Homeರಾಜಕೀಯಊರೂರು ನುಂಗುತ್ತಿರುವ ಕಡಲ ಮುಂದೆ ಆಡಳಿತಗಾರರ ಪಿಟೀಲು!

ಊರೂರು ನುಂಗುತ್ತಿರುವ ಕಡಲ ಮುಂದೆ ಆಡಳಿತಗಾರರ ಪಿಟೀಲು!

- Advertisement -
- Advertisement -

 ಶುದ್ದೋಧನ|

ಅರಬ್ಬೀ ಸಮುದ್ರದ ತೀರದಲ್ಲಿರುವ ಉತ್ತರ ಕನ್ನಡದ ಐದೂ ತಾಲ್ಲೂಕುಗಳಲ್ಲಿ ಕಡಲು ಕೊರೆತ ಭೂತ ಬೆನ್ನಿಗೆ ಬಿದ್ದು ಕಾಡುತ್ತಿದೆ. ಮಳೆಗಾಲ ಬಂತೆಂದರೆ ಸಾಕು; ಕಡಲತಡಿಯ ಮಂದಿ ಜೀವಭಯದಿಂದ ತತ್ತರಿಸುತ್ತಾರೆ. ಕಡಲಿನ ಹೆಬ್ಬಲೆಗಳು ಯಾವ ಗಳಿಗೆಯಲ್ಲಿ ತೋಟ-ಮನೆಗೆ ನುಗ್ಗಿ ಆಪೋಷನ ಪಡೆಯುತ್ತವೆಯೋ ಎಂಬ ಚಡಪಡಿಕೆ ಶುರುವಾಗುತ್ತದೆ. ರಾತ್ರಿಯಿಡೀ ನಿದ್ದೆ ಮಾಡದೆ ಎದ್ದು ಕೂರುವ ಪರಿಸ್ಥಿತಿ. ಮಳೆಗಾಲ ಎಂದರೆ ಸಮುದ್ರ ದಂಡೆಯ ಜನರ ಪಾಲಿಗೆ ಬದುಕು ಬರ್ಬಾದ್ ಆಗುವ ಆತಂಕದ ಕಾಲ!! ಈ ಕಡಲುಕೊರೆತವನ್ನು ಜಿಲ್ಲೆಯ ಆಳುವ ವರ್ಗ ಗಂಭೀರವಾಗಿ ಪರಿಗಣಿಸಿಲ್ಲ. ಈ ಎರಡು ದಶಕದಲ್ಲಿ ಕಡಲುಕೊರೆತ ಕಾಮಗಾರಿ ಹೆಸರಲ್ಲಿ ಕೋಟಿಕೋಟಿ ನುಂಗಿ ಕುಬೇರರಾದ ಗುತ್ತಿಗೆದಾರ-ಇಂಜಿನಿಯರ್-ರಾಜಕಾರಣಿಗಳ ದೊಡ್ಡ ದಂಡೇ ಇದೆ.

