Homeಸಾಮಾಜಿಕಕೆಆರ್‍ಎಸ್ ಬುಡದಲ್ಲಿ ಗಣಿಗಾರಿಕೆ ಕಂಪನ

ಕೆಆರ್‍ಎಸ್ ಬುಡದಲ್ಲಿ ಗಣಿಗಾರಿಕೆ ಕಂಪನ

- Advertisement -
- Advertisement -

ಸೋಮಶೇಖರ್ ಚಲ್ಯ |

ಸ್ವಾತಂತ್ರ್ಯಾ ನಂತರದಲ್ಲಿ ಕಾವೇರಿ ಸಮಸ್ಯೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಬಿಕ್ಕಟ್ಟಾಗಿಯೇ ಉಳಿದಿರುವುದರಿಂದ ಮೈಸೂರು-ಮಂಡ್ಯ ಭಾಗದ ಜನರ ಮನದಲ್ಲಿ ಕೃಷ್ಣರಾಜಸಾಗರವು ಭಾವನಾತ್ಮಕವಾಗಿ ಉಳಿದಿರುವುದು ವಿಶೇಷವೇನೂ ಅಲ್ಲ. ಅದರೆ ಈ ಸೆಂಟಿಮೆಂಟು ಕಾವೇರಿ ನದಿ ತೀರದ ಮರಳು ಗಣಿಗಾರಿಕೆಗೇನೂ ಕಡಿವಾಣ ಹಾಕಲಿಲ್ಲ. ಮರಳು ಮಾಫಿಯಾವನ್ನು ತಡೆಗಟ್ಟುವ ಹೋರಾಟಗಳು ಎಂದೂ ಈ ಭಾಗದಲ್ಲಿ ಭುಗಿಲೇಳಲಿಲ್ಲ.ಕೆಲವೇ ಕೆಲವರು ನಡೆಸಿದ ಪ್ರಯತ್ನದಿಂದಾಗಿ ಮರಳು ದಂದೆಕೋರರನ್ನು ನಿಗ್ರಹಿಸುವ ಸಾಹಸ ನಡೆದಿತ್ತು. ಆದರೆ ಇಂದಿಗೂ ಮರಳಿನ ದಂಧೆಗೆ ಸಂಪೂರ್ಣವಾಗಿ ಫುಲ್‍ಸ್ಟಾಪ್ ಇಟ್ಟಿಲ್ಲವೆಂಬ ಅಸಮಾಧಾನ ಇರುವ ಬೆನ್ನಲ್ಲೇ ಮತ್ತೊಂದು ಕಲ್ಲುಗಣಿಗಾರಿಕೆಯ ಭೂತ ಬೆನ್ನತ್ತಿದೆ.

ದಕ್ಷಿಣ ಕರ್ನಾಟಕದಲ್ಲಿ ಸೈಲೆಂಟಾಗಿಯೇ ಮರಳು ಮತ್ತು ಕಲ್ಲು ಗಣಿಗಾರಿಕೆಯ ಮಾಫಿಯಾ ಗುದ್ದು ಕೊಡುತ್ತಿದೆ. ಈ ಮೈನಿಂಗ್ ಮಾಫಿಯಾದಲ್ಲಿ ಕಳೆದೆರಡು ದಶಕಗಳಿಂದ ಮಂಡ್ಯ ಸುದ್ದಿಯಾಗುತ್ತಲೇ ಇದೆ.

ಇದೀಗ ದಕ್ಷಿಣ ಕರ್ನಾಟಕದ ಪ್ರಮುಖ ಜಿಲ್ಲೆಗಳ ಜನರಿಗೆ ನೀರುಣಿಸುತ್ತಾ, ರೈತದ ಬದುಕನ್ನು ಮುನ್ನಡೆಸುತ್ತಿರುವ ಕೆಆರ್‍ಎಸ್ ಜಲಾಶಯಕ್ಕೇ ಅಪಾಯವೊದಗಿದೆ. ಕೆಆರ್‍ಎಸ್‍ನಿಂದ 10.5ಕಿ.ಮೀ ದೂರದಲ್ಲಿರುವ ನೂರಾರು ಎಕರೆಯಲ್ಲಿರುವ ಬೇಬಿಬೆಟ್ಟದ ಕಾವಲಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಸ್ಫೋಟದಿಂದ ಹೊರಟ ಕಂಪನಗಳು ಇದೇ ಸೆಪ್ಟೆಂಬರ್ 25ರಂದು ಕೆಆರ್‍ಎಸ್ ಬುಡದಲ್ಲಿರುವ ಭೂಕಂಪ ಮಾಪನ ಯಂತ್ರದಲ್ಲಿ ದಾಖಲಾಗಿದೆ. ಕೆಆರ್‍ಎಸ್ ನಿರ್ಮಾಣವಾಗಿ ಇನ್ನೂ ಒಂದು ಶತಮಾನವೂ ಕಳೆದಿಲ್ಲ ಆದರೀಗ ಕೆಆರ್‍ಎಸ್ ಶಿಥಿಲೀಕರಣದ ಸುಳಿಗೆ ಸಿಲುಕುತ್ತಿದೆ.ಜಲಾಶಯ ನಿಂತಿರುವುದೇ ಸುತ್ತ-ಮುತ್ತಲ ಬೆಟ್ಟಗಳ ಆಧಾರದಿಂದ. ಅದೇ ಬೆಟ್ಟಗಳ ಸರಣಿಯ ಇನ್ನೊಂದು ಕಡೆ ಗುಡ್ಡ ಕರಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ.

