Homeಅಂಕಣಗಳುಚಾನೆಲ್‌ಗಳನ್ನು ಹೊಕ್ಕ ಕಾಗೆಗಳು ಕಾವ್ ಕಾವ್ ಎನ್ನುವ ಆ್ಯಂಕರ್ಸ್‌ಗಳು

ಚಾನೆಲ್‌ಗಳನ್ನು ಹೊಕ್ಕ ಕಾಗೆಗಳು ಕಾವ್ ಕಾವ್ ಎನ್ನುವ ಆ್ಯಂಕರ್ಸ್‌ಗಳು

- Advertisement -
- Advertisement -

ಮಲ್ಲಿ |
ಕನ್ನಡದ ಬಹುಪಾಲು ನ್ಯೂಸ್ ಚಾನೆಲ್‌ಗಳಿಗೆ ಕಾಗೆ ಎಂದರೆ ಬಲುಪ್ರೀತಿ. ಅದರಲ್ಲೂ ಬಿಜೆಪಿಗೆ ಅನುಕೂಲ ಆಗುವುದಾದರೆ ಅವು ಇಡೀ ದಿನ ಕಾಗೆಯ ಸುತ್ತವೇ ಸುದ್ದಿ ಮಾಡಲು ರೆಡಿ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ಎಷ್ಟೇ ಮೂದಲಿಕೆ, ವ್ಯಂಗ್ಯ ಬಂದರೂ ಅವು ಕಾಗೆಯ ಪರೀತಿಯಿಂದ ದೂರ ಉಳಿಯುತ್ತಲೇ ಆಗುತ್ತಿಲ್ಲ.

ಫೆಬ್ರುವರಿ ಎಂಟರಂದು ಬಜೆಟ್ ಮಂಡನೆ ಇತ್ತಲ್ಲ? ಅವತ್ತು ಬಜೆಟ್ ಮಂಡನೆಯೇ ಆಗುವುದಿಲ್ಲ, ಸರ್ಕಾರ ಬೀಳುತ್ತದೆ ಎಂದು ಬಹುಪಾಲು ನ್ಯೂಸ್ ಚಾನೆಲ್‌ಗಳು ಮುಂಜಾನೆಯಿಂದಲೇ ಅರಚುತ್ತಿದ್ದವು. ಆಗ ಬಿಟಿವಿ ಒಂದು ಬಿಗ್ ಬ್ರೇಕಿಂಗ್ ಕೊಡ್ತಾನೇ ಇತ್ತು. ಅದು ಕೂಡ ಸರ್ಕಾರ ಬೀಳುವುದರ ಕುರಿತೇ ಆಗಿತ್ತು! ಆದರೆ ಅದಕ್ಕೆ ಅವರು ನೀಡುತ್ತಿದ್ದ, ತೋರಿಸುತ್ತಿದ್ದ ಎಕ್ಸಕ್ಲೂಸಿವ್ ಕಾರಣವೇ ಬೇರೆ ಇತ್ತು!
ಅದು ಕಾಗೆ! ವಿಧಾನಸೌಧದದ ಪಶ್ಚಿಮ ದ್ವಾರದಲ್ಲಿ ಕಾಗೆ ಬಂದು ಸುಮಾರು ಹೊತ್ತಿನಿಂದ ಕೂತಿದೆ, ಇದು ಅಪಶಕುನ, ಸರ್ಕಾರ ಬಿದ್ದೇ ಹೋಯ್ತು ಎಂದೆಲ್ಲ ಬ್ರೇಕಿಂಗ್ ನ್ಯೂಸ್ ಕೊಡಲಾಗುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ‘ಬಿಗ್ ಬ್ರೇಕಿಂಗ್’ ಸದ್ಯದಲ್ಲೇ ಎಂಬ ಸುದ್ದಿ ಬಿಟ್ಟರು. ಆನ ಇದೇನಪ್ಪಾ ಅಂತಾ ಕಾಯ್ದರು. ಬಂದೇ ಬಿಟ್ಟಿತು ಬಿಗ್ ಬ್ರೇಕಿಂಗ್, “ಕಾಗೆ ಈಗ ವಿಧಾನಸೌಧ ಪ್ರವೇಶಿಸಲಿದೆ”….. ಛೇ, ಛೇ ರಿಯಲಿ ಬಿಗ್ ಬ್ರೇಕಿಂಗ್, ಆ ಕಾಗೆಗೆ!