ಜಿಲ್ಲೆಯ ಮಂತ್ರಿ, ಸಂಸದ-ಶಾಸಕರಿಗೆ ತಂತಮ್ಮ ಕ್ಷೇತ್ರದ ಕಡಲು ಕೊರೆತ ಶಾಶ್ವತವಾಗಿ ನಿಲ್ಲಿಸಿ ಜನರಿಗೆ ನೆಮ್ಮದಿ ಕೊಡಬೇಕೆಂಬ ಕನಿಷ್ಠ ಕಾಳಜಿಯೂ ಇಲ್ಲ. ಬೇಸಿಗೆಯಲ್ಲೇ ಸಮುದ್ರ ದಾಳಿ ಆಗಬಹುದಾದ ಏರಿಯಾದ ಸ್ಪಷ್ಟ ಕಲ್ಪನೆ, ಮಾಹಿತಿಯಿದ್ದರೂ ಜಿಲ್ಲಾಡಳಿತ ಉದಾಸೀನದಿಂದಲೇ ಉಳಿದುಬಿಡುತ್ತದೆ. ಯಾವಾಗ ಮಳೆ ಜೋರಾಗುತ್ತದೋ ಆಗ ಅಲೆಗಳ ಅಬ್ಬರ ಕಡಲತಡಿಯವರನ್ನು ದಿಕ್ಕೆಡಿಸುತ್ತದೆ. ಜನರ ಚೀತ್ಕಾರ ಆರಂಭವಾದಾಗ ಸಂಬಂಧಿಸಿದ ಅಧಿಕಾರಿ-ಶಾಸಕ-ಮಂತ್ರಿಗಳು ಕಣ್ಣೊರೆಸುವ “ಆಟ” ಆರಂಭಿಸುತ್ತಾರೆ. ಸಮುದ್ರಕ್ಕೆ ಕಲ್ಲುಹಾಕುವ ಬೋಗಸ್ ಕಾಮಗಾರಿ ಮಾಡಿ ಸಿಕ್ಕಷ್ಟು ಸ್ವಾಹಾ ಮಾಡುತ್ತಾರೆ. ಮುಂದಿನ ವರ್ಷಕ್ಕೆ ಪಿಡುಗು ಹಾಗೇ ಉಳಿಸುತ್ತಾರೆ.
ಪಕ್ಕದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಡಲ್ಕೊರೆತದ ಹಾವಳಿ ಇಲ್ಲವೆಂದಲ್ಲ. ಆದರೆ ಅಲ್ಲಿಯ ಆಳುವವರ್ಗ ಸವiಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ವಿಶೇಷ ಅನುದಾನ ತಂದು ತೊಂದರೆ ಮರುಕಳಿಸದಂತೆ ನಿಗಾ ವಹಿಸುತ್ತಿದೆ. ಇಂಥ ಇಚ್ಛಾಶಕ್ತಿ ಉತ್ತರಕನ್ನಡವು ಹೆತ್ತ ಜನಪ್ರತಿನಿಧಿ ಭೂಪರಿಗಿಲ್ಲ! ಹೀಗಾಗಿ ಜನಸಾಮಾನ್ಯರ ಜೀವನಕ್ಕಾಧಾರವಾದ ಗದ್ದೆ-ತೋಟ-ಬಾವಿ-ಕಸುಬಿಗೆಲ್ಲಾ ಉಪ್ಪು ನೀರು ನುಗ್ಗಿ ಬಂಜರಾಗುತ್ತಿದೆ; ಮನೆಗಳು ಕಣ್ಣೆದುರೇ ಕಡಲಲ್ಲಿ ಕರಗುತ್ತಿವೆ. ಕಲ್ಲು ಹೃದಯದ ಪಡಪೋಸಿ ಜನಪ್ರತಿನಿಧಿಗಳು ಏನೂ ಆಗಿಲ್ಲ ಎಂಬಂತೆ ಆರಾಮಾಗಿದ್ದರೆ.

ಆಳುವ ಮಂದಿಯ ಉದಾಸೀನ-ಹೊಣೆಗೇಡಿತನದಿಂದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ಕಡಲ್ಕೊರೆತದ ಆರ್ಭಟ ಜೋರಾಗುತ್ತಲೇ ಇದೆ. ಕಳೆದ ಮೂರು ವರ್ಷದಿಂದ ಅಂದಿನ-ಇಂದಿನ ಸಿಎಂಗಳು, ಸಂಸದರು, ಮಂತ್ರಿಗಳು, ಎಮ್ಮೆಲ್ಲೆಗಳಿಗೆಲ್ಲಾ ತಮ್ಮನ್ನು ಸಮುದ್ರದ ಬಾಯಿಂದ ಬಚಾವು ಮಾಡಿರೆಂದು ಮನವಿ ಮೇಲೆ ಮನವಿ ಮಾಡಿಕೊಳ್ಳುತ್ತಲೇ ಬಂದಿರುವ ಹೊನ್ನಾವರ ತಾಲ್ಲೂಕಿನ ಕರ್ಕಿ ಗ್ರಾಮದ ತೊಪ್ಪಲಕೇರಿ ಕಡಲು ಕಿನಾರೆಯ ಮಂದಿ ಅಳಲು ಅರಣ್ಯ ರೋದನದಂತೆ ಆಗಿರುವುದು ವ್ಯವಸ್ಥೆಯ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಂತಿದೆ.

