Homeಮುಖಪುಟಜಿಂದಾಲ್‍ಗೆ ಭೂಮಿ: ಎಚ್.ಕೆ. ಪಾಟೀಲ, ರಾಘವೇಂದ್ರ ಕುಷ್ಟಗಿ ಏನು ಹೇಳ್ತಾರೆ?

ಜಿಂದಾಲ್‍ಗೆ ಭೂಮಿ: ಎಚ್.ಕೆ. ಪಾಟೀಲ, ರಾಘವೇಂದ್ರ ಕುಷ್ಟಗಿ ಏನು ಹೇಳ್ತಾರೆ?

ಕಾನೂನು ಇಲಾಖೆ ಈ ಭೂಮಿ ಪರಭಾರೆಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಸ್ತಾಪವನ್ನು ರಾಜ್ಯ ಸಚಿವ ಸಂಪುಟ ಒಪ್ಪಿಕೊಂಡಿದೆ.

- Advertisement -
- Advertisement -

| ನಾನುಗೌರಿ ಡೆಸ್ಕ್ |

ಜಿಂದಾಲ್ ಸ್ಟೀಲ್ ಕಂಪನಿಗೆ 3600 ಎಕರೆ ಭೂಮಿ ಹಸ್ತಾಂತರಿಸುವುದನ್ನು ಹಲವರು ಮೊದಲಿಂದಲೂ ವಿರೋಧಿಸುತ್ತ ಬಂದಿದ್ದಾರೆ. ಆಡಳಿತ ಪಕ್ಷದ ಶಾಸಕ, ಮಾಜಿ ಸಚಿವ ಎಚ್‍ಕೆ ಪಾಟೀಲ ಮತ್ತು ಜನಸಂಗ್ರಾಮದ ಮುಖ್ಯಸ್ಥ ರಾಘವೇಂದ್ರ ಕುಷ್ಟಗಿ ನಾನುಗೌರಿ.ಕಾಂ ನೊಡನೆ ಮಾತಾಡಿ, ಇದರ ಹಿಂದಿನ ಹುನ್ನಾರಗಳನ್ನು ತೆರೆದಿಟ್ಟಿದ್ದಾರೆ…

ಕಾನೂನು ಇಲಾಖೆ ಈ ಭೂಮಿ ಪರಭಾರೆಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಸ್ತಾಪವನ್ನು ರಾಜ್ಯ ಸಚಿವ ಸಂಪುಟ ಒಪ್ಪಿಕೊಂಡಿದೆ. ಈ ಪ್ರಸ್ತಾಪದಲ್ಲೇ ಇದ್ದ ಕಾನೂನು ಇಲಾಖೆಯ ವ್ಯತಿರಿಕ್ತ ಅಭಿಪ್ರಾಯವನ್ನು ಉದಾಹರಿಸಿ ಕೆಲವು ಸಂಪುಟ ಸದಸ್ಯರು ವಿರೋಧ ಮಾಡಿದರೂ ರಾಜ್ಯ ಸರ್ಕಾರ ಜಿಂದಾಲ್ ಪರ ನಿಲುವು ಕೈಗೊಂಡಿರುವುದರ ಹಿಂದೆ ಸಾಕಷ್ಟು ‘ವ್ಯವಹಾರ’ ನಡೆದಿರಬಹುದು ಎಂಬ ಸಂಶಯ ಜನರನ್ನು ಕಾಡುತ್ತಿದೆ.

ಆಡಳಿತ ಪಕ್ಷದ ಶಾಸಕ ಮತ್ತು ಮಾಜಿ ಸಚಿವ ಎಚ್.ಕೆ ಪಾಟೀಲರು ಕಳೆದ 4-5 ದಿನದಿಂದ ಜಿಂದಾಲ್‍ಗೆ ಭೂಮಿ ನೀಡುತ್ತಿರುವುದು ಕಾನೂನು ವಿರೋಧ ಮತ್ತು ಅಕ್ರಮ ಎಂದು ಹೇಳುತ್ತಲೇ ಬಂದಿದ್ದಾರೆ. ಎಚ್.ಕೆ ಪಾಟೀಲರು ನಮ್ಮ ಪೋರ್ಟಲ್‍ನೊಂದಿಗೆ ಹಂಚಿಕೊಂಡ ಮಾಹಿತಿಯಿಲ್ಲಿದೆ:

‘ಜಿಂದಾಲ್‍ಗೆ ಭೂಮಿ ಕೊಡುವುದರ ಹಿಂದೆ ಸಂಶಯಾತ್ಮಕ ಕೈವಾಡವಿದೆ. ಯಾಕೆ ಕೊಡಬಾರದು ಎನ್ನುವುದಕ್ಕೆ ಈ ಮೂರು ಕಾರಣಗಳು ಸಾಕು: 1) ಅತ್ಯಂತ ಕಡಿಮೆ ಬೆಲೆಗೆ ಭೂಮಿಯನ್ನು ನೀಡುವ ಮೂಲಕ ರಾಜ್ಯ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವುದು.

