ಅಧಿವೇಶನದಲ್ಲಿ ಸುದ್ದಿ ಮಾಧ್ಯಮಗಳಿಗೆ ನಿರ್ಬಂಧ ಕ್ರಮವನ್ನು ವಿರೋಧಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿವೇಶನದ ಸುದ್ದಿ ಪ್ರಸಾರ ಮಾಡುತ್ತಿದ್ದ ಖಾಸಗಿ ವಾಹಿನಿಗಳಿಗೆ ನಿಷೇಧ ಹೇರಿರುವ ಕ್ರಮ ಖಂಡನೀಯ. ವಿರೋಧ ಪಕ್ಷಗಳ ದನಿಯನ್ನು ದಮನಿಸಿ, ಆಡಳಿತ ಪಕ್ಷಕ್ಕೆ ನೆರವಾಗುವ ಉದ್ದೇಶದಿಂದಲೇ ಸ್ಪೀಕರ್ ಅವರು ಟಿವಿ ಚಾನೆಲ್ಗಳ ಕ್ಯಾಮೆರಾಗಳಿಗೆ ನಿರ್ಬಂಧ ಹೇರಿರುವುದು ಕಳೆದೆರಡು ದಿನಗಳ ಕಲಾಪದಿಂದ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ವಿಧಾನಸಭಾ ಕಲಾಪದಲ್ಲಿ ಪಾಲ್ಗೊಂಡ ಆಡಳಿತ ಪಕ್ಷದ ಸದಸ್ಯರು, ಸರ್ಕಾರದ ವೈಫಲ್ಯದ ಬಗ್ಗೆ ಆಡಿದ ಮಾತುಗಳು ಮತ್ತು ಅವರ ಮುಖಗಳನ್ನು ಸರ್ಕಾರಿ ಕೃಪಾಪೋಷಿತ ಡಿಡಿ ಚಂದನ ಸುದ್ದಿವಾಹಿನಿ ಸೆನ್ಸಾರ್ ಮಾಡಿ ಬಿತ್ತರಿಸುತ್ತಿರುವುದು ಖಂಡನೀಯ.
ಸ್ಪೀಕರ್ ಅವರು ಕ್ಲಾಸ್ ಟೀಚರ್ ಅಲ್ಲ, ನಾವು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೂ ಅಲ್ಲ. ಸ್ಪೀಕರ್ ಸದನದಲ್ಲಿ ಅಂಪೈರ್ ರೀತಿ ಇರಬೇಕು, ಅವರೇ ಆಟಗಾರರ ರೀತಿಯಲ್ಲಿ ಮೈದಾನಕ್ಕೆ ಇಳಿದರೆ ನಾವು ಆಟಗಾರರ ರೀತಿಯಲ್ಲಿಯೇ ಎದುರಿಸುತ್ತೇವೆ ಎಂದು ಚಾಟಿ ಬೀಸಿದರು.
ಸ್ಪೀಕರ್ ಕಾಗೇರಿಯವರ ಜತೆ ನನಗೆ ವೈಯಕ್ತಿಕ ಜಗಳವೇನಿಲ್ಲ. ವಿಧಾನಮಂಡಲದ ಶಿಷ್ಟಾಚಾರ-ನಡವಳಿಕೆಗಳ ಬಗ್ಗೆ ನನಗೂ ತಿಳಿದಿದೆ. ಆದರೆ ಅಧಿಕಾರ ವಹಿಸಿಕೊಂಡ ಕೂಡಲೇ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಮಾಡಿದ ಸ್ಪೀಕರ್, ಮೊದಲ ದಿನದಿಂದಲೇ ಬಿಜೆಪಿ ಸದಸ್ಯರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಖಂಡನೀಯ ಎಂದು ಗುಡುಗಿದರು.
ಮಾಧ್ಯಮದ ಮೇಲೆ ನಿರ್ಬಂಧ ಹೇರುವುದು, ಈ ದೇಶದ ಪ್ರಜೆಗಳಿಗೆ ನಮ್ಮ ಸಂವಿಧಾನವು ನೀಡಿರುವ ಹಕ್ಕುಗಳ ಉಲ್ಲಂಘನೆ. ಇದರ ವಿರುದ್ಧ ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳು ಇನ್ನೂ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕು.ಮಾಧ್ಯಮದ ಕೆಲವರು ಬಿ.ಜೆ.ಪಿ.ಯ ವಕ್ತಾರರಂತೆ ಮಾತನಾಡುತ್ತಿದ್ದರು. ಅಂತಹ ಕೆಲವರಿಗೆ ಬಿಜೆಪಿಯ ನಿಜವಾದ ಬಣ್ಣ ಈಗ ಗೊತ್ತಾಗಿರಬೇಕು.