ತೊಪ್ಪಲಕೇರಿಯ ಮನೆ-ಮರ-ಬಾವಿಗಳನ್ನೆಲ್ಲ ಸಮುದ್ರ ಒಂದೊಂದಾಗಿ ನುಂಗಲು ಶುರುಮಾಡಿ ಹಲವು ವರ್ಷವಾಗಿದೆ. ಮೂರು ವರ್ಷದ ಹಿಂದೆ ಅಲೆಗಳ ಆರ್ಭಟಕ್ಕೆ ಆ ಪುಟ್ಟ ಕೇರಿ ತತ್ತರಿಸಿಹೋಯಿತು. ಕಂಗಾಲಾದ ಜನ ಕಾಪಾಡಿ ಎಂದು ಜಿಲ್ಲಾಧಿಕಾರಿ, ಅಂದಿನ ಶಾಸಕಿ ಶಾರದಾ ಶೆಟ್ಟಿ, ಇಂದಿನ ಶಾಸಕ ದಿನಕರ ಶೆಟ್ಟಿ, ಸಂಸದ ಅನಂತ್ಮಾಣಿ, ಮಂತ್ರಿ ಮಹಾಶಯ ದೇಶ್‍ಪಾಂಡೆ, ಹಿಂದಿನ ಸಿಎಂ ಸಿದ್ಧು, ಇಂದಿನ ಸಿಎಂ ಕುಮ್ಮಿ ಕೈ-ಕಾಲು ಹಿಡಿದು ಅಂಗಲಾಚಿದರೂ ಪ್ರಯೋಜನವೇನೂ ಆಗಲಿಲ್ಲ. ರಾಜ್ಯದ ಮಾನವ ಹಕ್ಕು ಆಯೋಗಕ್ಕೆ ಪರಿಸ್ಥಿತಿಯ ಗಂಭೀರತೆ ಬಗ್ಗೆ ಮನವಿ ಕಳಿಸಿದರು. ದುರಂತವೆಂದರೆ ಮಾನವಹಕ್ಕು ಆಯೋಗಕ್ಕೂ ಈ ಮಂದಿಯ ಸಾವುಬದುಕಿನ ಹೋರಾಟ ಅರ್ಥವಾಗಲಿಲ್ಲ.

ತೊಪ್ಪಲಕೇರಿಯ ಜನರ ದೂರು ಸರ್ಕಾರಿ ಕಚೇರಿಗಳ ಟೇಬಲ್‍ನಿಂದ ಟೇಬಲ್‍ಗೆ ಹಾರಾಡಿತೇ ಹೊರತು ಜನಪರವಾಗಿ ಯಾರೂ ಚಿಂತಿಸಲಿಲ್ಲ. ಕೊನೆಗೊಮ್ಮೆ ಶಾಸಕ, ಎಸಿ, ತಹಸೀಲ್ದಾರ್ ತೊಪ್ಪಲಕೇರಿಗೆ ಬರುವುದು ಅನಿವಾರ್ಯವಾಯ್ತು. ಬಂದವರು ಜನರಿಗೆ ಸಾಂತ್ವನ ಹೇಳಲಿಲ್ಲ; ಪುನರ್ವಸತಿ ಬಗ್ಗೆ ಮಾತಾಡಲಿಲ್ಲ; ಸಮುದ್ರ ಕೊರೆತ ತಡೆಯುವ ಕಾಮಗಾರಿ ಆರಂಭಿಸುವ ಬಗ್ಗೆಯೂ ಭರವಸೆ ಕೊಡಲಿಲ್ಲ. ಬದಲಿಗೆ ನೊಂದವರನ್ನು ಇನ್ನಷ್ಟು ಧೃತಿಗೆಡಿಸುವ ಮಾತಾಡಿದರು. ಕಾಮಗಾರಿಗೆ ಹಣಕಾಸಿನ ಅಡಚಣೆಯಿದೆ; ಬಜೆಟ್‍ನಲ್ಲಿ ತೊಪ್ಪಲಕೇರಿ ಕಡಲ್‍ಕೊರೆತ ಸೇರಿಲ್ಲ ಎಂದು ಹೊಣೆಗೇಡಿತನ ಪ್ರದರ್ಶಿಸಿ ಹೋದರು.