ಆ ಕಾಗೆ ಹಿಂದ ಬಿದ್ದ ಕ್ಯಾಮೆರಾಮನ್ ಮತ್ತು ವರದಿಗಾರ ಬಜೆಟ್ ಬಗ್ಗೆ ತಲೆಕೆಡಿಸಿಕೊಂಡಿರಲೇ ಇಲ್ಲ. ದನ ಕಾಯುವವರಂತೆ ವಿಧಾನಸೌಧದ ಅಂಗಳದಲ್ಲೆಲ್ಲ ಓಡೋಡಿ ಶೂಟ್ ಮಾಡುತ್ತಿದ್ದ ಈ ಮನೆಹಾಳರನ್ನು ನೋಡಿ ಸೆಕ್ಯುರಿಟಿಯವರು, ಕುದುರೆ ವ್ಯಾಪಾರದ ಬಗ್ಗೆ ವರದಿ ಮಾಡ್ರೋ ಅಂದರೆ ಈ ಕತ್ತೆಗಳು ಕಾಗೆ ಹಿಂದೆ ಬಿದ್ದಿವೆಯಲ್ಲ ಎಂದು ನಗಾಡುತ್ತಿದ್ದರು. ಬಜೆಟ್ ಸುಸೂತ್ರವಾಗಿ ಮಂಡನೆಯಾಗಿತು. ಬಜೆಟ್‌ಗೂ ಮೊದಲು ಕುಮಾರಸ್ವಾಮಿ ಬಿಟ್ಟ ಆಡಿಯೋ ಬಾಂಬಿಗೆ ಬಿಜೆಪಿಯೂ ಥಂಡಾ ಹೊಡೆಯಿತು. ಪಾಪ, ಆಮೇಲೆ ಕಾಗೆಯೂ ಇಲ್ಲ, ಕಾಗೆ ಹಿಂದೆ ಬಿದ್ದಿದ್ದ ಕತ್ತೆಗಳೂ ಇಲ್ಲ!

ಪಬ್ಲಿಕ್‌ನ ಸೆಲ್ ವೀಕ್!

ಕಾಗೆ ಅಪಶಕುನ ಎಂಬ ಮೂಢನಂಬಿಕೆ ಇರುವಂತೆ, ನಿಂತ ಅಂದರೆ ಓಡದ ಗಡಿಯಾರವೂ ಮನೆಯಲ್ಲಿ ಇದ್ದರೆ ಡೇಂಜರ್ ಎಂಬ ಮುಠ್ಠಾಳ ನಂಬಿಕೆಯನ್ನೂ ವೈದಿಕರು ನಮ್ಮ ಜನರ ತಲೆಯಲ್ಲಿ ತುಂಬಿದ್ದಾರೆ. ಇದನ್ನೇ ಎನ್‌ಕ್ಯಾಷ್ ಮಾಡಿಕೊಂಡ ಪಬ್ಲಿಕ್ ಟಿವಿಯವರು ಮತ್ತೊಂದು ಬ್ರೇಕಿಂಗ್ ಹೊಡೆದೇ ಬಿಟ್ಟರು. ಕುಮಾರಸ್ವಾಮಿ ಮನೆಯ ಗಡಿಯಾರ ಕೆಟ್ಟು ಹೋಗಿದೆ ಅಂತಾ ಒಂದು ಬ್ರೇಕಿಂಗು, ಕೆಲಸದವರು ಹೊಸ ಸೆಲ್ ಹಾಕಿ ಸರಿಪಡಿಸಿದರು ಅಂತಾ ಇನ್ನೊಂದು ಬ್ರೇಕಿಂಗು.
ಕಾಗೆ ಕೂತಿದ್ದು, ಗಡಿಯಾರ ನಿಂತಿದ್ದು-ಇಂತದ್ದನ್ನೆಲ್ಲ ನೋಡಿ ಯಡಿಯೂರಪ್ಪ ಖೂಷಿ ಪಡುವ ಹೊತ್ತಿನಲ್ಲೇ ದೇವದುರ್ಗದ ಐಬಿಯಲ್ಲಿ ನಡೆಸಲು ಯತ್ನಿಸಿದ ಆಪರೇಷನ್ನಿನ ಆಡಿಯೋ ಹೊರಬಿದ್ದಿತ್ತು!