2) ಜಿಂದಾಲ್ ಸರ್ಕಾರದ ವಿವಿಧ ಇಲಾಖೆಗಳಿಗೆ ಸಾಕಷ್ಟು ಮೊತ್ತದ ಬಾಕಿ ಉಳಿಸಿಕೊಂಡಿದೆ. ರಾಜ್ಯ ಸರ್ಕಾರದ ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಂಎಲ್)ಗೆ 2 ಸಾವಿರ ಕೋಟಿಗೂ ಹಣವನ್ನು ಜಿಂದಾಲ್ ಪಾವತಿಸದೇ ಉಳಿಸಿಕೊಂಡಿದೆ. ನಮ್ಮ ಸರ್ಕಾರಿ ಸಂಸ್ಥೆಗೇ ಬಾಕಿ ಉಳಿಸಿಕೊಂಡ ಸಂಸ್ಥೆಗೆ ತರಾತುರಿಯಲ್ಲಿ ಅಗ್ಗದ ದರದಲ್ಲಿ ಭೂಮಿ ನೀಡಿದ್ದು ಅನೈತಿಕ ಮತ್ತು ಕಾನೂನು ವಿರೋಧಿ ತೀರ್ಮಾನ.

3) ಜಿಂದಾಲ್ ಮೇಲೆ ಅಕ್ರಮವಾಗಿ ಅದಿರು ಮಾರಿದ ಆರೋಪಗಳಿವೆ. ನ್ಯಾ. ಸಂತೋಷ ಹೆಗಡೆಯವರ ವರದಿಯಲ್ಲೂ ಇದು ಉಲ್ಲೇಖವಾಗಿದೆ. ಮೇಲಾಗಿ ಸುಪ್ರೀಂ ಕೋರ್ಟಿನಲ್ಲಿ ಜಿಂದಾಲ್ ಮೇಲೆ ಕೇಸೂ ಇದೆ. ನಮ್ಮ ರಾಜ್ಯದ ಸಾಮಾಜಿಕ ಹೋರಾಟಗಾರ ಎಸ್. ಆರ್ ಹಿರೇಮಠರು ಸುಪ್ರಿಂಕೋರ್ಟಿನಲ್ಲಿ ಜಿಂದಾಲ್ ವಿರುದ್ಧ ಕೇಸು ಹಾಕಿದ್ದಾರೆ. ಹೀಗಾಗಿ ಕಾನೂನು ಇಲಾಖೆಯು ಜಿಂದಾಲ್‍ಗೆ ಭೂಮಿ ಕೊಡಬಾರದು ಎಂಬ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿತ್ತು. ಜಿಂದಾಲ್ ಮೇಲೆ ಅಂತಹ ಯಾವ ಅಪೀಲೂ ಇಲ್ಲ ಎಂದು ರಾಜ್ಯದ ಅಡ್ವೋಕೇಟ್ ಜನರಲ್ ಕೂಡ ಸಂಪುಟಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ.

ನನ್ನ ಈ ವಿರೋಧದದ ಮಾದರಿಯಲ್ಲೇ ಬಿ.ಕೆ. ಹರಿಪ್ರಸಾದ್ ಮತ್ತು ಎಚ್ ವಿಶ್ವನಾಥ್ ಕೂಡ ವಿರೋಧ ಮಾಡಿದ್ದಾರೆ. ಸಂಪುಟ ಸಭೆಯಲ್ಲೂ ಕೆಲವರು ವಿರೋಧಿಸಿದ್ದಾರೆ , ಇಷ್ಟಿದ್ದೂ ಜಿಂದಾಲ್‍ಗೆ ಖನಿಜಯುಕ್ತ ಭೂಮಿ ನೀಡಿದ್ದು ಅಕ್ಷಮ್ಯ. ಸರ್ಕಾರ ತನ್ನ ನಿಲುವು ಬದಲಿಕೊಳ್ಳಲೇಬೇಕು…..

ರಾಘವೇಂದ್ರ ಕುಷ್ಟಗಿ:

“ಇದರ ಹಿಂದ್ ದೊಡ್ಡ ಲಾಬೀನ ಅದಾರಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕೈವಾಡ ಇದೇರಿ. ಡಿ.ಕೆ. ಶಿವಕುಮಾರಗಂತೂ ಇದು ‘ಲಾಭದ’ ವಹಿವಾಟು ಅಷ್ಟೇ. 80ರದಶಕದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ವಿಜಯನಗರ ಸ್ಟೀಲ್ ಕಂಪನಿಗೆ 17 ಸಾವಿರ ಎಕರೆ ಭೂಮಿ ನೀಡಿದ್ದರು. ಕಾಲಾಂತರದಲ್ಲಿ ಇದು ಲಾಭಯುತವಾಗದಂತೆ ಖಾಸಗಿ ಕಂಪನಿಗಳು ನೋಡಿಕೊಂಡವು. ಮುಂದೆ ಈ ಸರ್ಕಾರಿ ಸ್ವಾಮ್ಯದ ಉದ್ಯಮ ಜಿಂದಾಲ್ ಮಡಿಲಿಗೆ ಬಿತ್ತರಿ. ವಿಜಯನಗರ ಅಟೀಲ್ ಸಂಸ್ಥೆಯ 17 ಸಾವಿರ ಎಕರೆ ಜೊತೆಗೆ ಉಕ್ಕು ಉತ್ಪಾದನೆ ಮಾಡುವ ಲೈಸೆನ್ಸೂ ಜಿಂದಾಲ್‍ಗೆ ಸಿಕ್ಕಿತು.

