ಗಿರೀಶ್ ತಾಳಿಕಟ್ಟೆ |
ಈ ಸಲದ ಚುನಾವಣಾ ಕಣದಲ್ಲಿ ಸಾಕಷ್ಟು ಮಂದಿ ಬಣ್ಣದ ಮಂದಿ ಅಗ್ನಿಪರೀಕ್ಷೆಯ ಅಖಾಡಕ್ಕೆ ಧುಮುಕಿದ್ದುಂಟು. ಕಾಂಗ್ರೆಸ್ನಿಂದ ಉಮಾಶ್ರೀ, ಬಿ.ಸಿ.ಪಾಟೀಲ್, ಜೆಡಿಎಸ್ನಿಂದ ನಟ ಶಶಿಕುಮಾರ್, ನಿರ್ಮಾಪಕ ಸಿ.ಆರ್.ಮನೋಹರ್, ಮಧು ಬಂಗಾರಿ ಹಾಗೂ ಬಿಜೆಪಿಯಿಂದ ನಟ ಕುಮಾರ್ ಬಂಗಾರು, ಸಿ.ಪಿ.ಯೋಗೀಶ್ವರ್, ಡೈಲಾಗ್ ಕಿಂಗ್ ಸಾಯಿ ಕುಮಾರ್, ಜಗ್ಗೇಶ್ ಹೀಗೆ ದೊಡ್ಡ ದಂಡೇ ಮತ ಬೇಟೆಗೆ ಇಳಿದಿತ್ತು. ಅದರಲ್ಲಿ ವಿಜಯಲಕ್ಷ್ಮಿ ಒಲಿದದ್ದು ಬೆರಳೆಣಿಕೆಯ ಮಂದಿಗಷ್ಟೇ. ಪೊಲಿಟಿಕಲ್ ಕಾಳಗದಲ್ಲಿ ಸೋಲು-ಗೆಲುವು ಕಾಮನ್ನು. ಆದ್ರೆ ಟಿಕೇಟ್ ಸಿಗಲಿಲ್ಲ ಅಂತ ಕಾಂಗ್ರೆಸ್ ಮೇಲೆ ಮುನಿಸಿಕೊಂಡು ಕೊನೇ ಘಳಿಗೆಯಲ್ಲಿ ದೇವೇಗೌಡರ ತೆನೆ ಹೊತ್ತು ಹೊಸದುರ್ಗದ ಅಖಾಡಕ್ಕಿಳಿದಿದ್ದ ಮಾಜಿ ಮೋಹಕ ನಟ ಶಶಿಕುಮಾರ್ ಸೋತ ಪರಿಯಿದೆಯಲ್ಲ ಅದು ಶಶಿ ತನಗೆ ತಾನೇ ಮಾಡಿಕೊಂಡ ಅವಮಾನದಂತಿದೆ. ಯಾಕೆಂದರೆ ಹೊಸದುರ್ಗದಲ್ಲಿ ಚಲಾವಣೆಯಾಗಿದ್ದ ಅಜಮಾಸು ಒಂದೂವರೆ ಲಕ್ಷದಷ್ಟು ಮತಗಳಲ್ಲಿ ಶಶಿಕುಮಾರ್ಗೆ ಬಿದ್ದಿರೋದು ಕೇವಲ 1575 ಮತಗಳು ಮಾತ್ರ! ಒಂದು ಕಾಲಕ್ಕೆ ಇದೇ ಹೊಸದುರ್ಗವನ್ನೂ ಒಳಗೊಂಡಂತೆ ಇಡೀ ಚಿತ್ರದುರ್ಗ ಜಿಲ್ಲೆಯ ಸಂಸದನಾಗಿ ರಾಜಕಾರಣ ಮಾಡಿದಂತಹ ವ್ಯಕ್ತಿ ತನ್ನ ವ್ಯಾಪ್ತಿಯ ಒಂದು ಕ್ಷೇತ್ರದಲ್ಲಿ ಠೇವಣಿ ಉಳಿಸಿಕೊಳ್ಳಲಾಗದೆ ಸುಸ್ತಾಗಿ ಹೋಗುತ್ತಾನೆಂದರೆ ರಾಜಕಾರಣಿಯಾಗಿ ಆತನ ವರ್ಚಸ್ಸು ಅದಿನ್ನೆಂತದ್ದಿರಬೇಡ. ಅಸಲಿಗೆ ಹೊಸದುರ್ಗದಲ್ಲಿ ನಿಜವಾಗಿ ಕಾಳಗ ಇದ್ದದ್ದು ಬಿಜೆಪಿಯ ಗೂಳಿಹಟ್ಟಿ ಮತ್ತು ಕಾಂಗ್ರೆಸ್ನ ಗೋವಿಂದಪ್ಪನ ನಡುವೆ. ಶಶಿಯ ಎಂಟ್ರಿ ಅಲ್ಲೇನಿದ್ದರೂ ಸ್ವಜಾತಿಯ ನಾಯಕ ಮತ್ತು ಒಂದಷ್ಟು ಅಹಿಂದ ಮತಗಳನ್ನು ಕಾಂಗ್ರೆಸ್ನಿಂದ ಛಿದ್ರಗೊಳಿಸಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ ಮಾಜಿ ಸಂಸದರೊಬ್ಬರು ಈ ಮಟ್ಟದ ಹೀನಾಯ ಸೋಲು ಅನುಭವಿಸುತ್ತಾರೆಂದು ಯಾರೂ ಊಹಿಸಿರಲಿಲ್ಲ. ಛೇ, ಛೇ, ಶಶಿಯ ಪೊಲಿಟಿಕಲ್ ಲೈಫು ಹೀಗೆ ಕ್ಲ್ಯೆಮ್ಯಾಕ್ಸ್ ಕಾಣಬಾರದಿತ್ತು. ವೆರಿ ಸ್ಯಾಡ್…..