ತೊಪ್ಪಲಕೇರಿಯ ಮಂದಿಯ ಅಳಲು ಹೃದಯವಿದ್ರಾವಕವಾಗಿದೆ. ರಾತ್ರಿ ಮಲಗಿದಾಗ ಮನೆ ಎಷ್ಟೊತ್ತಿಗೆ ಅಲೆಗಳ ಹೊಡೆತಕ್ಕೆ ಉರುಳುತ್ತದೋ ಗೊತ್ತಾಗುತ್ತಿಲ್ಲ. ಇಂಥ ಭಯದಲ್ಲಿ ಹೆಂಗಸರು, ಮಕ್ಕಳನ್ನು ಇಟ್ಟುಕೊಂಡು ರಾತ್ರಿ ಹೇಗೆ ಕಳೆಯಬೇಕು? ಪತ್ರಿಕೆ-ಟಿವಿಯಲ್ಲಿ ನಮ್ಮ ಪರಿಸ್ಥಿತಿ ಸುದ್ದಿಯಾದರೂ ಜಿಲ್ಲಾಡಳಿತಕ್ಕೆ, ಶಾಸಕನಿಗೆ, ಕನಿಷ್ಟ ಮಾನವ ಹಕ್ಕು ಆಯೋಗಕ್ಕೂ ಎಚ್ಚರ ಆಗಿಲ್ಲ ಎಂದು ಕಂಗೆಟ್ಟಿರುವ ಮಂದಿ ಹೇಳುತ್ತಾರೆ. ಮಾನವ ಹಕ್ಕು ಆಯೋಗದ ನಿರ್ಲಕ್ಷ ಧೋರಣೆಗೆ ಬೇಸತ್ತರೂ ನೊಂದವರು ಸರಣಿ ಪತ್ರ ಬರೆಯುತ್ತಲೇ ಇದ್ದರು. ಕೊನೆಗೊಂದು ದಿನ “ನಾವೆಲ್ಲ ಸತ್ತ ನಂತರ ಲೆಕ್ಕ ಮಾಡಲು ಬರ್ತೀರಾ, ಸರ್…” ಎಂದೂ ಪತ್ರ ಬರೆದರು. ಆದರೂ ಎಮ್ಮೆಲ್ಲೆಯಿಂದ ಹಿಡಿದು ಮುಖ್ಯಮಂತ್ರಿವರೆಗಿನ ಎಲ್ಲರೂ ಕಣ್ಣು-ಬಾಯಿ ಮುಚ್ಚಿಕೊಂಡೇ ಇದ್ದಾರೆ.

ಈಗ ತೊಪ್ಪಲಕೇರಿಯ ಕಡಲ ಗುಮ್ಮದ ಅಂಜಿಕೆಯಲ್ಲೇ ದಿನ ಕಳೆಯುತ್ತಿರುವ ಮಂದಿ ಕೊನೇ ಪ್ರಯತ್ನವೆಂದು ಪ್ರಧಾನಿ ಮೋದಿಗೆ ಕಾಪಾಡುವಂತೆ ಟ್ವೀಟ್ ಮಾಡಿದ್ದಾರೆ. ನಮೋ ಆ್ಯಪ್ ಮೂಲಕ ದೂರು ಕಳಿಸಿದ್ದಾರೆ. ಸಿಎಂ ಆಫೀಸಿನಲ್ಲೂ ಆ ಟ್ವೀಟ್‍ಗೆ ಸ್ಪಂದನೆ ಬಂದಿಲ್ಲ. ಕಡಲು ಮಾತ್ರ ಮುನ್ನುಗ್ಗಿ ಬರುತ್ತಲೇ ಇದೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...