ಆದರೆ ಈ ಕಂಪನ ಭೂಕಂಪವಲ್ಲ, ಹಾಗಾಗಿ ಅಂತಹ ತೊಂದರೆಯಿಲ್ಲ ಎಂಬ ವರದಿಯನ್ನು ನೈಸರ್ಗಿಕ ವಿಕೋಪ ಸಂಸ್ಥೆಯು ನೀಡಿ ಹಲವು ಎಚ್ಚರಿಕೆಯ ಮಾತುಗಳನ್ನು ಹೇಳಿದೆ. ಕೆಆರ್‍ಎಸ್ ಸುತ್ತಮುತ್ತಲ ಪ್ರದೇಶದಲ್ಲಿ ಮೆಗಾಬ್ಲಾಸ್ಟ್‍ಗೆ ಅನುಮತಿ ಇಲ್ಲದಿದ್ದರೂ ಬೇಬಿ ಬೆಟ್ಟದಲ್ಲಿ ಸಿಡಿಸಿದ ಮೆಗಾಬ್ಲಾಸ್ಟ್‍ನಿಂದಾಗಿ ಈ ಕಂಪನ ಉಂಟಾಗಿದೆ. ಈ ಸದ್ಯ ಅಪಾಯವಾಗಿಲ್ಲ ಎಂಬುದನ್ನು, ಮುಂದೆಯೂ ಅಪಾಯವಾಗುವುದಿಲ್ಲವೆಂದು ವ್ಯಾಖ್ಯಾನಿಸುತ್ತಿರುವ ಗಣಿ ಮಾಲೀಕರು ನಿರಂತರ ಲೂಟಿಗೆ ಮುಂದಾಗಿದ್ದಾರೆ.

ಈಗಾಗಲೇ 20 ವರ್ಷಗಳಿಂದ ನಡೆದು ಬಂದಿರುವ ಮೈನಿಂಗ್ ಮಾಫಿಯಾದಿಂದಾಗಿ ಜಲಾಶಯದ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿವಿದ್ದ ಪ್ರಾಣಿಸಂಕುಲ ಕ್ಷೀಣಿಸುತ್ತಾ ಬಂದಿದ್ದು ಪಕ್ಷಿಗಳ ತವರು ಮನೆಯಂತಿದ್ದ ಬೆಟ್ಟಗಳಿದ್ದ ಪ್ರದೇಶದಲ್ಲಿ ಅಂತರ್ಜಲವು ನೂರಾರು ಅಡಿಗಳ ಆಳಕ್ಕೆ ಇಳಿದುಹೋಗಿವೆ. ಪ್ರಾಣಿ-ಪಕ್ಷಿಗಳು ನೆಲೆಗಾಗಿ ಈ ಪ್ರದೇಶವನ್ನೇ ಬಿಟ್ಟುಹೋಗಿದ್ದು, ಅವುಗಳ ಅವಶೇಷಗಳನ್ನು ಕಾಣಲಾಗದ ಸ್ಥಿತಿ ಬೇಬಿ ಬೆಟ್ಟದಲ್ಲಿ ನಡೆಯುತ್ತಿದೆ. ಅದಷ್ಟೇ ಅಲ್ಲದೆ ಕೃಷಿಯನ್ನು ನಂಬಿದ್ದ ಜನಕ್ಕೆ ಪ್ರತಿನಿತ್ಯ ಧೂಳಿನ ಗಾಳಿಯೇ ಉಸಿರಾಟಕ್ಕೆ ಎನ್ನುವಂತಾಗಿದ್ದು, ಮೈನಿಂಗ್ ಏರಿಯಾದಲ್ಲಿ ಜನವಸತಿಯೂ ಕಷ್ಟವೆಂಬಂತಾಗಿದೆ. ಸಾವಿರಾರು ಜನ ಕೃಷಿ ತೊರೆದು ನಗರಗಳತ್ತ ಮುಖಮಾಡಲೂ ಕೂಡ ಕಾರಣವಾಗಿದೆ.

