ಶಾಸಕರೊಬ್ಬರ ನೇತೃತ್ವ ಇರುತ್ತದೆ ಎಂಬುದು ಗೊತ್ತಾಗಿತ್ತು. 25 ಶಾಸಕರ ಜೊತೆ ಬಿಜೆಪಿಯು ಸಂಪರ್ಕದಲ್ಲಿದ್ದು, ಮೊದಲ 10 ಜನಕ್ಕೆ ವಿಶೇಷ ಆಫರ್ ಕೊಟ್ಟಿದ್ದಾರೆಂಬ ಸುಳಿವು ಸಿಕ್ಕಿತ್ತು. ಆನಂದ್‍ಸಿಂಗ್ ಮತ್ತು ರಮೇಶ್ ಜಾರಕಿಹೊಳಿಯವರ ರಾಜೀನಾಮೆ ಟ್ರೈಲರ್ ಮಾತ್ರ. ಗುಂಪು ಗುಂಪಾಗಿಯೇ ರಾಜೀನಾಮೆ ನೀಡಲಿದ್ದಾರೆ. ಅದು ಇನ್ನಷ್ಟು ಜನರನ್ನು ಹುರಿದುಂಬಿಸಲಿದೆ ಎಂಬುದು ಒಂದು ಮೂಲವಾದರೆ, ಆಶ್ಚರ್ಯಕರ ಮುಖಗಳು ರಾಜೀನಾಮೆ ನೀಡುವ ಗುಂಪಿನಲ್ಲಿರುತ್ತವೆ ಎಂಬುದು ಇನ್ನೊಂದು ಮೂಲವಾಗಿತ್ತು. ಈ ಸಾರಿಯ ಆಪರೇಷನ್ ಕಮಲದಿಂದ ಸಿದ್ದರಾಮಯ್ಯನವರ ಮೇಲೆ ಸಂಶಯಗಳು ದಟ್ಟವಾಗುತ್ತವೆ ಎಂಬುದು ಸಚಿವರೊಬ್ಬರು ನೀಡಿದ ಸುಳಿವಾಗಿತ್ತು.

ಇಷ್ಟು ಖಚಿತ ಸುಳಿವಿದ್ದಾಗಲೂ ನಮ್ಮ ವರದಿಗಳಲ್ಲಿ ಈ ಸಾರಿಯದ್ದೂ ಇನ್ನೊಂದು ಠುಸ್ ಆಪರೇಷನ್ ಎಂದೇ ಬಂದಿತು. ಹಾಗೆಯೇ ಎಚ್.ವಿಶ್ವನಾಥ್‍ರ ಸಂದರ್ಶನ ಮಾಡಲು ಹೋಗುವ ಹೊತ್ತಿಗಾಗಲೇ ಅವರ ಧೋರಣೆಯ ಕುರಿತು ಸಂಶಯವಿತ್ತಾದರೂ, ವರದಿ ಬರೆದಾಗ ರಾಜ್ಯದ ಚಿಂತನಶೀಲ ರಾಜಕಾರಣಿಯ ಕುರಿತ ಭ್ರಮೆಯು ಅದರಲ್ಲಿತ್ತು. ವಿಶ್ವನಾಥ್‍ರಂಥವರು ಹಾಗೆ ಮಾಡಲಾರರು ಎಂಬ ಮನೋಬಯಕೆಯಲ್ಲಿ ಎರಡು ಆಯಾಮಗಳಿದ್ದವು. ಒಂದು, ಅವರ ಕುರಿತ ಸರಿಯಾದ ಅಸೆಸ್‍ಮೆಂಟ್‍ನ ಕೊರತೆ. ಮತ್ತೊಂದು, ಹಾಗೆ ಮಾಡಬಾರದೆಂಬ ನಿರೀಕ್ಷೆ.

ಜೈಲು ಅಥವಾ ದೈಹಿಕ ದಾಳಿಗಳನ್ನೂ ಎದುರಿಸಿಯಾದರೂ ಸತ್ಯವನ್ನು ಹೇಳಬೇಕೆನ್ನುವ ತುಡಿತ ಮತ್ತು ಧೈರ್ಯವಿರುವ ಪತ್ರಕರ್ತರು ಈ ದೇಶದಲ್ಲಿ ಇನ್ನೂ ಸಾಕಷ್ಟು ಉಳಿದುಕೊಂಡಿದ್ದಾರೆ. ಆದರೆ, ಭ್ರಮೆಗಳನ್ನು ಮೀರುವುದು ಸುಲಭದ ಮಾತಲ್ಲ. ಈ ಭ್ರಮೆಗಳೂ ಅವರ ಸದ್ಭಾವನೆಗಳಿಂದಲೇ ಹುಟ್ಟಿರುವಂಥವು. ಓದು ಬಲ್ಲ ವರ್ಗವು ಇಂದು ಸರ್ವರ ಒಳಿತಿನ ದೃಷ್ಟಿಯಿಂದ ಸೂಕ್ತವಾದ ಓರಿಯೆಂಟೇಷನ್ ಬಯಸುತ್ತಿಲ್ಲ; ಬದಲಿಗೆ ತಾನೇ ಓರಿಯೆಂಟ್ ಮಾಡಬಲ್ಲಷ್ಟು ಪ್ರಬಲವಾಗಿದೆ. ಹೀಗಾಗಿ ಪ್ರಜಾಪ್ರಭುತ್ವದ ಸ್ಥಾಪಿತ ಮೌಲ್ಯಗಳ ಆಧಾರದ ಮೇಲಷ್ಟೇ ವಿಶ್ಲೇಷಣೆಯನ್ನು ಮಾಡುತ್ತಾ ಪಕ್ಷಗಳ ಕುರಿತ ಒಲವು-ನಿಲುವುಗಳನ್ನು ಪಕ್ಕಕ್ಕೆ ಸರಿಸುವುದು ಇಂದಿನ ಅಗತ್ಯವಾಗಿದೆ.

ಆ ನಿಟ್ಟಿನಲ್ಲಿ ಈ ಪತ್ರಿಕೆ ತನ್ನ ಭಾಷೆ, ಕಥನ ಮತ್ತು ವಿಶ್ಲೇಷಣಾ ವಿಧಾನವನ್ನು ರೂಪಿಸಿಕೊಳ್ಳಲಿದೆ. ಪತ್ರಿಕೆಯ ಓದುಗರೂ ಇದರ ಕುರಿತು ಚಿಂತಿಸಿ ತಮ್ಮ ಅನಿಸಿಕೆಗಳನ್ನು ಮುಂದಿಡಬೇಕೆಂದು ಕೋರುತ್ತೇನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...