ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಸಿಪಿ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮಾನಸಿಕ ರೋಗಿಯಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಕಿಡಿಕಾರಿದ್ದಾರೆ. ಸಿಎಂ ಜಗನ್ ಮೋಹನ್ ರೆಡ್ಡಿಯವರ ಹೊಸ ಸರ್ಕಾರ ಜನ ವಿರೋಧಿ ನಿಯಮಗಳನ್ನು ಜಾರಿ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಎಎನ್ಐ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ವೈಎಸ್ ಆರ್ ಸಿಪಿ ಪಕ್ಷದ ಹೊಸ ಆಡಳಿತದಲ್ಲಿ ಜನ ವಿರೋಧಿ ನೀತಿ-ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ. ಇತರೆ ಪಕ್ಷಗಳ ನಾಯಕರ ಮೇಲೆ ಸುಖಾಸುಮ್ಮನೇ ಕಾನೂನುಬಾಹಿರ ಕೇಸ್ ಹಾಕಲಾಗುತ್ತಿದೆ. ಪೊಲೀಸರು ಕಾರಣವಿಲ್ಲದೆಯೇ ಸಮಸ್ಯೆ ತಂದೊಡ್ಡುತ್ತಿದ್ದಾರೆ. ಯಾರು ನನ್ನ ಜತೆಗಿದ್ದಾರೋ ಅವರಿಗೆ ನಾನು ಒಳ್ಳೆಯವನಾಗಿದ್ದೇನೆ. ಆದರೆ ಜಗನ್ ಅವರು ಸೈಕೋನಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವೈಎಸ್ಆರ್ ಸಿಪಿ ಆಡಳಿತ ತುಂಬಾ ಕೆಟ್ಟದಾಗಿದೆ. ಪಕ್ಷದ ನಾಯಕರು ಜೆ.ಟ್ಯಾಕ್ಸ್ ವಸೂಲಿ ಮಾಡುತ್ತಿದ್ದಾರೆ. ಜೆ. ಟ್ಯಾಕ್ಸ್ ಎಂದರೆ ಜಗನ್ ಟ್ಯಾಕ್ಸ್ ಎಂದರ್ಥ. ನಾನು ಅದೆಷ್ಟೋ ಸಿಎಂಗಳ ಆಡಳಿತ ನೋಡಿದ್ದೇನೆ. ಆದರೆ ಜಗನ್ ನಂತಹ ದುರಾಡಳಿತ ಮಾಡುವ ಸಿಎಂನನ್ನು ನೋಡಿಲ್ಲ. ಕಾನೂನು ಎಲ್ಲರಿಗೂ ಒಂದೇ ಆಗಿದೆ. ಸರ್ಕಾರ ಸೊಕ್ಕಿನ ವರ್ತನೆ ಬಿಟ್ಟು, ಉತ್ತಮವಾಗಿ ನಡೆದುಕೊಳ್ಳುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೇನೆ. ಜಗನ್ ಸರ್ಕಾರ ಇತರೆ ಪಕ್ಷದ ನಾಯಕರನ್ನು ಗುರಿಯಾಗಿಸಿ ಕ್ರಮ ಕೈಗೊಳ್ಳುತ್ತಿದೆ. ಇದು ಸರಿಯಲ್ಲ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.