ಬೆರಳೆಣಿಕೆಯಷ್ಟು ಜನ ಲೈಸೆನ್ಸ್ ಪಡೆದು ಮಾಡುತ್ತಿರುವ ಮೈನಿಂಗ್ ಇದಾಗಿಲ್ಲ. ಕೆಆರ್‍ಎಸ್‍ನಿಂದ 20 ಕಿ.ಮೀ ದೂರದಲ್ಲಿ ಎರಡು ಮೂರು ಎಕರೆಗಳಲ್ಲಿ ಗಣಿಗಾರಿಕೆಗೆ ಪರ್ಮಿಷನ್ ಪಡೆದುಕೊಂಡಿದ್ದರೂ ಈಗ ಕೆಆರ್‍ಎಸ್ ಬುಡಕ್ಕೆ ಬಂದು ನಿಂತಿದೆ. ಅಷ್ಟೇ ಅಲ್ಲದೆ 170ಕ್ಕೂ ಹೆಚ್ಚು ಅಕ್ರಮ ಗಣಿಗಾರಿಕೆಗಳು ಈ ಭಾಗದಲ್ಲಿ ನಡೆಯುತ್ತಿವೆ. ಬೇಬಿಬೆಟ್ಟವೊಂದರಲ್ಲೇ 44 ಜೆಲ್ಲಿ ಕ್ರಶರ್‍ಗಳು ನಿಂತಿವೆ. ಇವಾವೂ ಹೊಟ್ಟೆ ಪಾಡಿಗಾಗಿ ಬೇರಾವುದೇ ಆಧಾರವಿಲ್ಲ ಎಂದು ಜೀವನಾಧಾರಕ್ಕಾಗಿ ಮಾಡುತ್ತಿರುವ ಗಣಿಗಾರಿಕೆಗಳಲ್ಲ. ಕೆಲವು ವ್ಯಕ್ತಿಗಳ ಸಂಪತ್ತಿನ ಕೇಂದ್ರೀಕರಣದ ದುರಾಸೆಯಿಂದ ಮಾಡಲಾಗುತ್ತಿರುವ ಲೂಟಿ.

ಇಂತಹ ಲೂಟಿಯಿಂದಾಗಿ ಸಾವಿರಾರು ಜನರ ಬದುಕು ಬೀದಿಪಾಲಾಗುವ ದಿನಗಳು ಕಣ್ಣೆದುರು ನಿಂತಿವೆ. ಹೀಗಾಗಿಯೇ ಕಳೆದ 15 ವರ್ಷಗಳಿಂದ ರೈತ ಹೋರಾಟಗಾರ ಮತ್ತು ಮಾಜಿ ಶಾಸಕ ದಿ.ಪುಟ್ಟಣ್ಣಯ್ಯ, ರೈತ ಸಂಘಗಳು ಕೆಆರ್‍ಎಸ್ ಉಳಿಸಿ-ಅಕ್ರಮಗಣಿಗಾರಿಕೆ ನಿಲ್ಲಿಸಿ ಎಂದು ಹೋರಾಟ ಮಾಡುತ್ತಾ ಬಂದಿದ್ದಾರೆ. ಆದರೆ ಈಗ ಅಕ್ರಮ ಗಣಿಗಾರಿಕೆ ಮಾತ್ರವಲ್ಲ ಸಕ್ರಮ ಗಣಿಗಾರಿಕೆಯನ್ನೂ ನಿಲ್ಲಿಸಿ ಎಂಬ ಕೂಗು ಭುಗಿಲೇಳುತ್ತಿದೆ.

