| ನಾನುಗೌರಿ ಡೆಸ್ಕ್ |
ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಈಜಲು ಆಯ್ಕೆ ಮಾಡಿಕೊಂಡಿದೆ. ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕುರಿತು ಅತ್ಯಂತ ಹೆಚ್ಚು ಷೇರ್ ಆದ ಟ್ರೋಲ್ ಇದು. ಇದೇ ಜೂನ್ 11 ರಂದು ಭಾರೀ ಮಳೆಯಿಂದಾಗಿ ಕ್ರಿಕೆಟ್ ಅಂಗಳದ ತುಂಬ ನೀರು ತುಂಬಿದ್ದರಿಂದ ಮಾಡಿದ ವ್ಯಂಗ್ಯ ಇದಾಗಿತ್ತು.
ಆಡಿದ ನಾಲ್ಕು ಪಂದ್ಯ ಗೆದ್ದು ಮಳೆ ಮೊದಲ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ಎರಡನೇಯ ಸ್ಥಾನಕ್ಕೆ ಕುಸಿದಿದೆ ಎಂಬ ಜೋಕ್ ಸಹ ಮಾಡಲಾಯ್ತು. ಒಟ್ಟು ಇದುವರೆಗೆ ವಿಶ್ವಕಪ್ನಲ್ಲಿ 17 ಪಂದ್ಯಗಳು ನಡೆದರೆ ಅದರಲ್ಲಿ ಬರೋಬ್ಬರಿ 4 ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಇಂದು ಭಾರತ ಮತ್ತು ನ್ಯೂಜಿಲೆಂಡ್ ಘಟಾನುಘಟಿಗಳ ನಡುವೆ ನಡೆಯಬೇಕಿದ್ದ ಪಂದ್ಯ ಸಹ ಮಳೆಯಿಂದಾಗಿ ರದ್ದಾಗುವ ಅಪಾಯದಲ್ಲಿದೆ.
ವಿಶ್ವಕಪ್ ಟೂರ್ನಿಗೆ ತನ್ನದೇ ಮಹತ್ವವಿದೆ. ಎಲ್ಲಾ ದೇಶಗಳು ವಿಶ್ವಕಪ್ ಗೆದ್ದ ಚಾಂಪಿಯನ್ ಆಗಬೇಕೆಂದು ಹಂಬಲಿಸುತ್ತಿರುತ್ತಾರೆ. ಪ್ರತಿ ಪಂದ್ಯವೂ ಅವರಿಗೇ ಮಹತ್ವದ್ದೆ. ಆದರೆ ಮಳೆಗೆ ಇದ್ಯಾವುದರ ಪರಿವೇಯು ಇಲ್ಲದೇ ಮನಬಂದಂತೆ ಸುರಿದ ಆಟಗಾರರ ಕನಸು ತೊಯ್ದುಬಿಡುತ್ತಿದೆ.
ಇನ್ನು ಅಭಿಮಾನಿಗಳಂತೂ ಎಷ್ಟೋ ದಿನ ಮೊದಲೇ ವಿಶ್ವಕಪ್ ಪಂದ್ಯ ನೋಡಲು ಟಿಕೇಟ್ ಬುಕ್ ಮಾಡಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದವರೂ ತೀವ್ರ ನಿರಾಶೆ ಕಾಡುತ್ತಿದೆ. ದುಡ್ಡು ಕೊಟ್ಟು, ರಜೆಹಾಕಿ ಕ್ರಿಕೆಟ್ ಅಂಗಳಕ್ಕೆ ಹೋದರೆ ಮಳೆಯಲ್ಲಿ ನೆನದು ಕಾದು ಸುಸ್ತಾಗಿ ಭಾರವಾದ ಹೆಜ್ಜೆಗಳನ್ನಿಟ್ಟು ವಾಪಸ್ ಮನೆಗೆ ಧಾವಿಸಬೇಕಾಗ ಪರಿಸ್ಥಿತಿ ಬಂದಿದೆ.