ಕಾರ್ ಕಾರ್, ಕಾರ್ ಮೇಲೆ ಕಾಗೆ ದರ್ಬಾರ್!

ಹಿಂದೆಯೂ ನಮ್ಮ ಕನ್ನಡ ಚಾನೆಲ್‌ಗಳು ಕಾಗೆಯ ಹಿಂದೆ ಬಿದ್ದು ಸರ್ಕಾರ ಬೀಳುತ್ತದೆ, ಸಿಎಂ ಬದಲಾಗುತ್ತಾರೆ ಎಂದೆಲ್ಲ ‘ವಿಶಲ್ಲೇಷಣೆ’ ಮಾಡುವ ಮಟ್ಟಕ್ಕೆ ಇಳಿದಿದ್ದವು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಕಾರ್ ಮೇಲೆ ಕಾಗೆ ಕೂತಿದ್ದ ‘ಎಕ್ಸ್ಕ್ಲೂಸಿವ್’ ವಿಜುವಲ್ ಕ್ಯಾಚ್ ಮಾಡಿದ್ದ ಚಾನೆಲ್‌ಗಳು, ಸಿದ್ದರಾಮಯ್ಯ ಕಾರು ಬದಲಿಸಿದಾಗ, ಕಾಗೆಗೆ ಹೆದರಿ ಕಾರು ಬದಲಿಸಿದ ಸಮಾಜವಾದಿ ಎಂದೆಲ್ಲ ಲೇವಡಿ ಮಾಡಿದ್ದವು. ಮೂಢ ನಂಬಿಕೆಗಳನ್ನು ಪುಟ್ಟಾಪೂರಾ ವಿರೋಧಿಸುವ ಸಿದ್ದರಾಮಯ್ಯ ಆಡಳಿತಾತ್ಮಕ ಕಾರಣದಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಕಾರು ಬದಲಾಯಿಸಿದ್ದರು. ಆದರೆ ಗೂಬೆಗಳಿಗೆ ಕಣ್ಣಿಗೆ ಕಾಗೆ ಮಾತ್ರ ಕಂಡಿತ್ತು.
ನಂತರವೂ ಶಕ್ತಿಸೌಧದಲ್ಲಿ ಕಾಗೆ, ಸಿದ್ದರಾಮಯ್ಯ ಕುರ್ಚಿಗೆ ಆಪತ್ತು ಎಂದೆಲ್ಲ ಕಾವ್ ಕಾವ್ ಮಾಡಲಾಗಿತ್ತು. ಪುಣ್ಯಕ್ಕೆ, ಸಿದ್ದರಾಮಯ್ಯ ಕಾರ್ ಮೇಲೆ ಕೂತಿದ್ದ ಕಾಗೆಯೇ ಮೊನ್ನೆ ಬಜೆಟ್ ದಿನ ವಿಧಾನಸೌಧದಲ್ಲಿ ಅಲೆದಾಡುತ್ತಿತ್ತು ಎಂಬ ಬ್ರೇಕಿಂಗನ್ನು ಹೊಡೆದಿಲ್ಲ. ಈಗ ಅದನ್ನು ಮಾಡುತ್ತಾರೆ, ನೋಡ್ತಾ ಇರಿ!