ಈಗಾಗಲೇ ಇಂತಹ ಮೈನಿಂಗ್ ಮಾಫಿಯಾ, ದರೋಡೆ, ಲೂಟಿಗಳಂತಹ ಕಾರಣಗಳಿಂದಾಗಿ ದೇಶದ 36 ಜಲಾಶಯಗಳು ಶಿಥಿಲಗೊಂಡಿವೆ. ಹಾಗಾಗಿ 86 ವರ್ಷ ಹಳೆಯದಾದ ಕೆಆರ್‍ಎಸ್ ಕೂಡ ಈ ಪಟ್ಟಿಗೆ ಸೇರುವ ದಿನಗಳು ದೂರವಿಲ್ಲ. ಹಾಗಾಗಿ ಕೆಆರ್‍ಎಸ್ ಉಳಿವಿಗಾಗಿ 20ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆಯನ್ನು ನಡೆಸಲು ಬಿಡಬಾರದು ಎಂಬ ಕೂಗು ಕೇಳಿಬರುತ್ತಿದೆ. ಭೂವಿಜ್ಞಾನಿಗಳು ನೀಡಿರುವ ವರದಿಯನ್ನೇ ಆಧಾರವಾಗಿಟ್ಟುಕೊಂಡು ಮೈನಿಂಗ್ ಮಾಫಿಯಾದ ಪರವಾಗಿ ನಿಂತಿರುವುದು ಸಾಕ್ಷಾತ್ ಉಸ್ತುವಾರಿ ಸಚಿವರು. ಮೇಲುಕೋಟೆ ಕ್ಷೇತ್ರದ ಶಾಸಕರೂ ಆದ ಸಿ.ಎಸ್.ಪುಟ್ಟರಾಜು ಇದಕ್ಕಾಗಿ ಟೊಂಕಕಟ್ಟಿ ನಿಂತಿದ್ದಾರೆ. ಅದರಲ್ಲೂ ಅವರ ಅಣ್ಣನ ಮಗ ಅಶೋಕ್ ಹೆಸರಿನಲ್ಲಿ ಮೈನಿಂಗ್ ಲೈಸೆನ್ಸ್ ಪಡೆದು ನಡೆಸುತ್ತಿರುವ ಗಣಿಗಾರಿಕೆಯು ಎಲ್ಲರಿಗೂ ತಿಳಿದಿರುವ ಸಂಗತಿ. ಕೆಆರ್‍ಎಸ್ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ಸಕ್ರಮ ಗಣಿಗಾರಿಕೆಗಳಲ್ಲಿ ಅತ್ಯುತ್ತಮ ಆಧುನಿಕ ಯಂತ್ರೋಪಕರಣಗಳನ್ನು ಒಳಗೊಂಡಿರುವ ಕ್ರಶರ್ ಪುಟ್ಟರಾಜುನ ಅಣ್ಣನ ಮಗನದ್ದೇ ಆಗಿದೆ. 10 ಕ್ರಶರ್‍ಗಳಿಂದಾಗುವಷ್ಟು ಕೆಲಸ ಈತನ ಒಂದೇ ಕ್ರಶರ್‍ನಲ್ಲಿ ನಡೆಯುತ್ತಿದೆ. ಹಾಗಾಗಿಯೇ ಮೈನಿಂಗ್ ಉಳಿಸಿಕೊಳ್ಳುವ ವಾದವನ್ನ ಮಣ್ಣಿನ ಮಕ್ಕಳ ಪಕ್ಷದಲ್ಲಿರುವ ಪ್ರಜಾಪ್ರತಿನಿಧಿ ಪುಟ್ಟರಾಜು ಮಾಡುತ್ತಿದ್ದಾರೆ.

ಇಷ್ಟೆಲ್ಲ ಅವಾಂತರಗಳಿಂದ ಕೆಆರ್‍ಎಸ್ ಉಳಿವಿಗೇ ಕುತ್ತು ಬಂದಿದ್ದರೆ, ಮೈನಿಂಗ್ ಮಾಫಿಯಾಕ್ಕೆ ಫುಲ್‍ಸ್ಟಾಪ್ ಇಡುವಂತಹ ಕೆಲಸಕ್ಕೆ ಯೋಜನೆ ಮಾಡಬೇಕಾದ ರಾಜ್ಯ ಸರ್ಕಾರ ಕೆಆರ್‍ಎಸ್ ಎದುರು ಕಾವೇರಿ ಪ್ರತಿಮೆ ನಿಲ್ಲಿಸುವ ತರಾತುರಿಯಲ್ಲಿದೆ. ಇದು ಸರ್ಕಾರದ ಬೊಕ್ಕಸದಿಂದ ದುಡ್ಡು ಬಾಚುವ ಹುನ್ನಾರವೇ ಹೊರತು ಮತ್ತೇನು ಅಲ್ಲ. ಮಣ್ಣಿನ ಮಕ್ಕಳೆಂದು ಹಣೆಪಟ್ಟಿ ಕಟ್ಟಿಕೊಂಡಿರುವ, ಮೈತ್ರಿ ಸರ್ಕಾರದ ಚುಕ್ಕಾಣಿ ಹಿಡಿದಿರುವ ಜೆಡಿಎಸ್ ನಾಯಕರು ಕೆಆರ್‍ಎಸ್ ಉಳಿವಿಗಾಗಿ ಸೂಕ್ತ ಕ್ರಮಗಳನ್ನು ಕೈಗೊಂಡು, ಅಣೆಕಟ್ಟೆಯ ಸುತ್ತಲಿನ 20 ಕಿ.ಮೀ ವ್ಯಾಪ್ತಿಯ ಗಣಿಗಾರಿಕೆಗೆ ಇತಿಶ್ರೀ ಹಾಕುವ ಕೆಲಸಕ್ಕೆ ಮುಂದಾಗಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...