ಯಾಕೀಗೆ ಆಗುತ್ತಿದೆ? ಈ ಮುಂಚೆ ಆಗದ್ದು ವಿಶ್ವಕಪ್ ನಡೆಯುವಾಗಲೇ ಹೀಗೇಕೆ ಇಷ್ಟು ಮಳೆ ಸುರಿಯುತ್ತಿದೆ? ಪ್ರಶ್ನೆಯಲ್ಲಿ ತಪ್ಪಿದೆ. ಅಂದರೆ ಮಳೆ ಸುರಿಯುವಾಗಲೇ ಏಕೆ ವಿಶ್ವಕಪ್ ಟೂರ್ನಿ ನಡೆಯುತ್ತಿದೆ? ಎಂಬುದು ಅಸಲಿ ಪ್ರಶ್ನೆಯಾಗಬೇಕಿದೆ. ಅಂದರೆ ಮಳೆಗಾಲದಲ್ಲಿ ಟೂರ್ನಿಮೆಂಟ್ ಆಯೋಜಿಸಿದ್ದು ಏಕೆ?
ಹೌದು ಕಳೆದೆರೆಡು ವಿಶ್ವಕಪ್ ಟೂರ್ನಿಗಳನ್ನು ನೋಡಿ ಬರೋಣ. ಭಾರತ ಚಾಂಪಿಯನ್ ಆದ 2011ರಲ್ಲಿ ಫೆಬ್ರವರಿ-ಮಾರ್ಚ್ ನಲ್ಲಿ ಟೂರ್ನಿಮೆಂಟ್ ನಡೆದಿದ್ದರೆ, 2015ರಲ್ಲಿಯೂ ಸಹ ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿಯೇ ಟೂರ್ನಿಮೆಂಟ್ ಸರಾಗವಾಗಿ ನಡೆದಿತ್ತು. ಆದರೆ ಈ ಬಾರಿ ಜೂನ್-ಜುಲೈನಲ್ಲಿ ಏಕೆ ಆಯೋಜಿಸಲಾಗಿದೆ ಗೊತ್ತೇ?
ತುಂಬಾ ತಲೆಕೆಡಿಸಿಕೊಳ್ಳುವುದು ಬೇಡ. ಈ ವರ್ಷ ಫೆಬ್ರವರಿ- ಮಾರ್ಚ್ನಲ್ಲಿ ಏನು ನಡೆಯಿತು ನೋಡಿ.. ಏನು ಘನಂದಾರಿ ಕೆಲಸವೇನಿರಲಿಲ್ಲ ಬದಲಿಗೆ ಐಪಿಎಲ್ ಎಂದ ಬಂಡವಾಳಿಗರ ಖಾಸಗಿ ಟೂರ್ನಿಮೆಂಟ್ ನಡಿದಿತ್ತು. ಹಾಗಾಗಿ ವಿಶ್ವಕಪ್ ಎಂಬ ಮಹತ್ವದ ಟೂರ್ನಿಯನ್ನೇ ಮುಂದೂಡಲಾಗಿದೆ. ಐಪಿಎಲ್ ಎಂಬುದು ಅಷ್ಟರಮಟ್ಟಿಗೆ ಬೆಳೆದುನಿಂತಿದೆ.
ಮಾರ್ಚ್ ಏಪ್ರಿಲ್ ನಲ್ಲಿ ಐಪಿಎಲ್ ಪಂದ್ಯಗಳು ನಡೆದ ಕಾರಣ ವಿಶ್ವಕಪ್ ಈ ಮಳೆಕಪ್ ಆಗಿದೆ ಅಷ್ಟೇ. ಮಳೆ ಈ ಮಟ್ಟಗೆ ಛಂಡಿ ಹಿಡಿದಿರುವುದು ನೋಡಿದರೆ ಮುಂದಿನ ಹಲವು ಪಂದ್ಯಗಳು ಸಹ ರದ್ದಾಗಬಹುದು. ಆಗ ಕ್ರಿಕೆಟ್ ಬದಲಿಗೆ ಈಜು ಸ್ಪರ್ಧೆಯೇ ನಡೆಯಬೇಕಾಗುತ್ತದೆ ಅಷ್ಟೇ.