2010-11 ರ ಸುಮಾರು ಕೆಐಎಡಿಬಿ ತಾನೇ ಮುಂದೆ ನಿಂತು ರೈತರಿಂದ ಮತ್ತೆ 3 ಸಾವಿರ ಎಕರೆ ಭೂಮಿ ಖರೀದಿಸಿ ಇದೇ ಜಿಂದಾಲ್‍ಗೆ ಧಾರೆ ಎರೆಯಿತು. ಇದರ ಹಿಂದೆ ಎಲ್ಲ ಪಾರ್ಟಿಗಳ ದೊಡ್ಡ ಕುಳಗಳಿಗೆ ಸಾಕಷ್ಟು ಕಿಕ್‍ಬ್ಯಾಕ್ ಸಿಕ್ಕೇ ಸಿಕ್ಕಿರ್ತದ… ಈ 3 ಸಾವಿರ ಎಕರೆ ಪರಭಾರೆ ವಿರುದ್ಧ ಇಲ್ಲಿನ ಸ್ಥಳಿಯ ಬಸವಾರಾಜ್ ಅನ್ನೋರು ಸುಪ್ರಿಂಗೆ ಹೋಗ್ಯಾರ.

ಇದೆಲ್ಲಕ್ಕಿಂತ ಗಾಬರಿ ಎಂದರೆ ಜಿಂದಾಲ್‍ನವರು ತಮಗಿದ್ದ ಅಧಿಕೃತ ಭೂಮಿ ಪಕ್ಕದ ಗೋಮಾಳ, ಕೆರೆಕಟ್ಟೆ ಮತ್ತು ಅರಣ್ಯ ಭೂಮಿಯನ್ನು ಅತಿಕ್ರಮ ಮಾಡಿಕೊಂಡಾರ, ಇದರ ವಿರುದ್ಧಾನೂ ಯಾರಾದರೂ ಸುಪ್ರಿಂಗೆ ಹೋಗಬೇಕು.

ಇಲ್ಲಿನ ಜನರಿಗೆ ಉದ್ಯೋಗವನ್ನೂ ಕೊಡದ, ಸರ್ಕಾರಕ್ಕೆ ರಾಯಲ್ಟಿ ರೂಪದಲ್ಲಿ ಜುಜುಬಿ ಫೀಸು ಕಟ್ಟುವ ಇಂತಹ ಜನದ್ರೋಹಿ ಕಂಪನಿಗೆ ಈಗ 3600 ಎಕರೆ ಭೂಮಿ ನೀಡ್ತಾ ಇರೋದರ ಹಿಂದೆ ದೊಡ್ಡ ಕಿಕ್‍ಬ್ಯಾಕ್ ವ್ಯವಹಾರ ಅದಾರಿ….”

ಕಾನೂನು ಇಲಾಖೆ ಜಿಂದಾಲ್‍ಗೆ ಕೊಡುತ್ತಿರುವ ಭೂಮಿ ಖನಿಜ ಸಂಪತ್ತಿನ ಭೂಮಿ ಎಂದು ಕಾನೂನು ಇಲಾಖೆ ಹೇಳಿದರೆ ವಾಣಿಜ್ಯ ಇಲಾಖೆ, ‘ಇಲ್ಲಿ ಖನಿಜ ಸಂಪತ್ತಿಲ್ಲ, ಸಮಗ್ರ ಉಕ್ಕಿನ ಕಾಖಾನೆಯನ್ನು ಜಿಂದಾಲ್ ಸ್ಥಾಪಿಸಿದೆ’ ಎಂದು ನಿರ್ಲಜತನದಿಂದ ವಾಣಿಜ್ಯ ಇಲಾಖೆ ವಾದಿಸಿದೆ!

ಸ್ಥಳಿಯರ ನೆರವಿನಿಂದ ಒಂದು ದೊಡ್ಡ ಆಂದೋಲನ ರೂಪಿಸಿ ಈ ಭೂಮಿ ಪರಭಾರೆಯನ್ನು ಸರ್ಕಾರ ಹಿಂದಕ್ಕೆ ಪಡೆಯುವಂತೆ ಪ್ರಗತಿಪರರು ಮುಂದೆ ಬರಬೇಕಿದೆ.

ಇದನ್ನು ಓದಿರಿ: ಕಾರ್ಮಿಕ ವಿರೋಧಿ ಜಿಂದಾಲ್ ಕಂಪನಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...