ರಾಧಿಕಮ್ಮನ ಕಾಗೆಗೆ ಒಂದು ಬಲಿ

4 ವರ್ಷಗಳ ಕೆಳಗೆ ಟಿವಿ ಒಂಭತ್ತರಲ್ಲಿ ರಾಧಿಕಾ ಭಾರದ್ವಾಜರು ಮಟಮಟ ಮಧ್ಯಾಹ್ನ ಕಾಗೆಯ ಸುತ್ತಲೇ ಅರ್ಧ ತಾಸಿನ ಎಪಿಸೋಡು ಮಾಡಿ ಧನ್ಯರಾಗಿದ್ದರು. ಮೂವರು ಜ್ಯೋತಿಷಿಗಳನ್ನು ಕೂಡಿಸಿಕೊಂಡಿದ್ದ ರಾಧಿಕಮ್ಮ ಕಾಗೆ ಮುಟ್ಟಿದರೆ ಮನುಷ್ಯ ಸತ್ತಂತೆ, ಮನೆ ಹಾಳಾದಂತೆ ಎಂದೆಲ್ಲ ಭೋಂಗು ಬಿಟ್ಟರು. ಯಾವುದೇ ವ್ಯಕ್ತಿಯ ಮೇಲೆ ಕಾಗೆ ಕುಳಿತರೆ ಆತನ/ಆಕೆಯ ತಾಯಿಗೆ ಮರಣ ಇಲ್ಲವೇ ಆತ/ಆಕೆಯೇ ಸಾವಿಗೆ ಈಡಾಗುತ್ತಾರೆ ಎಂದೆಲ್ಲ ಕಾವ್ ಕಾವ್ ಎಂದು ಅರಚಲಾಗಿತ್ತು.

ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಅಪ್ರೆಂಟಿಸ್ ಮಾಡುತ್ತಿದ್ದ ಲಕ್ಷ್ಮೇಶ್ವರದ ಯುವಕ ತನ್ನ ತಲೆ ಮೇಲೆ ಕಾಗೆ ಕೂತಿದ್ದಕ್ಕೆ ಚಿಂತಕ್ರಾಂತನಾಗಿ, ತನ್ನ ತಾಯಿಗೆ ಏನೂ ಆಗಬಾರದೆಂದು ಆತ್ಮಹತ್ಯೆ ಮಾಡಿಕೊಡಿದ್ದ. ಪೊಲೀಸರು ಸರಿಯಾದ ತನಿಖೆ ಮಾಡಿದ್ದರೆ ರಾಧಿಕಮ್ಮ ಮತ್ತು ಜೊತೆಗಿದ್ದ ಜ್ಯೋತಿಷಿ ಕಾಗೆಗಳೆಲ್ಲ ಜೈಲೂಟ ತನ್ನಬೇಕಾಗುತ್ತಿತ್ತೇನೋ?

ಆನರಲ್ಲಿ ವೈಜ್ಞಾನಿಕ ಮನೋಭಾವ ತುಂಬ ಬೇಕಾದ ಚಾನೆಲ್‌ಗಳು ಮುಂಜಾನೆ ಎದ್ದ ಕೂಡಲೇ ಜ್ಯೋತಿಷಿಗಳಿಗೆ ಚಾನೆಲ್ ಅನ್ನೇ ಮಾರಿಕೊಳ್ಳುವುದು ಅಸಹ್ಯಕರ. ಇದರ ಜೊತೆಗೆ ಕಾಗೆ, ಗಡಿಯಾರದ ಬ್ರೇಕಿಂಗುಗಳು ಬೇರೆ. ಟಿಆರ್‌ಪಿಗಾಗಿ ಕಾಗೆಯನ್ನೇ ಸಾಕಿ, ಅದನ್ನು ಎಲ್ಲಿ ಬೇಕಲ್ಲಿ ಕೂಡಿಸಿ ಬ್ರೇಕಿಂಗು ಕೊಡಲೂ ಹೇಸಲಾರವು ಈ ನ್ಯೂಸ್ ಚಾನೆಲ್‌ಗಳು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...