ಮಾಚಯ್ಯ |
2018ರ ವಿಧಾನಸಭಾ ಫಲಿತಾಂಶ ಹೇರಿರುವ ಅನಿಶ್ಚಿತತೆ ನಿಧಾನಕ್ಕೆ ರಾಜ್ಯವನ್ನು ಜಾತಿ ಕದನದ ಅಖಾಡವಾಗಿಸುವ ಅಪಾಯದತ್ತ ತಳ್ಳುತ್ತಿದೆ. ಇದಕ್ಕೆ ಮುನ್ನುಡಿ ಬರೆಯುತ್ತಿರೋದು ಬಿಜೆಪಿ! ಯಾವಾಗ ತಮಗೆ ಸ್ಪಷ್ಟ ಬಹುಮತ ಬರಲಿಲ್ಲ ಅನ್ನೋದು ಖಾತ್ರಿ ಆಯ್ತೋ, ಆಗ ಆಪರೇಷನ್ ಕಮಲ ಮಾಡಲು ಹೋಗಿ ವಿಲವಿಲ ಹೊದ್ದಾಡಿದರೂ ವಾಮ ಮಾರ್ಗದಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಷ್ಟೇ ಅಲ್ಲ ಶತಾಯಗತಾಯ ಆ ಅಧಿಕಾರವನ್ನು ಉಳಿಸಿಕೊಳ್ಳಲು ಜಾತಿ ರಾಜಕಾರಣಕ್ಕೆ ಚಾಲನೆ ನೀಡಿದೆ. ಯಡ್ಯೂರಪ್ಪರನ್ನು ಸಿಎಂ ಮಾಡಿರುವ ಬಿಜೆಪಿ, ಇದೀಗ ಅವರ ಮೂಲಕ ಲಿಂಗಾಯತ ಟ್ರಂಪ್ ಕಾರ್ಡ್ ಬಳಸಲು ಮುಂದಾಗಿದೆ. ಇತರೆ ಪಕ್ಷಗಳು ಅವರನ್ನು ಕಾನೂನಾತ್ಮಕ ಕಾರಣಕ್ಕೆ ಕೆಳಗಿಳಿಸಲು ಮುಂದಾದರೂ, ಆ ಪ್ರಯತ್ನ ಮಾಡುತ್ತಿರುವ ಪಕ್ಷ ಲಿಂಗಾಯತರಿಂದ ಅಧಿಕಾರ ಕಿತ್ತುಕೊಳ್ಳಲು ಹವಣಿಸುತ್ತಿದೆ ಎಂಬ ಸುದ್ದಿಗೆ ಜನ್ಮ ನೀಡಲು ಬೇಕಾದ ತಯಾರಿಗಳನ್ನೆಲ್ಲ ಮಾಡಿಕೊಂಡಿದೆ.
ಅದಕ್ಕಾಗೇ ಪ್ರಕಾಶ್ ಜಾವ್ಡೇಕರ್ ಕಾಂಗ್ರೆಸ್ಸಿನಲ್ಲಿರುವ 14 ಮಂದಿ ಲಿಂಗಾಯತ ಶಾಸಕರ ಬಗ್ಗೆ ನಿರ್ದಿಷ್ಟವಾಗಿ ಉಲ್ಲೇಖಿಸಿ ಅವರು ಬೆಂಬಲ ನೀಡುತ್ತಾರೆ ಎಂಬ ಗೊಂದಲ ಸೃಷ್ಟಿಸಿದರೆ, ಸಿಎಂ ಹುದ್ದೆ ಯಾವ ಕ್ಷಣದಲ್ಲಾದರು ಕೈಬಿಟ್ಟುಹೋಗುವ ಆತಂಕದ ನಡುವೆಯೂ ತರಾತುರಿಯಲ್ಲಿ ಯಡ್ಯೂರಪ್ಪ ಸಿದ್ದಗಂಗಾ ಮಠವನ್ನು ಎಡತಾಕಿ ತಮ್ಮ ಅಧಿಕಾರ ಪದಗ್ರಹಣಕ್ಕೆ ಲಿಂಗಾಯತ ಲೇಪ ಹಚ್ಚಲು ನೋಡಿದ್ದರು. ಈ ಹಿಂದೆ ವೀರೇಂದ್ರ ಪಾಟೀಲರನ್ನು ಕೆಳಗಿಳಿಸಿದ ಕಾರಣಕ್ಕೆ ಲಿಂಗಾಯತರು ಸಾರಾಸಗಟಾಗಿ ಕಾಂಗ್ರೆಸ್ ವಿರುದ್ಧ ಇಲ್ಲಿಯವರೆಗೂ ತಿರುಗಿ ಬಿದ್ದಿರುವ ಇತಿಹಾಸ ಬಿಜೆಪಿಯನ್ನು ಇಂಥಾ ತಂತ್ರಗಾರಿಕೆಗೆ ಪ್ರಚೋದಿಸುತ್ತಿದೆ. ಇಂಥಾ ಜಾತಿ ತಂತ್ರಕ್ಕೆ ಅಪಾಯಕಾರಿ ಸೈಡ್ ಎಫೆಕ್ಟ್ ಇರೋದು ಪ್ರಜ್ಞಾವಂತರನ್ನು ಆತಂಕಕ್ಕೆ ತಳ್ಳಿದೆ. ಈ ಪ್ರಯತ್ನದಲ್ಲಿ ಸಿಎಂ ಹುದ್ದೆಯ ಸನಿಹದಲ್ಲಿದ್ದ ಒಕ್ಕಲಿಗ ಸಮುದಾಯದ ಕುಮಾರಸ್ವಾಮಿಗೆ ಲಿಂಗಾಯತರ ಯಡ್ಯೂರಪ್ಪನಿಂದ ಅನ್ಯಾಯವಾಗುತ್ತಿದೆ ಎಂಬ ಸಂದೇಶ ಹಳೇ ಮೈಸೂರು ಭಾಗದಲ್ಲಿ ಈಗಾಗಲೇ ಹರಿದಾಡಲು ಶುರುವಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಯಿಂದ ಮುಖ್ಯಮಂತ್ರಿ ಗಾದಿ ಸಿಗುವಂತ ಸನ್ನಿವೇಶ ನಿರ್ಮಾಣವಾದಾಗ ಬಿಜೆಪಿಯ ಐಟಿ ಸೆಲ್ಲು ಮೊದಲೇ ಪ್ಲ್ಯಾನ್ ಮಾಡಿಕೊಂಡಂತೆ ದೇವೇಗೌಡ ಮತ್ತು ಕುಮಾರಸ್ವಾಮಿಗಳ ಫೋಟೊಗೆ `ಲಿಂಗಾಯತರು ಮುಖ್ಯಮಂತ್ರಿ ಆಗೋದನ್ನು ತಪ್ಪಿಸುತ್ತಿರುವ ಇವರು ಲಿಂಗಾಯತ ವಿರೋಧಿಗಳು’ ಎಂವ ವಾಟ್ಸಾಪ್ ಸಂದೇಶಗಳು ಹರಿದಾಡಲು ಶುರುವಾಗಿವೆ. ಮುಂದಿನ ದಿನಗಳಲ್ಲಿ ಇದು ಎರಡು ಬಲಾಢ್ಯ ಸಮುದಾಯಗಳ ನಡುವಿನ ಕಾದಾಟಕ್ಕೆ ನಾಂದಿಯಾದರೂ ಅಚ್ಚರಿಯಿಲ್ಲ. ಇದು ಕರ್ನಾಟಕದ ಭವಿಷ್ಯದ ದೃಷ್ಟಿಯಿಂದ ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ.